ಕುರಿ ಕಡಿದು ಸುದೀಪ್ ಚಿತ್ರಕ್ಕೆ ರಕ್ತಾಭಿಷೇಕ ಮಾಡಿದ ಅಭಿಮಾನಿಗಳು; ಸುದೀಪ್ ಏನಂದ್ರು?
ದಾವಣಗೆರೆ, ಸೆಪ್ಟೆಂಬರ್ 12: ಕಿಚ್ಚ ಸುದೀಪ್ ನಟನೆಯ 'ಪೈಲ್ವಾನ್' ಚಿತ್ರ ಇಂದು ಬಿಡುಗಡೆ ಆಗಿದೆ. ಹಲವೆಡೆ ಸುದೀಪ್ ಅಭಿಮಾನಿಗಳು ಪಟಾಕಿ ಸಿಡಿಸಿ ಕಟೌಟ್ ಗೆ ಹಾರ ಹಾಕಿ ಸಂಭ್ರಮಿಸಿದ್ದಾರೆ. ಇನ್ನೂ ಕೆಲವೆಡೆ ಸುದೀಪ್ ಅಭಿಮಾನಿಗಳು ಸುದೀಪ್ ಪೋಸ್ಟರ್ ಗೆ ಕ್ಷೀರಾಭಿಷೇಕ ಮಾಡಿ ಅಭಿಮಾನ ಮೆರೆದಿದ್ದಾರೆ. ಆದರೆ ದಾವಣಗೆರೆಯಲ್ಲಿ ಅಭಿಮಾನಿಗಳು ಕುರಿ ಕಡಿದು ಸುದೀಪ್ ಪೋಸ್ಟರ್ ಗೆ ರಕ್ತಾಭಿಷೇಕ ಮಾಡಿದ್ದಾರೆ.
ಜಿಲ್ಲೆಯ ಜಗಳೂರು - ಚಳ್ಳಕೆರೆ ತಾಲೂಕುಗಳ ನಡುವೆ ಇರುವ ಮಲೇ ಬೋರನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಭಿಮಾನಿಗಳು ಸುದೀಪ್ ಅವರ ಪೋಸ್ಟರ್ಗೆ ಕುರಿ ಕಡಿದು ರಕ್ತಾಭಿಷೇಕ ಮಾಡಿದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರೀತಿಯ ತಮ್ಮನ 'ಪೈಲ್ವಾನ್' ಸಿನಿಮಾಗೆ ರೆಡ್ಡಿ ಶುಭ ಹಾರೈಕೆ
ಅಭಿಮಾನಿಗಳ ಈ ವರ್ತನೆಗೆ ನಟ ಸುದೀಪ್ ಟ್ವಿಟರ್ ನಲ್ಲಿ, "ಈ ರೀತಿಯ ಕೃತ್ಯ ನಡೆಸುತ್ತಿರುವುದು ನಿಜಕ್ಕೂ ಅಮಾನವೀಯ. ನಾನು ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತೇನೆ ದಯವಿಟ್ಟು ಇದನ್ನು ನಿಲ್ಲಿಸಿ. ಪೈಲ್ವಾನ್ ಚಿತ್ರತಂಡ ನಿಮ್ಮ ಈ ರೀತಿಯ ಪ್ರೀತಿ ಹಾಗೂ ಗೌರವ ನೋಡಲು ಇಷ್ಟಪಡುವುದಿಲ್ಲ. ದಯವಿಟ್ಟು ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಲ್ಲಿಸಿ" ಎಂದು ಮನವಿ ಮಾಡಿದ್ದಾರೆ.
ಇದರ ಜೊತೆಗೆ ದಾವಣಗೆರೆಯಲ್ಲಿ ಸುದೀಪ್ ಅಭಿಮಾನಿ ಸಂಘದ ಸದಸ್ಯರು ದಾವಣಗೆರೆಯ ಪ್ರಮುಖ ಪೈಲ್ವಾನ್ಗಳನ್ನು ಚಿತ್ರಮಂದಿರಕ್ಕೆ ಕರೆಸಿ ಸನ್ಮಾನ ಮಾಡುವ ಮೂಲಕ ವಿಭಿನ್ನವಾಗಿ ಸಂಭ್ರಮಿಸಿದ್ದಾರೆ.