ದಾವಣಗೆರೆಯಲ್ಲಿ ವಾಹನ ಸವಾರರಿಗೆ ಮಂಗಳಾರತಿ ಎತ್ತಿದ ಟ್ರಾಫಿಕ್ ಪೊಲೀಸರು
ದಾವಣಗೆರೆ, ಏಪ್ರಿಲ್ 01: ಲಾಕ್ ಡೌನ್ ಆದೇಶವನ್ನು ಮೀರಿ ಹೊರ ಬರುವ ವಾಹನ ಸವಾರರಿಗೆ ನಗರದ ಟ್ರಾಫಿಕ್ ಪೊಲೀಸರು ಮಂಗಳಾರತಿ ಎತ್ತಿ ಮನೆಯಿಂದ ಹೊರ ಬಾರದಂತೆ ವಿನೂತನವಾಗಿ ಜಾಗೃತಿ ಮೂಡಿಸಿದರು.
ಲಾಕ್ ಡೌನ್ ಆಗಿದ್ದರೂ ದಾವಣಗೆರೆಯಲ್ಲಿ ಜನ ಮಾತ್ರ ರಸ್ತೆಗೆ ಬರುವುದನ್ನು ಮಾತ್ರ ಬಿಟ್ಟಿಲ್ಲ. ಪೊಲೀಸರಿಗೆ ಜನರನ್ನು ನಿಯಂತ್ರಣ ಮಾಡುವುದೇ ಕಷ್ಟವಾಗಿದೆ. ಲಾಠಿ ರುಚಿ ತೋರಿಸಿದರೂ ಭಯವಿಲ್ಲದೆ ಓಡಾಡುತ್ತಿದ್ದಾರೆ. ಇಂತಹವರಿಗೆ ಪೊಲೀಸರು, ಕೊರೊನಾ ಭೀತಿ ಹಿನ್ನೆಲೆ ಯಾರೂ ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರಬೇಡಿ ಎಂದು ಮನವಿ ಮಾಡುತ್ತಿದ್ದಾರೆ.
ಮೈಸೂರಿನಲ್ಲಿ ಕೊರೊನಾಗಾಗಿ ರಸ್ತೆಗಿಳಿದ ಯಮ ಧರ್ಮರಾಯ
ಹೀಗಾಗಿ ಲಾಠಿ ಚಾರ್ಜ್ ಮಾಡಿ, ಕೈಮುಗಿದು ಕೇಳಿಕೊಂಡರೂ ತಲೆಕೆಡಸಿಕೊಳ್ಳದ ವಾಹನ ಸವಾರರಿಗೆ ನಗರದ ಕೆಎಸ್ಆರ್ ಟಿಸಿ ಮುಂಭಾಗದಲ್ಲಿ ವಾಹನಗಳನ್ನು ತಡೆದು ಆರತಿ ಬೆಳಗಿ ತಿಲಕವಿಟ್ಟು, ಕೈ ಮುಗಿದು ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಟ್ರಾಫಿಕ್ ಮಹಿಳಾ ಪೊಲೀಸರು ಮುಂದಾದರು.
ತರಕಾರಿಗಳು ಮನೆ ಬಳಿಯೇ ಬರುವಂತೆ ವ್ಯವಸ್ಥೆ ಮಾಡಿದರೂ ಮಾರುಕಟ್ಟೆಗೆ ಜನರು ಬರುತ್ತಿದ್ದಾರೆ. ಹೀಗಾಗಿ ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡುವರಿಗೂ ಆರತಿ ಬೆಳಗಿ ಮನೆಯಿಂದ ಹೊರ ಬರಬೇಡಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.