ಗಣಪನ ಎತ್ತರಕ್ಕೆ ಬಂದ ಕುತ್ತು; ವಿಘ್ನ ನಿವಾರಕನ ಹಬ್ಬ ಆಚರಣೆಗೇ ವಿಘ್ನ?
ದಾವಣಗೆರೆ, ಆಗಸ್ಟ್ 30: ವಿಘ್ನೇಶ್ವರ ವಿಘ್ನ ವಿನಾಶಕ ಎನ್ನುತ್ತಾರೆ. ವಿನಾಯಕನನ್ನು ನೆನೆದು ಭಾದ್ರಪದ ಮಾಸದ ಚತುರ್ಥಿಯಂದು ಗಣಪತಿ ಉತ್ಸವವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಈ ವಿಘ್ನ ವಿನಾಶಕನ ಆರಾಧನೆಗೇ ಹತ್ತಾರು ವಿಘ್ನಗಳು ಶುರುವಾಗಿವೆ.
ಗಣೇಶ ಚತುರ್ಥಿ; ಪರಿಸರಸ್ನೇಹಿ ಗಣಪನ ಹಬ್ಬಕ್ಕೆ ದಾವಣಗೆರೆಯಲ್ಲಿ ತಯಾರಿ
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶದ ಜನರನ್ನು ಒಗ್ಗೂಡಿಸುವ ಸಲುವಾಗಿ ಬಾಲ ಗಂಗಾಧರ್ ತಿಲಕ್ ಅವರು ಸಾರ್ವಜನಿಕ ಗಣಪತಿ ಉತ್ಸವ ಆಚರಣೆ ಆರಂಭಿಸಿದರು. ಗಣೇಶೋತ್ಸವವನ್ನು ದೇಶದ ಎಲ್ಲ ಸಮುದಾಯಗಳ ನಡುವೆ ಭಾವೈಕ್ಯ ಮೂಡಿಸುವ ಹಬ್ಬವಾಗಿ ಬಿಂಬಿಸಿದರು. ಆದರೆ ಈಗ ಸಾರ್ವಜನಿಕ ಆಚರಣೆಗೇ ನೂರೆಂಟು ತಕರಾರು ಎದುರಾಗಿದೆ ಎಂದು ದೂರುತ್ತಿದ್ದಾರೆ ಜನರು.
ಕಳೆದ ಬಾರಿ ಡಿಜೆ ಬಳಕೆಗೆ ನಿರ್ಬಂಧ
ಹೊಸ ಸರ್ಕಾರ ಬಂದಾಗಲೆಲ್ಲ ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಒಂದಲ್ಲ ಒಂದು ಆದೇಶ ಬರುತ್ತದೆ. ಕಳೆದ ಸರ್ಕಾರವಿದ್ದಾಗ ಗಣೇಶ ಉತ್ಸವ ಮಾಡುವಾಗ ಡಿಜೆ ಬಳಸುವ ಹಾಗಿಲ್ಲ ಎನ್ನುವ ಆದೇಶ ಹೊರಡಿಸಲಾಗಿತ್ತು. ಆದರೆ ಈ ಬಾರಿ ಬಿಜೆಪಿ ಸರ್ಕಾರವೂ ಇಂಥದ್ದೇ ನಿಬಂಧನೆಯ ಆದೇಶವನ್ನು ಹೊರಡಿಸಿದೆ.
ವಿಘ್ನ ನಿವಾರಕ ಗಣೇಶನಿಗೇ ಇನ್ಸೂರೆನ್ಸ್: ಕಲಿಯುಗ ಕಣ್ರೀ..ಕಲಿಯುಗ
ಐದು ಅಡಿಗಿಂತ ಹೆಚ್ಚು ಎತ್ತರದ ಗಣಪನಿಗಿಲ್ಲ ಅನುಮತಿ
ಈ ಬಾರಿ ನಿಬಂಧನೆಗಳಲ್ಲಿ ಪ್ರಮುಖವಾದದ್ದು ಐದು ಅಡಿಗಳಿಗಿಂತ ಕಡಿಮೆ ಇರುವ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪನೆ ಮಾಡಬೇಕು ಎಂಬುದು. ಅದಕ್ಕಿಂತ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಲಾಗುವುದಿಲ್ಲ ಎನ್ನುವ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಇದರಿಂದ ಅದ್ಧೂರಿ ಗಣಪನನ್ನು ಪ್ರತಿಷ್ಠಾಪಿಸುವ ಯೋಜನೆ ರೂಪಿಸಿದ್ದವರು ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಈ ಆದೇಶವನ್ನು ವಿರೋಧಿಸಿ ಕೆಲ ಸಂಘ ಸಂಘಟನೆಗಳು ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದವು. ಅಲ್ಲದೇ ಗಣೇಶ ಉತ್ಸವಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹತ್ತು ಹಲವು ನಿಬಂಧನೆಗಳನ್ನು ವಿಧಿಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ.
ಅದ್ಧೂರಿ ಆಚರಣೆಗೆ ಬ್ರೇಕ್; ಪ್ರತಿಭಟನೆ
ಜಿಲ್ಲಾಧಿಕಾರಿಗಳ ಕಚೇರಿಗೆ ಈ ಆದೇಶದ ಪ್ರತಿಯನ್ನು ರವಾನೆ ಮಾಡಿದ್ದು, ಸರ್ಕಾರದ ಆದೇಶ ಪಾಲಿಸುವಂತೆ ತಿಳಿಸಲಾಗಿದೆ. ಪಾಲಿಕೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಪೋಲೀಸ್ ಇಲಾಖೆಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಅಲ್ಲದೆ ಗಣಪತಿ ಮೂರ್ತಿ 5 ಅಡಿ ಎತ್ತರ ಮೀರಬಾರದು ಎನ್ನುವುದರಿಂದ ವಿಘ್ನೇಶ್ವರನ ಅದ್ಧೂರಿ ಆರಾಧನೆಗೆ ಬ್ರೇಕ್ ಬಿದ್ದಂತಾಗಿದೆ. ಅಲ್ಲದೆ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಮಾಡುವ ಸಂಘ, ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಡಳಿತ ನಿಗದಿಪಡಿಸಿದ ನಿಯಮಾವಳಿ ಹಾಗೂ ಪರವಾನಗಿ ಪಡೆಯುವುದರಲ್ಲಿ ಹೈರಾಣಾಗಿದ್ದಾರೆ. ಈ ಕರ್ಮಕ್ಕೆ ಯಾಕಪ್ಪ ಗಣಪತಿ ಹಬ್ಬ ಆಚರಿಸಬೇಕು. ಯಾವ ಹಬ್ಬದಲ್ಲೂ ಇಲ್ಲದ ಇಷ್ಟೊಂದು ನಿಯಮಾವಳಿಗಳು ಗಣಪತಿ ಹಬ್ಬಕ್ಕೆ ಏಕೆ, ಕೇವಲ ಗಣೇಶೋತ್ಸವಕ್ಕೆ ಇಷ್ಟೆಲ್ಲ ನೀತಿ ನಿಯಮಗಳು? ಎಂದು ಸಾರ್ವಜನಿಕರು ಪ್ರಶ್ನೆಗಳನ್ನು ಇಡುತ್ತಿದ್ದಾರೆ.
ಜೆಪಿ ನಗರದಲ್ಲಿ 30 ಅಡಿ ಪರಿಸರ ಸ್ನೇಹಿ ʼತೆಂಗಿನಕಾಯಿ ಗಣೇಶʼ ದರ್ಶನ
ಹತ್ತಾರು ನಿಬಂಧನೆಗಳ ನಡುವೆ ಉತ್ಸವ?
ಸ್ಥಳೀಯ ಸಂಸ್ಥೆ, ಪೊಲೀಸ್ ಇಲಾಖೆ, ವಿದ್ಯುತ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಂದ ಹಬ್ಬ ಆಚರಣೆ ಮಾಡಲು ಅನುಮತಿ ಪಡೆಯಲೇಬೇಕು. ಅಧಿಕಾರಿಗಳು ಹೇಳಿದಂತೆ ಹಬ್ಬ ಆಚರಣೆ ಮಾಡಬೇಕು. ಅವರು ಹೇಳಿದ ರಸ್ತೆಯಲ್ಲೇ ಮೆರವಣಿಗೆ ಮಾಡಬೇಕು, ಧ್ವನಿವರ್ಧಕ ಬಳಸಲು ಅನುಮತಿ ಪಡೆಯಲು ಪರದಾಡಬೇಕು. ಇಂಥದೇ ಹಾಡನ್ನು ಮಾತ್ರ ಬಳಸಬೇಕು ಎಂಬ ನಿಬಂಧನೆಗಳು ಸಾರ್ವಜನಿಕ ಗಣಪತಿ ಉತ್ಸವ ಆಚರಣೆ ಮಾಡುವವರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ವಧರ್ಮಗಳ ಸಹಬಾಳ್ವೆಯ ಈ ಧಾರ್ಮಿಕ ಆಚರಣೆಗೆ ಅಧಿಕಾರಿಗಳ ನಿಬಂಧನೆಗಳು ಅಡ್ಡಿಯಾಗಿವೆ. ಇನ್ನಾದರೂ ಅತಿಯಾದ ನಿಬಂಧನೆಗಳಿಗೆ ಸರ್ಕಾರ ಬ್ರೇಕ್ ಹಾಕಬೇಕು. ಎಲ್ಲರೂ ಸಂಭ್ರಮದಿಂದ ಹಬ್ಬ ಆಚರಿಸಲು ಅನುವು ಮಾಡಿಕೊಡಬೇಕು.