ವಾಲ್ಮೀಕಿ ಜಾತ್ರೆ: ಪ್ರಸನ್ನಾನಂದಪುರಿ ಸ್ವಾಮೀಜಿ, ಸಿಎಂ ನಡುವೆ ಮಾತಿನ ಚಕಮಕಿ
ದಾವಣಗೆರೆ, ಫೆಬ್ರವರಿ 9: ಇದೇ ಮಾರ್ಚ್ 9ರ ಒಳಗೆ ಮೀಸಲಾತಿ ಬೇಡಿಕೆ ಈಡೇರಿಸಿ, ಈಡೇರದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಶ್ರೀಗಳು ಸಿಎಂ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದರು.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಂಗಳವಾರ ನಡೆದ 3ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಬೃಹತ್ ಜನಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ವಾಲ್ಮೀಕಿ ಜಾತ್ರೆಯಲ್ಲಿ ಬಿ.ಎಸ್ ಯಡಿಯೂರಪ್ಪ ಮಾತು ಕೊಟ್ರೆ ತಪ್ಪಲ್ಲ ಎಂಬ ನಂಬಿಕೆ ಹೆಚ್ಚಾಗಿತ್ತು, ಯಾಕೆ ವಿಳಂಬ ಮಾಡ್ತಿದ್ದೀರೋ ಗೊತ್ತಿಲ್ಲ, ಮೀಸಲಾತಿ ಹೆಚ್ಚಳವಾದರೆ ಸಿಎಂಗೆ ಕೃತಜ್ಞತೆ, ಇಲ್ಲವಾದರೆ ಆಮರಣಾಂತ ಉಪವಾಸ ಮಾಡುತ್ತೇನೆ ಎಂದು ವಾಲ್ಮೀಕಿ ಶ್ರೀ ಬಹಿರಂಗವಾಗಿಯೇ ಹೇಳಿದರು.
ವಾಲ್ಮೀಕಿ ಮೀಸಲಾತಿ ಬೇಡಿಕೆಯನ್ನು ಅತೀ ಶೀಘ್ರದಲ್ಲೇ ಈಡೇರಿಸುವೆ: ಸಿಎಂ ಯಡಿಯೂರಪ್ಪ
ಈ ಹೋರಾಟದಲ್ಲಿ ನಾನೇನಾದರು ಸತ್ತರೆ... ಎಂದಾಕ್ಷಣ ಸಿಎಂ ಯಡಿಯೂರಪ್ಪ ಮಧ್ಯೆ ಪ್ರವೇಶಿಸಿ, ಈ ರೀತಿ ಮಾತನಾಡಬೇಡಿ ಎಂದು ಸ್ವಾಮೀಜಿ ನಡುವೆ ಮಾತಿನ ಚಕಮಕಿ ಕೂಡ ಆಯಿತು. ಬಳಿಕ ಮತ್ತೆ ಭಾಷಣ ಆರಂಭಿಸಿದ ವಾಲ್ಮೀಕಿ ಶ್ರೀ, ಈ ಹೋರಾಟದಲ್ಲಿ ನನ್ನ ಸ್ವಾರ್ಥವಿಲ್ಲ ಎಂದಾಕ್ಷಣ ಸಿಎಂ ಯಡಿಯೂರಪ್ಪ ಮೀಸಲಾತಿ ಹೆಚ್ಚಿಸುವ ಬಗ್ಗೆ ಆಶ್ವಾಸನೆ ನೀಡಿದ ಬಳಿಕ ಹೋರಾಟ ಹಾಗೂ ಸಾವಿನ ಹೇಳಿಕೆಯನ್ನು ವಾಲ್ಮೀಕಿ ಶ್ರೀಗಳು ವಾಪಸ್ಸು ಪಡೆದರು.
ನಂತರ ಶ್ರೀಗಳು ಸಾಮಾಜಿಕ ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ಸಮ್ಮಿಶ್ರ ಸರ್ಕಾರ ಅಧಿಕಾರದ ವೇಳೆ ಸಮುದಾಯದ ಹಿತಕ್ಕಾಗಿ ರಾಜೀನಾಮೆ ನೀಡಲು ನಮ್ಮ ಸಮುದಾಯದ ಶಾಸಕರು ಮುಂದಾಗಿದ್ದರು. ನಿವೃತ್ತ ನ್ಯಾ. ನಾಗಮೋಹನದಾಸ್ ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಅಂತ ಭರವಸೆ ನೀಡಿದಿರಿ, ಇತರರು ಏಕೆ ಸರ್ಕಾರದ ವಿಚಾರದಲ್ಲಿ ಮೃದು ಧೋರಣೆ ಅನ್ನುತಿದ್ದಾರೆ ಎಂದರು.
ನನಗೂ ಬಹಳ ಕಿರಿಕಿರಿ ಆಗುತ್ತಿದೆ, ಯಾಕೆ ಎಲ್ಲಾ ಸರ್ಕಾರಗಳು ನಮ್ಮ ಮನವಿಯನ್ನು ತಿರಸ್ಕರಿಸುತ್ತಿವೆ. ಹೆಂಡ, ಖಂಡ ಕೊಟ್ಟರೆ ಮತ ಹಾಕ್ತಾರೆಂಬ ಭಾವ ರಾಜಕಾರಣಿಗಳಲ್ಲಿದೆ. ಆದರೆ ಈ ಜಾತ್ರೆ ಇಡೀ ರಾಜ್ಯದ ವೈಚಾರಿಕ ಜಾಗೃತಿ ಜಾತ್ರೆ ಆಗಿದೆ. ಸರ್ಕಾರ ವಿಳಂಬ ಮಾಡ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಮತ್ತೆ ಹೋರಾಟ ಆರಂಭಿಸುವುದಾಗಿ ವಾಲ್ಮೀಕಿ ಶ್ರೀ ಸಿಎಂಗೆ ಎಚ್ಚರಿಕೆ ನೀಡಿದರು.