ದಾವಣಗೆರೆ; ಪತ್ನಿ, ಆಕೆಯ ಪ್ರಿಯಕರನನ್ನು ಕೊಂದ ಶಿಕ್ಷಕ ಅರೆಸ್ಟ್
ದಾವಣಗೆರೆ, ನವೆಂಬರ್ 2: ಪತ್ನಿಯ ಅನೈತಿಕ ಸಂಬಂಧದ ವಿಷಯವಾಗಿ ಶಿಕ್ಷಕನೊಬ್ಬ ತನ್ನ ಸಹೋದರನ ಜೊತೆ ಸೇರಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದು, ಎರಡು ದಿನಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹೊಳಲ್ಕೆರೆ ನಿವಾಸಿ, ಖಾಸಗಿ ಶಾಲೆಯೊಂದರ ಶಿಕ್ಷಕ ಶಿವಕುಮಾರ್ (32) ಬಂಧಿತ ಆರೋಪಿ. ಈತನ ಪತ್ನಿ ಶ್ವೇತಾ (26) ಹಾಗೂ ಪ್ರಿಯಕರ ವೇದಮೂರ್ತಿ (26) ಕೊಲೆಯಾದವರು. ಕೊಲೆಗೆ ಸಹಕರಿಸಿದ ಶಿವರಾಜ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಅನೈತಿಕ ಸಂಬಂಧ ಶಂಕೆ; ಪತ್ನಿಗೆ ಚಾಕು ಇರಿದು ಕೊಲೆ ಮಾಡಿದ ಪತಿ
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಎಸ್ಪಿ ಹನುಮಂತರಾಯ ಮಾಹಿತಿ ನೀಡಿದ್ದು, ಶಿವಕುಮಾರ್ನನ್ನು ಬೆಂಗಳೂರಿನಲ್ಲಿ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಶಿವಕುಮಾರ್ ಪತ್ನಿ ಶ್ವೇತಾ, ವೇದಮೂರ್ತಿಯೊಂದಿಗೆ ಕಳೆದ ಆರು ತಿಂಗಳಿನಿಂದ ಓಡಾಡಿಕೊಂಡಿದ್ದು, ಶಿವಕುಮಾರ್ ಗೆ ವಿಷಯ ತಿಳಿದು, ತನ್ನ ತಮ್ಮನನ್ನು ಕರೆದುಕೊಂಡು ಹೊನ್ನಾಳಿಗೆ ಹೋಗಿ, ತನ್ನ ಹೆಂಡತಿ ಜತೆಗಿದ್ದ ವೇದಮೂರ್ತಿಯನ್ನು ಕೊಲೆ ಮಾಡಿದ್ದ.
ಹೊನ್ನಾಳಿ ಹೊಳೆ ದಂಡೆ ಬಳಿ ಅ.28ರಂದು ವೇದಮೂರ್ತಿಯನ್ನು ಕತ್ತು ಹಿಸುಕಿ ಸಾಯಿಸಿ ನೀರಿನಲ್ಲಿ ಎಸೆದು ಹೋಗಿದ್ದರು. ಬಳಿಕ 'ನಮ್ಮ ಮೇಲೆ ಆಪಾದನೆ ಬರುತ್ತದೆ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳೋಣ' ಎಂದು ಹೆಂಡತಿ ಬಳಿ ನಾಟಕವಾಡಿದ ಶಿವಕುಮಾರ್ ಪತ್ನಿಯನ್ನು ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಸಾಯಿಸಲು ಸಾಧ್ಯವಾಗದೇ, ರಾಜಗೊಂಡನಹಳ್ಳಿ ಗ್ರಾಮದ ತೋಟದ ಬಳಿ ಉಸಿರುಗಟ್ಟಿಸಿ ಅ.29ರಂದು ಕೊಲೆ ಮಾಡಿ ಅನುಮಾನ ಬಾರದಂತೆ ಬಾವಿಯಲ್ಲಿ ಎಸೆದು ಹೋಗಿದ್ದ.
ಶಿವಕುಮಾರ್ ಶ್ವೇತಾಳನ್ನು 9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ್ ಹಾಗೂ ಹೆಂಡತಿ ನಡುವೆ ವೇದಮೂರ್ತಿ ವಿಷಯವಾಗಿ ಹಲವು ಬಾರಿ ಜಗಳ ನಡೆದಿತ್ತು.
Recommended Video
ವೇದಮೂರ್ತಿ ಕೊಲೆ ಪ್ರಕರಣ ಹೊನ್ನಾಳಿ ಠಾಣೆಯಲ್ಲಿ ಹಾಗೂ ಶ್ವೇತಾ ಕೊಲೆ ಪ್ರಕರಣ ಚನ್ನಗಿರಿ ಠಾಣೆಯಲ್ಲಿ ದಾಖಲಾಗಿದ್ದು, ಈ ಎರಡು ಠಾಣೆಗಳ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಾದ 48 ಗಂಟೆಗಳಲ್ಲಿ, ಬೆಂಗಳೂರಿನ ಸಹೋದರಿ ಮನೆಯಲ್ಲಿದ್ದ ಆರೋಪಿ ಶಿವಕುಮಾರ್ನನ್ನು ಭಾನುವಾರ ಪೊಲೀಸರ ತಂಡ ಬಂಧಿಸಿದೆ.