ದಾವಣಗೆರೆ ಯುವಕ ಸ್ಕಾಲರ್ ಶಿಪ್ನಲ್ಲೇ ಓದಿ, ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪಾಸ್
ದಾವಣಗೆರೆ, ಮೇ 30: ಸ್ಕಾಲರ್ ಶಿಪ್ ಪಡೆದು ಓದಿದ್ದ ದಾವಣಗೆರೆಯ ಅವಿನಾಶ್ ತಮ್ಮ ಮೊದಲ ಪ್ರಯತ್ನದಲ್ಲೇ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೇಯಲ್ಲಿ ದೇಶಕ್ಕೆ 31 ಹಾಗೂ ರಾಜ್ಯದಲ್ಲಿ ಮೊದಲ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಸೋಮವಾರ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಆಗುತ್ತಿದ್ದಂತೆಯೇ ದಾವಣಗೆರೆಯ ಕೆ. ಬಿ. ಬಡಾವಣೆಯಲ್ಲಿರುವ ಅವಿನಾಶ್ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಅವಿನಾಶ್ ರಾವ್ 31 ನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ವಿಷಯ ತಿಳಿಯುತ್ತಿದ್ದಂತೆಯೇ ಪೋಷಕರು, ಸಹೋದರಿಯರು ಪರಸ್ಪರ ಸಿಹಿ ತಿನ್ನಿಸಿ ಖುಷಿಪಟ್ಟರು.
UPSC Result: ಭಾರತೀಯ ನಾಗರಿಕ ಸೇವೆಗೆ ಕರ್ನಾಟಕದ 27 ಅಭ್ಯರ್ಥಿಗಳು ಆಯ್ಕೆ
ದಾವಣಗೆಯ ಕೆ. ಬಿ. ಬಡಾವಣೆಯ ಹೋಟೆಲ್ ಉದ್ಯಮಿ ವಿಠಲ್ ರಾವ್ ಹಾಗೂ ಸ್ಮಿತಾ ದಂಪತಿ ಪುತ್ರನಾದ ಅವಿನಾಶ್ ಬೆಂಗಳೂರಿನಲ್ಲಿದ್ದು ಓದಿಕೊಂಡೇ ಐಎಎಸ್ ಗೆ ತಯಾರಿಯನ್ನು ನಡೆಸಿದ್ದರು.
ಆಸಿಡ್ ದಾಳಿಗೊಳಗಾದವರಿಗೆ ಮನೆ ನೀಡಲು ಆದೇಶ: ಸಿಎಂ ಬಸವರಾಜ ಬೊಮ್ಮಾಯಿ
ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪಾಸ್
ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಬಾಪೂಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ತೋಳಹುಣಸೆಯ ಪಿಎಸ್ಎಸ್ಆರ್ ಶಾಲೆಯಲ್ಲಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು. ನಗರದ ಧವನ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ 5 ವರ್ಷಗಳ ಕಾನೂನು ಪದವಿ ಮುಗಿಸಿದಿದ್ದರು. ಎಲ್ಎಲ್ಬಿ ಮುಗಿಸಿ ಬೆಂಗಳೂರಿನ ವಿಜಯನಗರದಲ್ಲಿ ಐಎಎಸ್ ಕೋಚಿಂಗ್ ಪಡೆಯುತ್ತಿದ್ದ ಅವಿನಾಶ್ ರಾವ್ ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್ ಆಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲ ಕರ್ನಾಟಕಕ್ಕೆ ಮೊದಲ ರ್ಯಾಂಕ್ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಮೊದಲ ಪ್ರಯತ್ನದಲ್ಲೇ ಪಾಸ್ ಆಗಬೇಕೆಂಬ ಹೆಬ್ಬಯಕೆ
"ನನ್ನ ಮಗ ಯುಪಿಎಸ್ಸಿ ಯಲ್ಲಿ ರ್ಯಾಂಕ್ ಬಂದಿರುವುದು ತುಂಬಾನೇ ಖುಷಿ ಕೊಟ್ಟಿದೆ. ಆತ ಸತತ ಪ್ರಯತ್ನ, ಓದಿನತ್ತ ಗಮನಿಸಿದ್ದ. ಐಎಎಸ್ ತಯಾರಿಗಾಗಿ ಬೆಂಗಳೂರಿನಲ್ಲೇ ಇದ್ದ. ಮೊದಲ ಬಾರಿಗೆ ಪಾಸ್ ಆಗಬೇಕೆಂಬ ಹೆಬ್ಬಯಕೆ ಹೊಂದಿದ್ದ. ಆತನ ಈ ಸಾಧನೆ ನಮಗೆಲ್ಲಾ ಖುಷಿ ತಂದಿದೆ" ಎಂದು ಅವಿನಾಶ್ ರಾವ್ ತಂದೆ ವಿಠಲ ರಾವ್ ಸಂತಸ ವ್ಯಕ್ತಪಡಿಸಿದರು.
ಸ್ವಂತ ನಿರ್ಧಾರ, ನಮ್ಮ ಸಲಹೆ ಏನಿಲ್ಲ
"ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಬೇಕೆಂಬ ಅದಮ್ಯ ಬಯಕೆ ಅವಿನಾಶ್ನಲ್ಲಿತ್ತು. ಈ ಯಶಸ್ಸಿನ ಹಲವು ವರ್ಷಗಳ ಸತತ ಅಭ್ಯಾಸ, ಕಠಿಣ ಪರಿಶ್ರಮ ಅಡಗಿದೆ. ಆತನ ಎಲ್ಲಾ ಕನಸುಗಳಿಗೆ ನಮ್ಮ ಕುಟುಂಬ ಸಂಪೂರ್ಣವಾಗಿ ಬೆನ್ನೆಲುಬಾಗಿ ನಿಂತಿತ್ತು. ಅಜ್ಜ ಆನಂದರಾವ್, ದೊಡ್ಡಪ್ಪ ನಾಗರಾಜ್ ರಾವ್ ಅವರ ಸಹಕಾರವೂ ಇತ್ತು. ಆತನಿಗೆ ನಾವೇನೂ ಸಲಹೆ ನೀಡಿರಲಿಲ್ಲ. ಆತ ತೆಗೆದುಕೊಂಡ ನಿರ್ಧಾರಕ್ಕೆ ನಾವೆಲ್ಲರೂ ಬೆಂಬಲಿಸಿದೆವು. ಪರಿಣಾಮ ಈ ಫಲಿತಾಂಶ ಪಡೆಯಲು ಆತನಿಗೆ ಸಾಧ್ಯಾವಾಗಿದೆ" ಎಂದು ಮಾಧ್ಯಮದವರ ಜೊತೆ ಮಾತನಾಡುತ್ತಾ ವಿಠಲ್ ರಾವ್ ತಿಳಿಸಿದರು.
ಆರಂಭದಿಂದಲೂ ಹೊಟೇಲ್ ಉದ್ಯಮದ ಬಗ್ಗೆ ತಲೆಕೆಡಿಸಿಕೊಳ್ಳದ ಅವಿನಾಶ್, ಓದಿನ ಕಡೆಗೆ ಹೆಚ್ಚು ಗಮನ ನೀಡಿದ್ದರು. ತಂದೆ ಉದ್ಯಮಿಯಾಗಿದ್ದರೂ ಇತ್ತ ಗಮನ ಹರಿಸದೇ ಭಾರತೀಯ ವಿದೇಶ ಸೇವೆ ಅಂದರೆ ಐಎಫ್ಎಸ್ ಆಯ್ಕೆ ಮಾಡಿಕೊಂಡು ಈ ಸಾಧನೆ ಮಾಡಿರುವುದು ಮೆಚ್ಚುವಂಥದ್ದು ಎಂದು ಹೇಳಿದ್ದಾರೆ. ವಿಠಲ ರಾವ್ - ಸ್ಮಿತಾ ದಂಪತಿಗೆ ಅವಿನಾಶ್ ಹಾಗೂ ಅರ್ಪಿತಾ ಇಬ್ಬರು ಮಕ್ಕಳು. ಪುತ್ರಿ ಅರ್ಪಿತಾ ಎಂಬಿಬಿಎಸ್ ಪೂರ್ಣಗೊಳಿಸಿ ಈಗ ಎಂ. ಡಿ. ವಿದ್ಯಾಭ್ಯಾಸ ಮಾಡಲು ತಯಾರಿಯಲ್ಲಿ ತೊಡಗಿದ್ದಾರೆ.
ರಾಜ್ಯದ 27 ಅಭ್ಯರ್ಥಿಗಳು ಆಯ್ಕೆ
ಸೋಮವಾರ ಬಿಡುಗಡೆಯಾದ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶದಲ್ಲಿ ಕರ್ನಾಟಕದಿಂದ 27 ಅಭ್ಯರ್ಥಿಗಳು ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿದ್ದಾರೆ. ಶೃತಿ ಶರ್ಮಾ, ಅಂಕಿತಾ ಅಗರ್ವಾಲ್ ಮತ್ತು ಗಾಮಿನಿ ಸಿಂಗ್ಲಾ, ಐಶ್ವರ್ಯ ವರ್ಮಾ ಕ್ರಮವಾಗಿ ಮೊದಲ ನಾಲ್ಕು ರ್ಯಾಂಕ್ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಇಂಡಿಯಾ ಫರ್ ಐಎಎಸ್ ಅಕಾಡೆಮಿಯ 18 ಅಭ್ಯರ್ಥಿಗಳು ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರೆ.