ದಾವಣಗೆರೆ: ಗಣೇಶ ಹಬ್ಬದ ಸಂಭ್ರಮದಲ್ಲಿ ಮೂವರು ಯುವಕರು ಸಾವು, ಅಪ್ಪನನ್ನೇ ಕೊಂದ ಪುತ್ರ!
ದಾವಣಗೆರೆ, ಸೆಪ್ಟೆಂಬರ್ 10: ಎಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಈ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಕೇಳಲು ಪೊಲೀಸ್ ಠಾಣೆಗೆ ಹೋಗಿ ವಾಪಸ್ ಬರುವಾಗ ಮೂವರು ಯುವಕರು ಅಪಘಾತದಲ್ಲಿ ಬಲಿಯಾಗಿದ್ದಾರೆ. ಈ ಗ್ರಾಮದಲ್ಲಿ ಹಬ್ಬದ ವಾತಾವರಣದ ಬದಲು ಶೋಕ ಮಡುಗಟ್ಟಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ಬಳಿ ಬೈಕ್ ಮತ್ತು ಬುಲೆರೋ ವಾಹನಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಬೈಕ್ನಲ್ಲಿದ್ದ ಮಲ್ಲೇಶಪುರ ಗ್ರಾಮದ 18 ವರ್ಷದ ಅಜ್ಜಯ್ಯ, 17 ವರ್ಷದ ಮಂಜುನಾಥ್ ಹಾಗೂ 17 ವರ್ಷದ ದೇವರಾಜ್ ಎಂಬುವವರು ಮೃತಪಟ್ಟಿರುವ ಯುವಕರಾಗಿದ್ದಾರೆ.
ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಪಡೆಯಲು ಚನ್ನಗಿರಿ ಪೊಲೀಸ್ ಠಾಣೆಗೆ ಮೂವರು ಯುವಕರು ಬೈಕ್ನಲ್ಲಿ ಹೋಗಿ ವಾಪಸ್ ಬರುತ್ತಿದ್ದ ವೇಳೆ ರಾಜಗೊಂಡನಹಳ್ಳಿ ಬಳಿ ಕಡೂರಿಂದ ಚನ್ನಗಿರಿ ಕಡೆಗೆ ಬರುತ್ತಿದ್ದ ಬುಲೆರೋ ವಾಹನ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಚಿಂತಾಜನಕ ಸ್ಥಿತಿಯಲ್ಲಿದ್ದ.
ಆತನನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯದಲ್ಲಿಯೇ ಆತನೂ ಮೃತಪಟ್ಟಿದ್ದಾನೆ. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತಂದೆಯನ್ನೇ ಕೊಂದ ಮಗ
ಇನ್ನು ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ತಂದೆ ಮೃತಪಟ್ಟಿರುವ ಘಟನೆ ನಡೆದಿದೆ.
55 ವರ್ಷದ ರಾಮಪ್ಪ ಮೃತಪಟ್ಟಿರುವ ವ್ಯಕ್ತಿ. ಸಂತೋಷ್ ಹಲ್ಲೆ ನಡೆಸಿರುವ ಮಗನಾಗಿದ್ದಾನೆ. ಕೌಟುಂಬಿಕ ವಿಚಾರವಾಗಿ ರಾಮಪ್ಪ ಮನೆಯಲ್ಲಿ ಹೆಂಡತಿಯೊಂದಿಗೆ ನಿರಂತರವಾಗಿ ಜಗಳ ಮಾಡುತ್ತಿದ್ದ. ಅದರಂತೆ ಸೆಪ್ಟೆಂಬರ್ 5ರಂದು ಕೂಡ ರಾಮಪ್ಪ ಮನೆಯಲ್ಲಿ ಹೆಂಡತಿಯೊಡನೆ ಜಗಳವಾಡಿದ್ದಾನೆ. ಜಗಳ ಮಾಡಿದ್ದರಿಂದ ತಂದೆಯ ಮೇಲೆ ಬೇಸತ್ತ ರಾಮಪ್ಪನ ಮಗ ಸಂತೋಷ್ ಈ ವೇಳೆ ತಂದೆಯ ಮೇಲೆಯೇ ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದಾನೆ. ತೀವ್ರ ನೋವಿನಿಂದ ಬಳಲುತ್ತಿದ್ದ ರಾಮಪ್ಪ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಉಳಿದಿದ್ದಾನೆ.
ಆದರೆ, ನೋವು ವಾಸಿಯಾಗದೇ ಮೃತಪಟ್ಟಿದ್ದಾನೆ. ಮಾಹಿತಿ ಹಿನ್ನೆಲೆಯಲ್ಲಿ ಮಾಯಕೊಂಡ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ. ಬಳಿಕ ರಾಮಪ್ಪನ ಮೃತದೇಹವನ್ನು ಪರೀಕ್ಷೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎತ್ತಿನಗಾಡಿಗೆ ಓಮ್ನಿ ಡಿಕ್ಕಿ: ಎತ್ತು ಸಾವು
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದ ತಿರುವಿನ ಬಳಿ ಎತ್ತಿನಗಾಡಿಗೆ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ಸುಮಾರು ಎಂಟು ಮಂದಿ ಗಾಯಗೊಂಡು, ಒಂದು ಎತ್ತು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಮತ್ತೊಂದು ಎತ್ತಿಗೆ ಹೊಡೆತ ಬಿದ್ದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಹಳ್ಳೂರು ಗ್ರಾಮದ ಮಹಿಳೆಯರು ಶಿಕಾರಿಪುರದ ಗಾರ್ಮೆಂಟ್ಸ್ಗೆ ಕೆಲಸಕ್ಕೆ ಹೋಗುತ್ತಿದ್ದರು. ಓಮ್ನಿಯಲ್ಲಿ ಚಾಲಕನು ಪ್ರತಿನಿತ್ಯವೂ ಮಹಿಳೆಯರನ್ನು ಕರೆದುಕೊಂಡು ಹೋಗಿ ಬರುತ್ತಿದ್ದ. ಶಿಕಾರಿಪುರದಿಂದ ಹೊನ್ನಾಳಿ ಮಾರ್ಗದ ಕಡೆ ಹೋಗುತ್ತಿದ್ದ ಓಮ್ನಿಯು ಸೊರಟೂರು ತಿರುವಿನ ಬಳಿ ಜಮೀನಿಗೆ ಹೋಗಿ ಕೆಲಸ ಮುಗಿಸಿ ಎತ್ತಿನಗಾಡಿಯಲ್ಲಿ ರೈತ ಬರುವಾಗ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಗಾಯಗೊಂಡವರನ್ನು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಎರಡು ಆ್ಯಂಬುಲೆನ್ಸ್ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕೂಡಲೇ ಕರೆದೊಯ್ಯಲಾಯಿತು. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಚಾಲಕ ಪರಾರಿಯಾಗಿದ್ದಾನೆ. ಮತ್ತೊಂದು ಎತ್ತು ಗಂಭೀರವಾಗಿ ಗಾಯಗೊಂಡಿದೆ.
ಈ ವೇಳೆ ಮಾರ್ಗಮಧ್ಯೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ತೆರಳುತ್ತಿದ್ದರು. ಅಪಘಾತ ನಡೆದ ಸ್ಥಳದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಮಾತ್ರವಲ್ಲ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿದರು.
Recommended Video
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಹೊನ್ನಾಳಿ ಸರ್ಕಲ್ ಇನ್ಸ್ಸ್ಪೆಕ್ಟರ್ ದೇವರಾಜ್ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು. ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಬಹುತೇಕರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.