ಫೆ.8ರಿಂದ ಎರಡು ದಿನಗಳ ಕಾಲ ವಾಲ್ಮೀಕಿ ಜಾತ್ರಾ ಮಹೋತ್ಸವ
ದಾವಣಗೆರೆ, ಜನವರಿ 30: ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ 3ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವವು ಫೆ.8 ಹಾಗೂ 9 ರಂದು ಜರುಗಲಿದೆ ಎಂದು ಸಮಾಜದ ಮುಖಂಡ ಹೊದಿಗೆರೆ ರಮೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ ಜರುಗುವ ಸಮಾರಂಭದ ಮಹಾಮಂಟಪಕ್ಕೆ ಲಿ.ಜಗದ್ಗುರು ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ ಹೆಸರನ್ನಿಡಲಾಗಿದೆ. ಫೆ.1ರ ಬೆಳಗ್ಗೆ 10.30ಕ್ಕೆ ಶ್ರೀಗಳ ಸಾನಿಧ್ಯದಲ್ಲಿ ಹಂದರ ಕಂಬ ಪೂಜೆ ನೆರವೇರಲಿದೆ. ಫೆ.8 ರಂದು ಬೆಳಗ್ಗೆ 10ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದರು.
ಫೆ.7ರಂದು ಬೆಂಗಳೂರು ತಲುಪಲಿದೆ ಕುರುಬರ ಬೃಹತ್ ಪಾದಯಾತ್ರೆ
ಅಂದು ಬೆಳಗ್ಗೆ 8.30ಕ್ಕೆ ರಾಜನಹಳ್ಳಿ ಗ್ರಾಮದಿಂದ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ನಂತರ ಮಧ್ಯಾಹ್ನ 12ಕ್ಕೆ ಮಾತೆ ಶಬರಿ ಮಹಿಳಾ ಜಾಗೃತಿ ಸಮಾವೇಶ ಮತ್ತು 3ಕ್ಕೆ ವಾಲ್ಮೀಕಿ ನೌಕರರ ಸಮಾವೇಶ ನಡೆಯಲಿದೆ. ಅಂದು ಸಂಜೆ 5ಕ್ಕೆ ಚಿಂತನ-ಮಂಥನ ಜರುಗಲಿದೆ. ಬಳಿಕ ಸಂಜೆ 7ಕ್ಕೆ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಾತ್ರಿ 11 ಕ್ಕೆ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಿದೆ ಎಂದರು.
ಫೆ.9 ರ ಬೆಳಗ್ಗೆ ಧರ್ಮಗುರುಗಳಿಂದ ಧಾರ್ಮಿಕ ಸಭೆ ನಂತರ 12ಕ್ಕೆ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರು ಹಾಗೂ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಸಚಿವ ಬಿ.ಶ್ರೀರಾಮುಲು ಆಗಮಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಚಿತ್ರ ನಟರಾದ ಸುದೀಪ್, ಶಶಿಕುಮಾರ್ ಆಗಮಿಸಲಿದ್ದಾರೆ.
ವಾಲ್ಮೀಕಿ ಜಾತ್ರೆ ಅಂಗವಾಗಿ ಫೆ.5 ರಿಂದ 7ರವರೆಗೆ ಹರಿಹರದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ ಮತ್ತು ಫೆ.4 ರಂದು ಮಲೆಬೆನ್ನೂರಿನಿಂದ ಹರಿಹರ ಮಾರ್ಗವಾಗಿ ರಾಜನಹಳ್ಳಿಯವರೆಗೆ ಬೈಕ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎ.ಬಿ ರಾಮಚಂದ್ರಪ್ಪ, ಜಿಗಳಿ ಪ್ರಕಾಶ್, ರಘು ದೊಡ್ಡಮನಿ ಇದ್ದರು.