ಮಳೆಗೆ ಬೆಣ್ಣೆನಗರಿ ಜನರು ತತ್ತರ: ಬೆಳೆ ನಷ್ಟ ಅಂದಾಜಿಸುವುದೇ ಸವಾಲು!
ದಾವಣಗೆರೆ, ಆಗಸ್ಟ್ 8: ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ನಷ್ಟ ಹೆಚ್ಚಾಗುತ್ತಲೇ ಇದೆ. ದಿನದಿನಕ್ಕೂ ಹೆಚ್ಚುತ್ತಿರುವ ವರುಣನ ಆರ್ಭಟಕ್ಕೆ ರೈತಾಪಿ ವರ್ಗ ಕಂಗಾಲಾಗಿದೆ. ನಷ್ಟ ಎಷ್ಟಾಗಿದೆ? ಎಂಬುದನ್ನು ಅಂದಾಜಿಸುವುದೇ ಕಷ್ವವಾಗಿದೆ.
ಹೊನ್ನಾಳಿ, ಚನ್ನಗಿರಿ ಸೇರಿದಂತೆ ಹಲವೆಡೆ ವರುಣಾಘಾತಕ್ಕೆ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ನೀರುಪಾಲಾಗಿದೆ. ಮೆಕ್ಕೆಜೋಳ, ಭತ್ತ, ತರಕಾರಿ, ಅಡಿಕೆ ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ. ಮಳೆ ಶುರುವಾದಾಗಿನಿಂದ ಇಲ್ಲಿಯವರೆಗೆ ಅಂದಾಜಿನ ಪ್ರಕಾರ ಲಕ್ಷಾಂತರ ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ.
Just in : ಬೆಳಗಾವಿಯಲ್ಲಿ ಸೋಮವಾರವೂ ಮಳೆ ಆರ್ಭಟ, ಕಟ್ಟಡ ಕುಸಿತ, ಶಾಲೆಗೆ ರಜೆ
ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಶಾಂತಿನಗರ, ಎಕೆ ಕಾಲೋನಿ ಮನೆಗಳಿಗೆ ಹಾನಿಯಾಗಿದೆ. ನ್ಯಾಮತಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆದಿದ್ದ ತರಕಾರಿ ಬೆಳೆಗಳು ಕೊಚ್ಚಿ ಹೋಗಿವೆ. ಮಾದನಬಾವಿ, ಬಸವನಹಳ್ಳಿ, ದೊಡ್ಡೇರಿ, ಟಿ. ಜಿ. ಹಳ್ಳಿ, ಹೊಸಮಳಲಿ, ಹಳೆಮಳಲಿ, ಚೀಲೂರು ಸೇರಿದಂತೆ ಹಲವೆಡೆ ಮನೆ ಕುಸಿತ, ಬೆಳೆ ಹಾನಿಯಾಗಿದೆ.
ಜಲಾವೃತವಾದ ಬೆಳೆಗಳು
ತಗ್ಗಿಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿತ್ತು. ಟಿ. ಗೋಪನಹಳ್ಳಿ ಗ್ರಾಮದಲ್ಲಿಯೂ ಹಲವು ಮನೆಗಳು ಧಾರಶಾಹಿಯಾಗಿವೆ. ದೊಡ್ಡೇರಿ ಗ್ರಾಮದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದರೆ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನೀರಿನಿಂದ ಆವೃತಗೊಂಡಿವೆ. ಬಸವನಹಳ್ಳಿ, ಅರಬಗಟ್ಟೆ ಗ್ರಾಮಗಳ ಗಡಿ ಭಾಗದಲ್ಲಿಯೂ ಬೆಳೆಗಳು ಹಾಳಾಗಿವೆ.
ಎಂ. ಪಿ. ರೇಣುಕಾಚಾರ್ಯ ಭೇಟಿ
ಮಾದನಬಾವಿ ಗ್ರಾಮದಲ್ಲಿ ಮಳೆ ಹೊಡೆತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಹೊನ್ನಾಳಿ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಲಿಂಗಾಪುರದಲ್ಲಿ ಮನೆಗಳು ಧರೆಗುರುಳಿವೆ. ಹನಗವಾಡಿಯಲ್ಲೂ ಮನೆಗಳು ಬಿದ್ದಿವೆ. ಚಿಕ್ಕಬಾಸೂರು ಗ್ರಾಮದಲ್ಲಿ ಮನೆಗಳನ್ನು ಕಳೆದುಕೊಂಡವರ ಗೋಳು ಹೇಳತೀರದ್ದು. ಈ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಎಂ. ಪಿ. ರೇಣುಕಾಚಾರ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪರಿಹಾರ ಬಿಡುಗಡೆಗೊಳಿಸಲು ಸಿಎಂಗೆ ಒತ್ತಾಯ
ಯಾರು ರಜೆ ಹಾಕುವಂತಿಲ್ಲ. ಹೊನ್ನಾಳಿ - ನ್ಯಾಮತಿ ತಾಲೂಕಿನ ಜನರು ಮಳೆ, ಪ್ರವಾಹದಿಂದ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಧಾವಿಸಬೇಕು. ಜನರಿದ್ದರೆ ನಾವು. ಇಂಥ ಸಂಕಷ್ಟದ ಕಾಲದಲ್ಲಿ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ನಾನು ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಆದಷ್ಟು ಬೇಗ ಸರಕಾರದಿಂದ ಪರಿಹಾರ ಬಿಡುಗಡೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರಲಾಗುವುದು. ಅಧಿಕಾರಿಗಳು ನನ್ನ ವೇಗಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದು ಶಾಸಕ ರೇಣುಕಾಚಾರ್ಯ ತಾಕೀತು ಮಾಡಿದರು.
ಮೆಕ್ಕೆಜೋಳ, ಹತ್ತಿ, ಹೆಸರು ಬೇಳೆ ಹಾನಿ
ಚನ್ನಗಿರಿ ತಾಲೂಕಿನಾದ್ಯಂತ ಆಶ್ಲೇಷ ಮಳೆ ಆರ್ಭಟಿಸಿದ್ದು, ರೈತರ ಬದುಕು ಮೂರಾಬಟ್ಟೆಯಾಗುವಂತೆ ಮಾಡಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆದಿದ್ದ 1318 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಮೆಕ್ಕೆಜೋಳ, ಹತ್ತಿ, ಹೆಸರು ಬೇಳೆ ಹಾಳಾಗಿದೆ. ಇನ್ನು ಮಳೆಯಿಂದ ಹಾನಿಗೀಡಾಗಿ ನಷ್ಟ ಅನುಭವಿಸಿದ ಮೇಲೂ 22 ಸಾವಿರ ಎಕರೆ ಪ್ರದೇಶದಲ್ಲಿ ಮತ್ತೆ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಆದರೆ ಈಗ ಸುರಿಯುತ್ತಿರುವ ಮಳೆಯಿಂದ ಅದೂ ಹಾಳಾಗಿದ್ದು, ರೈತರು ಚಿಂತಾಕ್ರಾಂತರಾಗಿದ್ದಾರೆ.
ಇನ್ನು ನವಿಲೇಹಾಳ್ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಹಸು ಬಿದ್ದು ಸಾವು ಕಂಡ ಘಟನೆ ನಡೆದಿದೆ. ಗ್ರಾಮದ ರಾಜಸಾಬ್ ಅವರಿಗೆ ಸೇರಿದ ಹಸು ಆಗಿದ್ದು, ಮೇಯುವಾಗ ಹಸು ಕಾಲು ಜಾರಿಬಿದ್ದಿದೆ. ಗ್ರಾಮ ಲೆಕ್ಕಿಗ ಬಸವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹರಿಹರ ತಾಲೂಕಿನಲ್ಲಿ ಹರಿಯುವ ತುಂಗಾಭದ್ರಾ ನದಿ ಒಳಹರಿವಿನ ಪ್ರಮಾಣ ಕಡಿಮೆ ಆಗಿದೆ. ಭದ್ರಾ ಜಲಾಶಯದಿಂದ ನೀರು ಹೊರಕ್ಕೆ ಬಿಟ್ಟಿದ್ದರಿಂದ ಹರಿವಿನ ಪ್ರಮಾಣ ಹೆಚ್ಚಾಗಿತ್ತು. ಆದರೆ ಇಂದು ಕಡಿಮೆಯಾಗಿದೆ. ಒಂದು ಸಾವಿರ ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳಕ್ಕೆ ಶೀತಬಾಧೆ ಕಾಣಿಸಿಕೊಂಡಿದೆ. ಇದು ರೈತರಿಗೆ ತಲೆನೋವು ತಂದಿದೆ. ಒಟ್ಟಾರೆ ಜಿಲ್ಲೆಯ ಜನರು ಹಾಗೂ ರೈತರು ಮಳೆ ಕಾಟಕ್ಕೆ ರೋಸಿ ಹೋಗಿರುವುದಂತೂ ನಿಜ.
Recommended Video