ದಾವಣಗೆರೆ; ತುಂಬಿ ಹರಿದ ತುಂಗಭದ್ರೆಯಿಂದ ರೈತರಲ್ಲಿ ಸಂತಸ
ದಾವಣಗೆರೆ, ಆಗಸ್ಟ್ 06: ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲಾದ್ಯಂತ ವಾರದಿಂದೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ತುಂಗಾ ನದಿಗೆ 50 ಸಾವಿರ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರನ್ನು ಹರಿಬಿಡಲಾಗಿದೆ. ಹೀಗಾಗಿ ಹೊನ್ನಾಳಿ ಭಾಗದಲ್ಲಿ ತುಂಗಭದ್ರಾ ನದಿಯಲ್ಲಿ ಅಧಿಕ ಪ್ರಮಾಣದ ನೀರು ಹರಿಯುತ್ತಿದ್ದು, ನೋಡುಗರ ಕಣ್ಣಿಗೆ ಹಬ್ಬ ಉಂಟು ಮಾಡಿದೆ.
Recommended Video
ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಭದ್ರಾ ನದಿಯ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದ್ದು, ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೂ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಈ ಜಲಾಶಯ ನಂಬಿ ಕೃಷಿ ಮಾಡುತ್ತಿರುವ ದಾವಣಗೆರೆ ಜಿಲ್ಲೆಯ ರೈತ ಸಮೂಹದಲ್ಲಿ ಹರ್ಷ ಮೂಡಿದೆ.
ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ಸಿಲುಕಿಕೊಂಡ ಹಸಿರುಮಕ್ಕಿ ಲಾಂಚ್, ಪ್ರಯಾಣಿಕರ ಆತಂಕ
ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆ ಇದೆ ಎಂಬ ಕಾರಣಕ್ಕೆ ಈಚೆಗೆ ರೈತರು ಭತ್ತ ನಾಟಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೋ ಬೇಡವೋ ಎಂಬ ದ್ವಂದ್ವದಲ್ಲಿದ್ದರು. ಆದರೀಗ, ಉತ್ತಮ ಮಳೆ ಸುರಿದು, ಜಲಾಶಯಕ್ಕೆ ಅಧಿಕ ಪ್ರಮಾಣದ ನಿರು ಹರಿದುಬರುತ್ತಿರುವ ಕಾರಣ ರೈತರು ಹರ್ಷಚಿತ್ತರಾಗಿದ್ದಾರೆ.
ಇಂದು ಭದ್ರಾ ಜಲಾಶಯಕ್ಕೆ 35,875 ಕ್ಯೂಸೆಕ್ ನಷ್ಟು ನೀರಿನ ಒಳ ಹರಿವು, 2184 ಕ್ಯೂಸೆಕ್ ನಷ್ಟು ಹೊರ ಹರಿವು ಇತ್ತು. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಷ್ಟಾಗಿದ್ದು, ಇಂದು ನೀರಿನ ಮಟ್ಟ 159.5 ಅಡಿಗಳಷ್ಟು ದಾಖಲಾಗಿದೆ. ಕಳೆದ ವರ್ಷ ಈ ದಿನದಂದು ನೀರಿನ ಮಟ್ಟ 149.11 ಇತ್ತು. ಅತ್ತ, ಹೊಸಪೇಟೆಯ ಟಿಬಿ ಡ್ಯಾಮ್ ಗೂ ನೀರಿನ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಜನ-ಜಾನುವಾರುಗಳಿಗೆ ಎಚ್ಚರಿಕೆ: ತುಂಗಭದ್ರಾ ನದಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿರುವ ಕಾರಣಕ್ಕೆ ಹೊನ್ನಾಳಿ-ನ್ಯಾಮತಿ ತಾಲೂಕುಗಳ ವ್ಯಾಪ್ತಿಯಲ್ಲಿನ ನದಿ ದಂಡೆಗಳಲ್ಲಿ ಜನ ಓಡಾಡಬಾರದು. ಜಾನುವಾರುಗಳನ್ನು ಮೇಯಿಸುವುದಾಗಲೀ, ಇನ್ನಾವುದೇ ಚಟುವಟಿಕೆಗಳನ್ನಾಗಲೀ ಮಾಡಬಾರದು ಎಂದು ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ತಿಳಿಸಿದ್ದಾರೆ.