ಜೋಳಿಗೆ ಹಿಡಿದು ದುಶ್ಚಟ ಬಿಡಿಸುವ ಬಸವಪ್ರಭು ಸ್ವಾಮೀಜಿ
Recommended Video
ದಾವಣಗೆರೆ, ಆಗಸ್ಟ್ 3: ಶ್ರಾವಣ ಮಾಸ ಬರುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಪೂಜೆ ಪುನಸ್ಕಾರಗಳಿಗಂತೂ ಕಡಿಮೆಯಿಲ್ಲ. ಆದರೆ ಈ ಊರಲ್ಲಿ ಶ್ರಾವಣ ಮಾಸ ಬರುತ್ತಿದ್ದಂತೆ ಸ್ವಾಮೀಜಿಯೊಬ್ಬರು ಜೋಳಿಗೆ ಹಿಡಿದು ಮನೆ ಮನೆಗೆ ತಿರುಗುವುದು ಕಂಡುಬರುತ್ತದೆ. ಅದೂ ವಿಶೇಷವಾದ ದೇಣಿಗೆ ಕೇಳಲು.
ಹೆಗಲಿಗೆ ಜೋಳಿಗೆ ಹಾಕಿಕೊಂಡು ಭಿನ್ನ ಉದ್ದೇಶದೊಂದಿಗೆ ಮನೆ ಮನೆ ಸುತ್ತುವವರು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ. ಇವರು ಮಠಕ್ಕೊ, ಶಾಲೆಗೋ ದೇಣಿಗೆ ಕೇಳಲು ಹೀಗೆ ಓಡಾಡುವುದಿಲ್ಲ. ಬದಲಿಗೆ ಜನರಲ್ಲಿನ ದುಶ್ಚಟ ಮತ್ತು ದುರಾಲೋಚನೆ ದೂರ ಮಾಡಲು ಪಣ ತೊಟ್ಟಿದ್ದಾರೆ.
ಕಲ್ಲ ಹಾವಿಗೆ ಹಾಲೆರೆಯಬೇಡಿ; ಅದನ್ನೇ ಮಕ್ಕಳಿಗೆ ಕೊಡಿ: ಜಯಮೃತ್ಯುಂಜಯ ಸ್ವಾಮೀಜಿ
ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿಗಳು ಮನೆ ಮನೆಗೆ ಹೋಗಿ ಮದ್ಯದ ಬಾಟಲಿ, ಗುಟ್ಖಾ ಚೀಟಿ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ಜೋಳಿಗೆಯಲ್ಲಿ ಹಾಕಿಸಿಕೊಳ್ಳುತ್ತಾರೆ. ಈ ಕಾರ್ಯ ಸತತ 11 ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಪ್ರತಿ ವರ್ಷ ಶ್ರಾವಣದಲ್ಲಿ ಜೋಳಿಗೆ ಹಿಡಿದು ದುಶ್ಚಟ ದೂರ ಮಾಡುವ ಪ್ರಯತ್ನದಲ್ಲಿ ತೊಡಗಿಕೊಳ್ಳುತ್ತಾರೆ.
ಜೋಳಿಗೆಯಲ್ಲಿ ಇಂಥ ವಸ್ತುಗಳನ್ನು ಹಾಕಿಸಿಕೊಂಡ ಬಳಿಕ ವ್ಯಸನಿಗೆ ರುದ್ರಾಕ್ಷಿ ಕಟ್ಟಿ ಆತ್ಮಲಿಂಗದ ಮೇಲೆ ಪ್ರಮಾಣ ಮಾಡಿಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಜನರಲ್ಲಿ ದುಶ್ಚಟಗಳ ಬಗ್ಗೆ ಜಾಗೃತಿ ಮೂಡುತ್ತದೆ ಎಂಬ ನಂಬಿಕೆ. ಅದರಲ್ಲೂ ಶ್ರಾವಣದಲ್ಲಿ ಜನ ಭಕ್ತಿಭಾವದಿಂದ ಇರುವುದರಿಂದ ಅವರ ಮನ ವೊಲಿಸಿದರೆ ದುಶ್ಚಟ ಬಿಡುತ್ತಾರೆ ಎನ್ನುತ್ತಾರೆ ಶ್ರೀಗಳು.
ಕೃಷಿಯಲ್ಲಿ ಖುಷಿ ಕಾಣುವ ರುದ್ರೇಶ್ವರ ಸ್ವಾಮೀಜಿ
ಇಂಥ ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆಯನ್ನೂ ನೀಡುತ್ತಾರೆ ಇವರು. ಪ್ರತಿ ವರ್ಷ ಶ್ರಾವಣದಲ್ಲಿ ಜಯದೇವ ಜೋಳಿಗೆ ಎಂಬ ವಿನೂತನ ಕಾರ್ಯಕ್ರಮ ಮಾಡುವುದರಿಂದ ಸಾಕಷ್ಟು ಮಂದಿ ಮದ್ಯಪಾನ ಸೇರಿದಂತೆ ಚಟಗಳನ್ನು ತ್ಯಜಿಸಿದ ಉದಾಹರಣೆಗಳಿವೆ. ಒಟ್ಟಾರೆ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಸ್ವಾಮೀಜಿ ಜೋಳಿಗೆ ಹಿಡಿದು ಮನೆ ಮನೆ ಸುತ್ತುತ್ತಿರುವುದು ಶ್ಲಾಘನೀಯ.