ದಾವಣಗೆರೆ: ದಕ್ಷಿಣ ಕಾಶಿ ತೀರ್ಥರಾಮೇಶ್ವರದಲ್ಲಿ ಫಾಲ್ಸ್ಗಳ ಸೊಬಗು!
ದಾವಣಗೆರೆ, ಜುಲೈ 24: ಅದು ದಕ್ಷಿಣ ಕಾಶಿ ಅಂತಾನೇ ಫೇಮಸ್, ಭಕ್ತರ ಪಾಲಿನ ಆರಾಧ್ಯ ಸ್ಥಳ, ಜಿಲ್ಲೆ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಈ ಪವಿತ್ರ ಸ್ಥಳಕ್ಕೆ ಬರುತ್ತಾರೆ. ಇಂಥ ತಾಣ ತೀರ್ಥರಾಮೇಶ್ವರ ಈಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ದೇಗುಲದ ಸುತ್ತಮುತ್ತ ಹಲವು ನೀರಿನ ಸೆಲೆಯುಳ್ಳ ಝರಿಗಳ ಜುಳುಜುಳು ನಿನಾದ ಕೇಳಿ ಬರುತ್ತಿದೆ. ಅಂದ ಹಾಗೆ ಈ ಸ್ಥಳ ಇರುವುದು ನ್ಯಾಮತಿ ತಾಲ್ಲೂಕಿನ ಬೆಳಗುತ್ತಿಯಿಂದ ಎರಡು ಕಿ.ಮೀ ದೂರದಲ್ಲಿರುವ ಬೆಟ್ಟದ ಮೇಲೆ ನೆಲೆಸಿರುವ ತೀರ್ಥರಾಮೇಶ್ವರ ದೇಗುಲ ಶ್ರದ್ಧಾ ಭಕ್ತಿಯ ತಾಣ. ಮಳೆಯು ಧಾರಾಕಾರವಾಗಿ ಸುರಿದಿರುವುದರಿಂದ ಕೃತಕ ಫಾಲ್ಸ್ಗಳು ಮೈದೆಳೆದಿದ್ದು, ಇಲ್ಲಿಗೆ ಬರುವವರಲ್ಲಿ ರೋಮಾಂಚನ ಉಂಟು ಮಾಡುತ್ತಿದೆ.
ಎತ್ತ ನೋಡಿದರೂ ಪ್ರಕೃತಿಯ ಸೌಂದರ್ಯ. ಬೆಟ್ಟದ ಮೇಲೆ ನೆಲೆಸಿರುವ ತೀರ್ಥರಾಮೇಶ್ವರ ಸನ್ನಿಧಿ. ಈಗ ಭಕ್ತರಷ್ಟೇ ಅಲ್ಲ, ಪ್ರವಾಸಿಗರ ಹಾಟ್ ಫೇವರಿಟ್ ತಾಣವಾಗಿಬಿಟ್ಟಿದೆ. ಯಾಕೆಂದರೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಲ ವೈಭವ ಸೃಷ್ಟಿಯಾಗಿದೆ. ಸಣ್ಣ ಸಣ್ಣ ಝರಿಯಾಗಿ ಹರಿಯುತ್ತಿರುವ ನೀರು ಸೌಂದರ್ಯ ಲೋಕವನ್ನೇ ಸೃಷ್ಟಿಸಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಈ ಸನ್ನಿಧಿಗೆ ಸ್ಥಳೀಯರು ಇಲ್ಲಿಗೆ ಹೋಗಿ ಮೋಜು ಮಸ್ತಿ ಮಾಡುತ್ತಾರೆ. ಚಿಕ್ಕ ಫಾಲ್ಸ್ಗಳು ಇಲ್ಲಿ ನೋಡುಗರ ಕಣ್ಮನ ಸೆಳೆಯುತ್ತಿವೆ. ಈಗ ನೀರಿನಿಂದ ತುಂಬಿ ತುಳುಕುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಪ್ರಾಕೃತಿಕ ಸೌಂದರ್ಯದ ಮಧ್ಯೆ ನೆಲೆಸಿರುವ ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂತಲೂ ಸಹ ಸ್ಥಳೀಯವಾಗಿ ಕರೆಯಲಾಗುತ್ತದೆ. ಮಳೆಯಿಂದಾಗಿ ದೇಗುಲಕ್ಕೆ ಹೊಸ ಕಳೆ ಬಂದಿದ್ದು, ಮಿನಿ ಫಾಲ್ಸ್ನಂತೆ ನೀರು ಹರಿಯುತ್ತಿದೆ. ಈ ವಿಹಂಗಮ ನೋಟಕ್ಕೆ ಜನರು ಫೀದಾ ಆಗಿದ್ದಾರೆ.
ಬಯಲುಸೀಮೆ ಪ್ರದೇಶದ ಮಧ್ಯದಲ್ಲಿರುವ ಪ್ರವಾಸಿ ಕೇಂದ್ರ ತೀರ್ಥರಾಮೇಶ್ವರ ಈಗ ಥೇಟ್ ಮಲೆನಾಡಿನ ಸೊಬಗು ಹೊದ್ದುಕೊಂಡಿದೆ. ಭಕ್ತರು ಹಾಗೂ ಪ್ರವಾಸಿಗರ ಮನ ಪುಳಕಿತಗೊಳ್ಳುವಂತಹ ವಾತಾವರಣ ನಿರ್ಮಾಣವಾಗಿದೆ.
ವರ್ಷ ಪೂರ್ತಿ ಇಲ್ಲಿ ನೀರು ಹರಿಯುತ್ತಿದ್ದು, ಎಂದಿಗೂ ಬತ್ತುವುದಿಲ್ಲ. ಈ ನೀರಿನಲ್ಲಿ ಮಿಂದೆದ್ದರೆ ಸಕಲ ದೋಷಗಳು, ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದ್ದು, ಇದರ ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದ ಕಲ್ಯಾಣಿಯ ನೀರನ್ನು ಬಿಂದಿಗೆಗಳಲ್ಲಿ ತೆಗೆದುಕೊಂಡು ಬೇರೆಡೆ ಹೋಗಿ ಭಕ್ತಾದಿಗಳು ಸ್ನಾನ ಮಾಡುತ್ತಾರೆ.
ಹದಿನೈದು ಕಿ.ಮೀ ದೂರದ ಬೆಟ್ಟದ ತಪ್ಪಲಿನ ಪ್ರಕೃತಿಯ ಮಡಿಲಲ್ಲಿ ನೆಲೆಗೊಂಡ ತೀರ್ಥರಾಮೇಶ್ವರ ದೇವಸ್ಥಾನ, ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳವೂ ಹೌದು. ಈಗ ಮಳೆಯಿಂದಾಗಿ ಹೊಸ ಲೋಕ ಮೈದೆಳೆದಿದ್ದು, ಜನರು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ.