ದಾವಣಗೆರೆ ಜಿಲ್ಲೆಯಲ್ಲಿ ಒಂದೇ ಗ್ರಾ.ಪಂಗೆ ಇಬ್ಬರು ಪಿಡಿಓ
ದಾವಣಗೆರೆ, ಫೆಬ್ರವರಿ 11: ದಾವಣಗರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಎಚ್.ಕಡದಕಟ್ಟೆ ಗ್ರಾ.ಪಂ ಅಭಿವೃದ್ದಿ ಅಧಿಕಾರಿಯಾಗಿದ್ದ ಜಯಕುಮಾರ್ ಶಾಸಕರ ಕುಮ್ಮಕ್ಕಿನಿಂದ ಅವ್ಯವಹಾರ ನಡೆಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಹಾಗೂ ಕಾನೂನು ಪ್ರಕಾರ ಮೂಲ ಪಿಡಿಓ ಆಗಿರುವ ವಿಜಯಗೌಡರ್ ಅವರಿಗೆ ಅಧಿಕಾರ ನೀಡುತ್ತಿಲ್ಲ ಇದರಿಂದಾಗಿ ಗ್ರಾಮದಲ್ಲಿ ಅಭಿವೃದ್ದಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ ಎಂದು ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಎಚ್.ಕಡದಕಟ್ಟೆ ಗ್ರಾ.ಪಂ ನಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಖಂಡಿಸಿ ಫೆಬ್ರವರಿ 13 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಭ್ರಷ್ಟಾಚಾರ ವಿರೋಧಿ ವೇದಿಕೆಯ ಗುರುಪಾದಯ್ಯ ಮಠದ್ ಅವರೊಂದಿಗೆ ನಾನು ಸಹ ಧರಣಿ ನಡೆಸುತ್ತೇನೆ ಎಂದರು.
ಶಾಸಕ ರೇಣುಕಾಚಾರ್ಯ-ಸಹೋದರರ ಮೇಲೆ ಭ್ರಷ್ಟಾಚಾರ ಆರೋಪ
ಗ್ರಾ.ಪಂ ಗೆ ಎಸ್ಟಿ ಮೀಸಲು ಸ್ಥಾನವಿದ್ದು, ಅದರಂತೆ ಗ್ರಾ.ಪಂ ಅಧ್ಯಕ್ಷೆಯಾಗಿದ್ದೇನೆ. ಎಚ್.ಕಡದಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ 18 ಜನ ಸದಸ್ಯರಿದ್ದು ಅದರಲ್ಲಿ 12 ಮಂದಿ ಸಹಕಾರ ನೀಡುತ್ತಿಲ್ಲ, ಇದಕ್ಕೆ ಕಾರಣ ಅವರು ನೀಡುವ ಸುಳ್ಳು ಬಿಲ್ ಗಳಿಗೆ, ಚೆಕ್ ಗಳಿಗೆ ನಾನು ಸಹಿ ಮಾಡದಿರುವುದು ಹಾಗೂ ಕಾನೂನು ಬಾಹಿರ ಕೆಲಸಗಳಿಗೆ ಸಹಕಾರ ನೀಡದಿರುವುದರಿಂದ ಸಹಕಾರ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
12 ಸದಸ್ಯರು ಒಟ್ಟಾಗಿ ಅವಿಶ್ವಾಸ ತಂದು ನನ್ನನ್ನು ನವೆಂಬರ್ ತಿಂಗಳಲ್ಲಿ ಅಧಿಕಾರದಿಂದ ಕೆಳಗಿಳಿಸಿದ್ದರು. ನಂತರ ಜನವರಿ ತಿಂಗಳಲ್ಲಿ ಕಾನೂನು ಬದ್ಧವಾಗಿ ಅಧ್ಯಕ್ಷತೆಯಾಗಿ ಪುನರಾಯ್ಕೆಯಾಗಿದ್ದೇನೆ. ಇದನ್ನು ಸಹಿಸದ ಶಾಸಕರ ಸಹೋದರರು ತಮಗೆ ಬೇಕಾದ ಪಿಡಿಓ ಜಯಕುಮಾರ್ ಅವರನ್ನು ನಮ್ಮ ಪಂಚಾಯಿತಿಗೆ ಕರೆ ತಂದಿದ್ದಾರೆ.
ಆದರೆ ಮೂಲ ಸ್ಥಾನದಲ್ಲಿ ವಿಜಯ ಗೌಡರ್ ಎಂಬುವವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರಿಗೆ ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಲು ಬಿಡದೆ ಶಾಸಕರ ಶಿಫಾರಸ್ಸು ಪತ್ರ ನೀಡುವ ಮೂಲಕ ಜಯಕುಮಾರ್ ಅವರನ್ನು ಮುಂದುವರೆಸುತ್ತಿದ್ದಾರೆ. ಇದು ಕಾನೂನು ಬಾಹಿರ ಕ್ರಮವಾಗಿದೆ. ನಮ್ಮ ಪಂಚಾಯಿತಿಯಲ್ಲೀಗ ಇಬ್ಬರು ಪಿಡಿಓಗಳಿದ್ದಾರೆ ಎಂದು ತಿಳಿಸಿದರು.
ಮೂಲ ಪಿಡಿಓ ಬ್ಯಾಂಕ್ ಗಳಿಗೆ ಸಹಿ ಮಾಡುವ ಅಧಿಕಾರ ಹೊಂದಿದ್ದಾರೆ. ಆದರೆ ಕಡತಗಳೆಲ್ಲವು ಜಯಕುಮಾರ್ ಅವರ ಅಧೀನದಲ್ಲಿದ್ದು ಅವರು ಚಾರ್ಜ್ ಕೊಡುತ್ತಿಲ್ಲ. ಮೇಲಾಧಿಕಾರಿಗಳು ಸಹ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ, ಇದಿಷ್ಟಲ್ಲದೇ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ದಿ ಕುಂಠಿತಗೊಂಡಿದೆ. ಎಲ್ಲದಕ್ಕೂ ನಾನೇ ಕಾರಣ ಎಂಬಂತೆ ಬಿಂಬಿಸಿ ನನ್ನ ವಿರುದ್ದ ಜನರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸಲು ಮುಂದಾಗಿಸಿದ್ದಾರೆ, ಹಿಂಸೆ ನೀಡುತ್ತಿದ್ದಾರೆ. ನನಗೆ ನ್ಯಾಯ ನೀಡಬೇಕು ಎಂದು ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ ಒತ್ತಾಯಿಸಿದರು.