ಜನರ ಮನೆಗೆ ತೆರಳಿ ಸಂಕಷ್ಟ ಆಲಿಸುವ ಹೊಸ ಪರಿಕಲ್ಪನೆ, ಏನಿದರ ವಿಶೇಷ?
ದಾವಣಗೆರೆ, ಆಗಸ್ಟ್ 01; ಜನರ ಬಳಿಗೆ ಜನಪ್ರತಿನಿಧಿಗಳು ಹೋಗುವುದಿಲ್ಲ, ಸಮಸ್ಯೆಗೆ ಸ್ಪಂದಿಸುವುದಿಲ್ಲ, ಎಲೆಕ್ಷನ್ ವೇಳೆ ಬರ್ತಾರೆ, ಮತ ಕೇಳ್ತಾರೆ. ಗೆದ್ದ ಬಳಿಕ ಇತ್ತ ತಿರುಗಿ ನೋಡಲ್ಲ ಎಂಬ ಆರೋಪಗಳು ಕೇಳಿಬರುವುದು ಸಾಮಾನ್ಯ. ಆದರೆ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಈ ಮಾತಿಗೆ ತದ್ವಿರುದ್ಧ. ತನ್ನ ವಾರ್ಡ್ನಲ್ಲಿ ಅಭಿವೃದ್ಧಿ ಕಾರ್ಯದ ಜೊತೆಗೆ ಒಂದು ಹೆಜ್ಜೆ ಮುಂದೆ ಹೋಗಿ ವಾರದಲ್ಲಿ ಒಂದು ದಿನ ಜನರ ಮನೆಗೆ ತೆರಳಿ ಸಂಕಷ್ಟ ಆಲಿಸುವ ಹೊಸ ಪರಿಕಲ್ಪನೆ ಹುಟ್ಟು ಹಾಕಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ.
ಇಂಥ ಕಾರ್ಯ ಮಾಡುತ್ತಿರುವುದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಮನೆ ಬರುವ ದಾವಣಗೆರೆ ಮಹಾನಗರ ಪಾಲಿಕೆಯ 38ನೇ ವಾರ್ಡ್ ಎಂಸಿಸಿ ಬಿ ಬ್ಲಾಕ್ನ ಕಾರ್ಪೊರೇಟರ್ ಗಡಿಗುಡಾಳ್ ಮಂಜುನಾಥ್. ಪ್ರತಿ ಭಾನುವಾರ ತನ್ನ ವಾರ್ಡ್ನ ಪ್ರಮುಖ ರಸ್ತೆಯಲ್ಲಿ ಬರುವ ಮನೆಗಳಿಗೆ ಹೋಗಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವುದು. ಇದಕ್ಕೆ 'ಮನೆ ಬಾಗಿಲಿಗೆ ನಿಮ್ಮ ಸೇವಕ' ಎಂಬ ಘೋಷವಾಕ್ಯ ನೀಡಲಾಗಿದೆ.
ಆಟೋ ಚಾಲಕರಿಗೆ 15 ದಿನಗಳ ಡೆಡ್ಲೈನ್ ಕೊಟ್ಟಿದ್ಯಾಕೆ ದಾವಣಗೆರೆ ಎಸ್ಪಿ?
ಎಂಸಿಸಿ ಬ್ಲಾಕ್ನ ವಾರ್ಡ್ಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ನಡೆಸುವ ಜೊತೆಗೆ ಜನರ ಮನ ಗೆದ್ದಿರುವ ಮಂಜುನಾಥ್ ರಾಜ್ಯ ಸರ್ಕಾರ ಒದಗಿಸಿದ್ದ ಕೋವಿಶೀಲ್ಡ್ ತಮ್ಮ ವಾರ್ಡ್ಗೆ ಸಿಗದಿದ್ದಾಗಲೂ ಅತ್ಯಂತ ಕಠಿಣ ಪರಿಶ್ರಮ ವಹಿಸಿ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸಹಕಾರದಿಂದ ಜನರಿಗೆ ಲಸಿಕೆ ಕೊಡಿಸುವ ಮೂಲಕ ಜನರ ಮನಸ್ಸು ಗೆದ್ದಿದ್ದರು. ಆ ಬಳಿಕ ಸರ್ಕಾರದ ವ್ಯಾಕ್ಸಿನ್ ತರಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ದಾವಣಗೆರೆ; ಇಬ್ಬರು ಮಹಿಳೆಯರ ಹತ್ಯೆ, ಕೊಳೆತ ಸ್ಥಿತಿಯಲ್ಲಿ ಪತ್ತೆ
ಯಾವ-ಯಾವ ಸಮಸ್ಯೆ; ಮನೆ ಬಾಗಿಲಿಗೆ ಆಯ್ಕೆ ಮಾಡಿದ ಪ್ರತಿನಿಧಿ ಬಂದಾಗ ಜನರು ಮೊದಲು ಹೇಳಿದ ಸಮಸ್ಯೆ ಬೀದಿ ನಾಯಿಗಳದ್ದು. ರಾತ್ರಿ ಹೊತ್ತು ಶ್ವಾನಗಳು ಘೀಳಿಡುವ ಶಬ್ಧಕ್ಕೆ ನಿದ್ರೆಯೇ ಬರಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಮಗುವಿಗೆ ನಾಯಿ ಕಚ್ಚಿಬಿಡುತ್ತದೆ. ಇದನ್ನು ನಿಯಂತ್ರಣ ಮಾಡಿ ಎಂಬ ಸಮಸ್ಯೆ. ನೀರಿನ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ ಸೇರಿದಂತೆ ವಿವಿಧ ರೀತಿಯ ದೂರುಗಳನ್ನು ಜನರು ಹೇಳಿದ್ದಾರೆ. ಸ್ಥಳದಲ್ಲಿದ್ದ ಪಾಲಿಕೆಯ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಪರಿಹರಿಸುವ ಭರವಸೆ ಕೊಟ್ಟಿದ್ದಾರೆ.
ದಾವಣಗೆರೆ; ಜೋಡೆತ್ತುಗಳ ನಡುವೆ ಯಾವುದೇ ಗೊಂದಲವಿಲ್ಲ!
ಸ್ವಚ್ಛತೆಗೆ ಆದ್ಯತೆ; ವಾರ್ಡ್ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿರುವ ಗಡಿಗುಡಾಳ್ ಮಂಜುನಾಥ್ ಪರಿಸರ ಕಾಪಾಡುವ ಸಲುವಾಗಿ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯ ಹಮ್ಮಿಕೊಂಡಿದ್ದಾರೆ. ಮಳೆಗಾಲದಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾದಂತ ಸಾಂಕ್ರಾಮಿಕ ರೋಗಗಳ ಜೊತೆಗೆ ಕೋವಿಡ್ ಮೂರನೇ ಅಲೆ ಭೀತಿಯೂ ಇದೆ.
ಈ ಹಿನ್ನೆಲೆಯಲ್ಲಿ ವಾರ್ಡ್ನಲ್ಲಿ ಕೆಲವೆಡೆ ಬಿದ್ದಿರುವ ತ್ಯಾಜ್ಯ, ಗಿಡಗಂಟೆಗಳನ್ನು ತೆಗೆಸುವ ಕಾರ್ಯವನ್ನು ಸ್ವತಃ ಅವರೇ ಮುಂದೆ ನಿಂತು ಪೌರಕಾರ್ಮಿಕರೊಂದಿಗೆ ಮಾಡುತ್ತಿದ್ದಾರೆ. ನಿತ್ಯವೂ ಸ್ವಚ್ಛತೆ ಕಾರ್ಯ ನಡೆದರೂ ಕೆಲವೆಡೆ ಹಾಗೆ ಉಳಿದಿರುವ ಕಸವೂ ಇರಬಾರದು. ತ್ಯಾಜ್ಯಮುಕ್ತ ವಾರ್ಡ್ ಆಗಿ ಮಾಡಬೇಕೆಂಬ ಕನಸು ಕಂಡಿದ್ದಾರೆ.
"ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ನಾವೇನೂ ದೊಡ್ಡವರಲ್ಲ. ಜನರ ಸಂಕಷ್ಟ, ಸಮಸ್ಯೆ ಆಲಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಹಾಗಾಗಿ ಮನೆಯ ಬಾಗಿಲಿಗೆ ನಿಮ್ಮ ಸೇವಕ ಎಂಬ ಶಿರೋನಾಮೆ ನೀಡಿ ಕೆಲಸ ಮಾಡುತ್ತಿದ್ದೇನೆ. ಜನರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾದಂತ ಸಾಂಕ್ರಾಮಿಕ ರೋಗ ಹರಡುವ ಭೀತಿ ಜೊತೆಗೆ ಕೊರೊನಾ ಮೂರನೇ ಅಲೆಯ ಆತಂಕವೂ ಇದೆ. ಈ ಹಿನ್ನೆಲೆಯಲ್ಲಿ ಸ್ವಚ್ಚತೆ ಕಾರ್ಯ ನಡೆಸಲಾಗುತ್ತಿದೆ. ವಾರ್ಡ್ ಅನ್ನು ಸಂಪೂರ್ಣವಾಗಿ ತ್ಯಾಜ್ಯ ಮುಕ್ತ ಪ್ರದೇಶ ಮಾಡುವ ಪಣ ತೊಟ್ಟಿದ್ದೇನೆ" ಎನ್ನುತ್ತಾರೆ ಗಡಿಗುಡಾಳ್ ಮಂಜುನಾಥ್.
ಜನರ ಪ್ರತಿಕ್ರಿಯೆ; ಕಾರ್ಪೊರೇಟರ್ ಗಡಿಗುಡಾಳ್ ಮಂಜುನಾಥ್ ಕಾರ್ಯವನ್ನು ಮುಕ್ತಕಂಠದಿಂದ ಜನರು ಶ್ಲಾಘಿಸುತ್ತಿದ್ದಾರೆ. ಸ್ವಯಂಪ್ರೇರಿತರಾಗಿ ಹಿರಿಯ ನಾಗರಿಕರು, ಸಾರ್ವಜನಿಕರು ಪಾಲಿಕೆ ಸದಸ್ಯರ ಜೊತೆಗೂಡಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಾರ್ಡ್ನ ಯಾವುದೇ ಸಮಸ್ಯೆ ಇದ್ದರೂ ಕೂಡಲೇ ಸ್ಪಂದಿಸುತ್ತಾರೆ. ಈಗ ಮನೆ ಬಾಗಿಲಿಗೆ ಅವರೇ ಬಂದು ಕಷ್ಟ ಪರಿಹರಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಯ ಎನ್ನುತ್ತಾರೆ ಜನರು.
Recommended Video
ಒಟ್ಟಿನಲ್ಲಿ ಚುನಾವಣೆಯಲ್ಲಿ ಗೆದ್ದು ಕೈಗೆ ಸಿಗದೇ ಓಡಾಡುವವರ ಜನಪ್ರತಿನಿಧಿಗಳ ನಡುವೆ ಜನರ ಬಳಿಯೇ ಇದ್ದು, ಅವರ ಸಮಸ್ಯೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಗಡಿಗುಡಾಳ್ ಮಂಜುನಾಥ್ ಕಾರ್ಯ ಶ್ಲಾಘನೀಯ. ಕೊರೊನಾ ವೇಳೆಯಲ್ಲಿಯೂ ವಾರ್ಡ್ನಲ್ಲಿಯೇ ಇದ್ದು, ಸ್ಯಾನಿಟೈಸ್ ಮಾಡಿಸಿದ್ದರು. ಲಸಿಕೆ ಕೊಡಿಸಿದ್ದರು ಎನ್ನುತ್ತಾರೆ ಜನರು.