ಕೊರೊನಾ ಭಯದ ನಡುವೆಯೂ ಬೆಣ್ಣೆನಗರಿಯಲ್ಲಿ ಲಕ್ಷ್ಮಿ ಹಬ್ಬ ಜೋರು
ದಾವಣಗೆರೆ, ಜುಲೈ 31: ಕೊರೊನಾ ಭಯದ ನಡುವೆಯೂ ವರಮಹಾಲಕ್ಷ್ಮಿ ಹಬ್ಬ ಬೆಣ್ಣೆನಗರಿಯಲ್ಲಿ ಜೋರಾಗಿ ನಡೆಯುತ್ತಿದೆ. ನಾಲ್ಕು ತಿಂಗಳಿಂದ ಮನೆಯೊಳಗೇ ಇದ್ದ ಜನರು ಈಗ ಹಬ್ಬದ ಖುಷಿಯಲ್ಲಿದ್ದಾರೆ.
ನಿನ್ನೆ ತಾನೆ ಜಿಲ್ಲೆಯಲ್ಲಿ ಕೊರೊನಾ ದ್ವಿಶತಕ ಬಾರಿಸಿದೆ. ಇದರ ಮಧ್ಯೆಯೇ ಇಂದು ಮುಂಜಾನೆ ಹಬ್ಬದ ಖರೀದಿ ಜೋರಾಗಿದೆ. ಹಣ್ಣು, ಹೂ, ತರಕಾರಿ, ಬಾಳೆಕಂಬ, ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳನ್ನು ಕೊಳ್ಳುವುದರಲ್ಲಿ ಜನ ಬ್ಯುಸಿಯಾಗಿದ್ದರು. ಮಾಸ್ಕ್ ಧರಿಸಿಯೇ ಹಬ್ಬದ ಶಾಪಿಂಗ್ ನಲ್ಲಿ ಜನರು ನಿರತರಾಗಿದ್ದು, ಸಾಮಾಜಿಕ ಅಂತರ ಮಾಯವಾಗಿತ್ತು. ಬೆಲೆ ಅದೇಷ್ಟೆ ಆದರೂ ಪರವಾಗಿಲ್ಲ ಹಬ್ಬವನ್ನು ಮಾತ್ರ ಸಂಭ್ರಮ ಸಡಗರದಿಂದ ಆಚರಣೆ ಮಾಡಬೇಕು ಎಂದು ಎಲ್ಲರೂ ಕೊಳ್ಳುವವರೇ ಆಗಿದ್ದರು.
ವರಮಹಾಲಕ್ಷ್ಮೀ: ಶ್ರದ್ದೆ, ಭಕ್ತಿ, ಸಂಪ್ರದಾಯದ ಮುಂದೆ ಕೊರೊನಾ ಧೂಳೀಪಟ
ನಗರದ ಹನುಮಂತಪ್ಪ ಕಲ್ಯಾಣ ಮಂಟಪದ ಪಕ್ಕದ ರಸ್ತೆ, ಕೆ.ಆರ್.ಮಾರುಕಟ್ಟೆ, ಗಡಿಯಾರ ಕಂಬ, ಕೆಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರುಗಡೆ ಇರುವ ಮಾರುಕಟ್ಟೆ, ಚಾಮರಾಜ ಪೇಟೆ ಸೇರಿದಂತೆ ನಗರದಲ್ಲಿರುವ ಎಲ್ಲಾ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿ ತುಳುಕಿದ್ದವು. ವಾಹನಗಳ ಓಡಾಟವೂ ತುಸು ಜೋರಾಗಿಯೇ ಇತ್ತು.
ಕೊರೊನಾ ಕಾರಣದಿಂದಾಗಿ ಹೂ ಬೆಳೆಗಾರರು ತಂತಮ್ಮ ಹೊಲಗಳಲ್ಲಿ ಹೆಚ್ಚಿನ ಹೂ ಬೆಳೆದಿಲ್ಲ. ಹಬ್ಬಕ್ಕೆ ಸರಿಯಾಗಿ ಫಸಲು ಬರುವಂತೆ ಸೇವಂತಿಗೆ, ಗುಲಾಬಿ ಮುಂತಾದ ಹೂಗಳನ್ನು ಬೆಳೆಯುತ್ತಿದ್ದವರೆಲ್ಲಾ ಮುಂದೇನಾಗುತ್ತೋ ಎನ್ನುವ ಭಯದಲ್ಲಿ ಅದನ್ನೆಲ್ಲಾ ಬಿಟ್ಟು ತರಕಾರಿ ಬೆಳೆದಿದ್ದಾರೆ. ಹಾಗಾಗಿ ಮಾರುಕಟ್ಟೆಗೆ ಬಂದ ಹೂವಿನ ಪ್ರಮಾಣವೇ ಕಡಿಮೆ. ಬೆಲೆಗಳು ಹೋಲ್ ಸೇಲ್ ನಲ್ಲೇ ಜಾಸ್ತಿ ಇದೆ.
ಬೆಲೆಗಳು ಹೆಚ್ಚಿದ್ದರೂ ಇದ್ದುದರಲ್ಲೇ ಸಂಭ್ರಮವಾಗಿ ಹಬ್ಬ ಮಾಡಲು ಮುಂದಾಗಿದ್ದಾರೆ ಜನ.