ದಾವಣಗೆರೆಯಲ್ಲಿ ಹಿಂದಿನ ನೆನಪು ಬಿಚ್ಚಿಟ್ಟ ರವಿಚಂದ್ರನ್ ಪುತ್ರ
ದಾವಣಗೆರೆ, ಜೂನ್ 13: ಇದೇ ಜೂನ್ 24ಕ್ಕೆ ರಾಜ್ಯಾದ್ಯಂತ ತೆರೆಕಾಣಲಿರುವ ಕ್ರೇಜಿಸ್ಚಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಣ್ಣೆನಗರಿಗೆ ಆಗಮಿಸಿತ್ತು. ನಗರದ ದವನ್ - ನೂತನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮುಂದೆ ಚಿತ್ರತಂಡ ನೃತ್ಯ ಮಾಡುವ ಮೂಲಕ ರಂಜಿಸಿದರು.
ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿದ ಚಿತ್ರತಂಡವು ತಾಯಿ ದರ್ಶನ ಪಡೆದು ಪೂಜೆ ಸಲ್ಲಿಸಿ, ಸಿನಿಮಾ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿತು. ಜಿಎಂಐಟಿ, ಅಥಣಿ ಕಾಲೇಜು, ಎವಿ ಕಮಲಮ್ಮ ಮಹಿಳಾ ಕಾಲೇಜು, ಜೈನ್ ತಾಂತ್ರಿಕ ಕಾಲೇಜುಗಳಲ್ಲಿ ಹೋಗಿ ವಿದ್ಯಾರ್ಥಿಗಳ ಸಮೂಹದ ನಡುವೆ ಚಿತ್ರ ಬೆಂಬಲಿಸುವತೆ ಮನವಿ ಮಾಡಿತು.
ದವನ್ - ನೂತನ್ ಕಾಲೇಜಿನಲ್ಲಿ "ಅಲಲಾ ಲಾ ಅಲಲಾ ನಿನ್ನ ಮುಂದೆ ಯಾರೂ ಇಲ್ಲ. ಎಲ್ಲಾ ನಿಂದೆ ನಂದೇನಿಲ್ಲ. ಆಗು ಗಲ್ಲಿ ಹಲ್ಲಾ ಗುಲ್ಲಾ ಶಕುಂತಲಾ ಶೇಕ್ ಯುವರ್ ಬಾಡಿ'' ಎಂಬ ಹಾಡಿಗೆ ತ್ರಿವಿಕ್ರಮ ರವಿಚಂದ್ರನ್ ಹಾಗೂ ಚಿತ್ರದ ನಾಯಕಿ ಆಕಾಂಕ್ಷಾ ಶರ್ಮಾ ಹೆಜ್ಜೆ ಹಾಕುತ್ತಿದ್ದಂತೆ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು. ಈ ವೇಳೆ ನಟ ರವಿಚಂದ್ರನ್ ಪುತ್ರ , ನಟಿಯರ ಜೊತೆ ಸೆಲ್ಫಿ ತೆಗೆದುಕೊಳ್ಳಲು ವಿದ್ಯಾರ್ಥಿಗಳು ಮುಗಿಬಿದ್ದರು.
ತಂದೆಗ ನೀಡಿದ ಪ್ರೀತಿ ನೀಡಲು ತ್ರಿವಿಕ್ರಮ ಮನವಿ
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಕ್ರಮ್ ರವಿಚಂದ್ರನ್, "ನನ್ನ ತಂದೆ ಮೊದಲ ಸಿನಿಮಾದ ಆಡಿಯೋ ಇಲ್ಲೇ ಬಿಡುಗಡೆಯಾಗಿದ್ದು. ಆಗಿನಿಂದ ಇಲ್ಲಿಯವರೆಗೆ ದಾವಣಗೆರೆಯ ಜನರು ನನ್ನ ತಂದೆ ಮೇಲೆ ಅಪಾರ ಪ್ರೀತಿ, ವಿಶ್ವಾಸ ತೋರಿಸಿದ್ದಾರೆ. ಅವರ ಚಿತ್ರಗಳನ್ನು ಪ್ರೋತ್ಸಾಹಿಸಿದ್ದಾರೆ. ನನಗೂ ಅದರಲ್ಲಿ ಶೇಕಡಾ 1 ರಷ್ಟಾದರೂ ನೀಡಿ. ಸಿನಿಮಾದಲ್ಲಿ ನಿಮ್ಮ ಮನಸ್ಸನ್ನು ಗೆಲ್ಲುತ್ತೇನೆ. ಬೆಂಗಳೂರು ಬಿಟ್ಟರೆ ದಾವಣಗೆರೆ ಜನರು ಹೆಚ್ಚು ಪ್ರೀತಿ ನೀಡುತ್ತಾರೆ. ಮೊದಲಿನಿಂದಲೂ ನಮ್ಮ ಕುಟುಂಬದ ಮೇಲೆ ತೋರಿರುವ ಪ್ರೀತಿ ಮುಂದೆಯೂ ಹೀಗೆ ಮುಂದುವರಿಯುತ್ತದೆ" ಎಂದು ಭಾವಿಸುತ್ತೇನೆ ಎಂದು ಹೇಳಿದರು.
ಈ ಚಿತ್ರದ ಮೂಲಕ ನಿಮ್ಮ ಮನಸು ಗೆಲ್ಲುತ್ತೇನೆ
"ಪ್ರತಿಯೊಬ್ಬರಿಗೂ ಒಂದು ಬೆಲ್ಟ್ ಇರುತ್ತದೆ. ಅದೇ ರೀತಿಯಲ್ಲಿ ಹೀರೋಗೂ ಕರ್ನಾಟಕದಲ್ಲಿ ಬೆಲ್ಟ್ ಇದ್ದೇ ಇರುತ್ತೆ. ನನ್ನ ತಂದೆಗೆ ಸಿನಿ ಪ್ರೇಕ್ಷಕರು ತುಂಬಾ ಪ್ರೀತಿ ತೋರಿಸಿದ್ದಾರೆ. ತ್ರಿವಿಕ್ರಮ ಜೂನ್ 24 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ದಾವಣಗೆರೆಯಲ್ಲಿ ಅರುಣಾ, ಅಶೋಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಮೂಲಕ ನಿಮ್ಮ ಮನಸು ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ. ಪ್ರತಿಯೊಬ್ಬರೂ ಸಿನಿಮಾ ನೋಡುವ ಮೂಲಕ ಪ್ರೋತ್ಸಾಹ ಕೊಡಿ" ಎಂದು ಮನವಿ ಮಾಡಿದರು.
ಜೈನ ಧರ್ಮದ ಯುವತಿ ನಡುವೆ ಪ್ರೇಮ
"ಸಿನಿಮಾ ಪ್ರಪಂಚದಲ್ಲಿ ನಾವು ಇಟ್ಟಿರುವುದು ಮೊದಲ ಹೆಜ್ಜೆ. ಇನ್ನೂ ತುಂಬಾ ಹೆಜ್ಜೆಗಳನ್ನಿಡಬೇಕಿದೆ. ಈಶ್ವರಿ ತುಂಬಾ ಒಳ್ಳೆಯ ಸಂಸ್ಥೆ ನೀಡಬೇಕು. ಈಶ್ವರಿ ಸಂಸ್ಥೆಯು ಈಗಾಗಲೇ ಒಳ್ಳೆಯ ಸಿನಿಮಾ ಕೊಟ್ಟಿದೆ. ಇದು ಇನ್ನು ಜಾಸ್ತಿಯಾಗಬೇಕು ಎಂಬ ಹಂಬಲ ನಮ್ಮದು. ತ್ರಿವಿಕ್ರಮ ಚಿತ್ರದಲ್ಲಿ ಮಧ್ಯಮ ವರ್ಗದ ಹುಡುಗನು ಜೈನ ಧರ್ಮದ ಯುವತಿ ನಡುವೆ ಪ್ರೇಮಾಂಕುರವಾಗುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ. ಆಸೆಯಲ್ಲಿ ಹುಟ್ಟುತ್ತೇವೆ, ಆಸೆಯಲ್ಲೇ ಬದುಕುತ್ತೇವೆ. ಆಸೆಯಲ್ಲೇ ಸಾಯುತ್ತೇವೆ. ಈ ಪಾತ್ರದ ಜರ್ನಿ ಹೇಗಿರುತ್ತೆ ಎಂಬ ಕುರಿತಾಗಿಯೂ ಇದೆ" ಎಂದು ತಿಳಿಸಿದರು.
ತ್ರಿವಿಕ್ರಮ್ ಈ ಸಿನಿಮಾ ಮೂಲಕ ಸ್ಟಾರ್ ಆಗ್ತಾರೆ
ಇನ್ನು ಚಿತ್ರದ ನಿರ್ದೇಶಕ ಸಹನಾ ಮೂರ್ತಿ ಮಾತನಾಡಿ, "ಸಿನಿಮಾ ಅಂದ ಮೇಲೆ ಹೊಡೆದಾಟ, ಆಕ್ಷನ್ ಸೀನ್ ಗಳು ಇದ್ದೇ ಇರುತ್ತವೆ. ರಫ್ ಅಂಡ್ ಟಫ್ ಇರುವ ಹುಡುಗ ಹಾಗೂ ತುಂಬಾ ಮುಗ್ಧವಾಗಿರುವ ಜೈನ ಧರ್ಮದ ಯುವತಿ ನಡುವೆ ಪ್ರೇಮಾಂಕುರವಾಗಿ ಕೊನೆಗೆ ಏನಾಗುತ್ತದೆ ಎಂಬುದನ್ನು ನೀವು ತೆರೆ ಮೇಲೆ ನೋಡಿ. ಆಗ ಗೊತ್ತಾಗುತ್ತೆ ನಾನು ಈಗ ಹೇಳಿದ್ದು ಏನು ಎಂಬುದು. ಸಿನಿಮಾ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತೆ. ಜೂನ್ 24ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ವಿಕ್ರಮ್ ದೊಡ್ಡ ತಾರೆಯಾಗಿ ಬೆಳೆಯಲಿದ್ದಾರೆ. ಬ್ಯಾಂಕಾಕ್, ರಾಜಸ್ಥಾನ, ಕಾಶ್ಮೀರ, ಉಡುಪಿ ಸೇರಿದಂತೆ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ" ಎಂದು ಹೇಳಿದರು.
ಚಿತ್ರದ ನಾಯಕಿ ಆಕಾಂಕ್ಷಾ ಶರ್ಮಾ ಮಾತನಾಡಿ, "ಇದು ನನ್ನ ಮೊದಲ ಸಿನಿಮಾ. ತ್ರಿವಿಕ್ರಮ ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್ ಜೊತೆ ನಟಿಸಿದ್ದೇನೆ, ತುಂಬಾ ಖುಷಿ ಆಗಿದೆ. ದಾವಣಗೆರೆಗೆ ಬಂದಿದ್ದೂ ತುಂಬಾ ಸಂತಸ ತಂದಿದೆ. ಚಿತ್ರಕ್ಕೆ ಸಪೋರ್ಟ್ ಮಾಡಿ. ಕುಟುಂಬ ಸಮೇತರಾಗಿ ಬಂದು ನೋಡುವಂಥ ಸಿನಿಮಾ. ಫ್ಯಾಮಿಲಿ ಜೊತೆ ಹೋಗಿ ಸಿನಿಮಾ ನೋಡಿ" ಎಂದು ಮನವಿ ಮಾಡಿದರು. ಈ ವೇಳೆ ವಾಸುದೇವ, ಗುಡ್ಡಪ್ಪ, ಎಂ. ಮನು ಹಾಜರಿದ್ದರು.