ಖುಷಿ ಸುದ್ದಿ: ದಾವಣಗೆರೆಯಲ್ಲಿ 42 ಕೊರೊನಾ ವೈರಸ್ ಪ್ರಕರಣಗಳಷ್ಟೇ ಬಾಕಿ
ದಾವಣಗೆರೆ, ಮೇ.31: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3,000 ಸನ್ನಿಹಿತಕ್ಕಿದೆ. ಪ್ರತಿನಿತ್ಯ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟುತ್ತಲೇ ಇದೆ. ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 141 ಕೊರೊನಾ ವೈರಸ್ ಸೋಂಕಿತರ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ 2,922 ಮಂದಿಗೆ ಸೋಂಕು ದೃಢಪಟ್ಟಿದೆ.
ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಎಷ್ಟರ ಮಟ್ಟಿಗೆ ಹೆಚ್ಚಾಗುತ್ತಿದೆಯೋ ಅದೇ ರೀತಿ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆ ಬಿಳಚಿ ಗ್ರಾಮದಲ್ಲಿನ ಜನರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದಲ್ಲಿ ಕೊವಿಡ್-19ಗೆ ಒಬ್ಬ ಬಲಿ, 141 ಮಂದಿಗೆ ಸೋಂಕು
ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಇಬ್ಬರು ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದು, ಕೊವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ವಾಪಸ್ ಮನೆಗೆ ತೆರಳಿದ್ದಾರೆ. ಇದರಿಂದ ಗ್ರಾಮಸ್ಥರು ಕೊಂಚ ನಿರಾಳರಾಗಿದ್ದಾರೆ.
ಇಬ್ಬರೂ ಸೋಂಕಿತರಿಗೆ ಮಹಾರಾಷ್ಟ್ರದ ನಂಟು
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಇಬ್ಬರು ಕೊರೊನಾ ವೈರಸ್ ಸೋಂಕಿತರಿಗೂ ಮಹಾರಾಷ್ಟ್ರ ನಂಟಿನಿಂದ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿತ್ತು. ಗ್ರಾಮಕ್ಕೆ ವಾಪಸ್ ಆಗಿದ್ದ ಇಬ್ಬರ ರಕ್ತ ಮತ್ತು ಗಂಟಲು ದ್ರವ್ಯದ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಸೋಂಕು ತಗಲಿರುವುದು ದೃಢಪಟ್ಟಿತ್ತು.
ಗ್ರಾಮವನ್ನು ಕಂಟೇನ್ಮೆಂಟ್ ಗೊಳಿಸದಂತೆ ಆಗ್ರಹ
ಕೊರೊನಾ ವೈರಸ್ ಸೋಂಕಿತರು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೆರೆಬಿಳಚಿ ಗ್ರಾಮವನ್ನು ದಾವಣಗೆರೆ ಜಿಲ್ಲಾಡಳಿತವು ಕಂಟೇನ್ಮೆಂಟ್ ಝೋನ್ ಆಗಿ ಪರಿವರ್ತಿಸಿತ್ತು. ಗ್ರಾಮದಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಇದೀಗ ಗ್ರಾಮದಲ್ಲಿ ಪತ್ತೆಯಾದ ಎರಡು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಗುಣಮುಖವಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಮವನ್ನು ಕಂಟೇನ್ಮೆಂಟ್ ಝೋನ್ ನಿಂದ ಮುಕ್ತಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ 20 ಕೊವಿಡ್-19 ಸೋಂಕಿತರು ಗುಣಮುಖ
ಕೆರೆಬಿಳಚಿ ಗ್ರಾಮದ ಇಬ್ಬರು ಕೊರೊನಾ ವೈರಸ್ ಸೋಂಕಿತರು ಅಷ್ಟೇ ಅಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಬರೋಬ್ಬರಿ 20 ಮಂದಿ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಚ್ ಆಗಿದ್ದಾರೆ. ಜಿಲ್ಲೆಯಲ್ಲಿ ಶನಿವಾರ ನಾಲ್ಕು ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈವರೆಗೂ 150 ಮಂದಿಗೆ ಸೋಂಕು ಅಂಟಿಕೊಂಡಿದೆ. ಈ ಪೈಕಿ ಈಗಾಗಲೇ 104 ಮಂದಿ ಗುಣಮುಖರಾಗಿದ್ದಾರೆ. ನಾಲ್ವರು ಮಹಾಮಾರಿಗೆ ಪ್ರಾಣ ಬಿಟ್ಟಿದ್ದರೆ, ಬಾಕಿ ಉಳಿದಿರುವ 42 ಮಂದಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ರಾಜ್ಯದ 103 ಸೋಂಕಿತರು ಕೊರೊನಾ ವೈರಸ್ ಮುಕ್ತ
ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಷ್ಟೇ ಶತಕದ ಗಡಿ ದಾಟಿಲ್ಲ. ಬದಲಿಗೆ ಖುಷಿಯ ವಿಚಾರ ಎಂದರೆ ಶನಿವಾರ ಒಂದೇ ದಿನ ರಾಜ್ಯಾದ್ಯಂತ 103 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಲಬುರಗಿ - 43, ಬೆಂಗಳೂರು ನಗರ - 21, ದಾವಣಗೆರೆ - 20, ಕೋಲಾರ - 5, ಬಾಗಲಕೋಟಿ - 3, ಬೀದರ್ - 3, ರಾಯಚೂರು - 2, ದಕ್ಷಿಣ ಕನ್ನಡ - 2, ಉಡುಪಿ - 1, ಚಿಕ್ಕಬಳ್ಳಾಪುರ -1, ವಿಜಯಪುರ - 1, ಗದಗ - 1 ಒಬ್ಬರು ಗುಣಮುಖರಾಗಿದ್ದಾರೆ.
ಶನಿವಾರದ ಜಿಲ್ಲಾವಾರು ಕೊವಿಡ್-19 ಸೋಂಕಿತರ ಸಂಖ್ಯೆ
ಬೆಂಗಳೂರು - 33, ಯಾದಗಿರಿ - 18, ದಕ್ಷಿಣ ಕನ್ನಡ - 14, ಉಡುಪಿ - 13, ಹಾಸನ - 14, ವಿಜಯಪುರ - 11, ಬೀದರ್ -10, ಶಿವಮೊಗ್ಗ -6, ದಾವಣಗೆರೆ - 4, ಹಾವೇರಿ -4, ಕೋಲಾರ - 3, ಉತ್ತರ ಕನ್ನಡ -2, ಮೈಸೂರು - 2, ಧಾರವಾಡ - 2, ಕಲಬುರಗಿ - 2, ಬೆಂಗಳೂರು ಗ್ರಾಮಾಂತರ - 1, ತುಮಕೂರು - 1, ಚಿತ್ರದುರ್ಗ -1, ಬೆಳಗಾವಿ -1,