ನಾಡೋಜ ಚಿದಾನಂದ ಮೂರ್ತಿಯವರ ಹುಟ್ಟೂರಿನಲ್ಲಿ ನೀರವ ಮೌನ...
ದಾವಣಗೆರೆ, ಜನವರಿ 11: ಹಿರಿಯ ಸಂಶೋಧಕ ಹಾಗೂ ಸಾಹಿತಿ ಪ್ರೊ.ಡಾ. ಚಿದಾನಂದ ಮೂರ್ತಿಯವರು (88) ಬೆಂಗಳೂರಿನಲ್ಲಿ ಇಂದು ಬೆಳಗಿನ ಜಾವ 3.30ಕ್ಕೆ ನಿಧನರಾಗಿದ್ದಾರೆ. ಸಾವಿನ ಸುದ್ದಿ ತಿಳಿದು ಅವರ ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲೀಗ ನೀರವ ಮೌನ ಆವರಿಸಿದೆ.
ಚಿದಾನಂದ ಮೂರ್ತಿಯವರು ಹುಟ್ಟಿದ್ದು 1931ರ ಮೇ 10ರಂದು ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ. ಅವರ ತಂದೆ ಕೊಟ್ಟೂರಯ್ಯ ಹಾಗೂ ತಾಯಿ ಪಾರ್ವತಮ್ಮ. ತಂದೆ ಶಿಕ್ಷಕರಾಗಿದ್ದವರು. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಚಿದಾನಂದ ಮೂರ್ತಿಯವರಿಗೆ ಮನೆಯೇ ಒಂದು ಶಾಲೆಯಂತಿತ್ತು. ಬಾಲ್ಯದ ಶಿಕ್ಷಣವನ್ನು ಹಿರೇಕೋಗಲೂರು ಹಾಗೂ ಸಂತೆಬೆನ್ನೂರಿನಲ್ಲಿ ಪೂರೈಸಿದ ಅವರು ನಂತರದ ದಿನಗಳಲ್ಲಿ ದಾವಣಗೆರೆಯ ಜಯದೇವ ಹಾಸ್ಟೆಲ್ ನಲ್ಲಿದ್ದುಕೊಂಡು ತಮ್ಮ ವಿದ್ಯಾಭ್ಯಾಸ ನಡೆಸಿದ್ದರು. ಮುಂದೆ ಉನ್ನತ ಶಿಕ್ಷಣಕ್ಕಾಗಿ ಮೈಸೂರಿಗೆ ತೆರಳಿ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು. ಸತತ 40 ವರ್ಷಗಳಿಂದಲೂ ಕನ್ನಡಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡವರು.
ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ನಿಧನ
ಸಂಶೋಧನೆಗಳಿಂದ ಹೆಸರಾದವರು ಅವರು. ಕನ್ನಡ ಶಕ್ತಿ ಕೇಂದ್ರದ ಮೂಲಕ ಕನ್ನಡಿಗರನ್ನು ಸಂಘಟಿತರನ್ನಾಗಿಸುವ ಕೆಲಸ ಮಾಡಿದವರು. ಇತಿಹಾಸ ಸಂಶೋಧನೆಯ ಪುಸ್ತಕಗಳನ್ನು ಬರೆದಿರುವ ಚಿದಾನಂದ ಮೂರ್ತಿಯವರದು ಬದ್ಧತೆ, ಚಿಂತನೆಯ ವ್ಯಕ್ತಿತ್ವ. ಅವರ ಹುಟ್ಟೂರಾದ ಹಿರೇಕೋಗಲೂರಿನಲ್ಲಿ ಅವರ ಹೆಸರಿನಲ್ಲಿ ಪ್ರತಿಷ್ಠಾನವಿದೆ ಹಾಗೂ ಸುಮಾರು 4 ಲಕ್ಷರೂಪಾಯಿಗಳನ್ನು ಬ್ಯಾಂಕಿನಲ್ಲಿರಿಸಿ ಅದನ್ನು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದಾರೆ.
ಇದಲ್ಲದೆ ಹಿರೇಕೋಗಲೂರಿನಲ್ಲಿ ಚಿಮೂ ಹೆಸರಿನಲ್ಲಿ ಸಾಂಸ್ಕೃತಿಕ ಭವನವಿದ್ದು, ಅನೇಕ ಸಾಹಿತ್ಯಪರ ಚಟುವಟಿಕೆಗಳು ನಡೆಯುತ್ತಾ ಬಂದಿವೆ. ಗ್ರಾಮಸ್ಥರು ಚಿದಾನಂದ ಮೂರ್ತಿಯವರ ಆತ್ಮಕ್ಕೆ ಶಾಂತಿಕೋರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅವರು ಹುಟ್ಟಿಬೆಳೆದ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಸಬೇಕು ಹಾಗೂ ಗ್ರಾಮದಲ್ಲೇ ಸ್ಮಾರಕ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚಿದಾನಂದಮೂರ್ತಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ಅಲ್ಲದೆ ಸಾಂಸ್ಕೃತಿಕ ಭವನದ ಮುಂದಿರುವ ರಸ್ತೆಗೆ ಚಿದಾನಂದಮೂರ್ತಿ ಅವರ ಹೆಸರನ್ನು ಇಡಲಾಗುವುದು ಹಾಗೂ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.