ಜಗಳೂರಿನಲ್ಲಿ ಆದಿ ಶಿಲಾಯುಗದಿಂದ ಹೊಸ ಶಿಲಾಯುಗದವರೆಗೂ ಪ್ರಾಚ್ಯಾವಶೇಷ ಪತ್ತೆ
ದಾವಣಗೆರೆ, ಜುಲೈ 14 : ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಆಕನೂರು ಗ್ರಾಮದ ಜಿನಗಿಹಳ್ಳದ ಪಕ್ಕದಲ್ಲಿರುವ "ಬೂದಿಹೊಲ' ಎಂದು ಕರೆಯುವ ಹೊಲದಲ್ಲಿ ಆದಿ ಶಿಲಾಯುಗ (Lower Palaeolithic), ಆದಿ, ಮಧ್ಯಶಿಲಾಯುಗ, ಬೃಹತ್ ಶಿಲಾಯುಗ, ನೂತನ ಶಿಲಾಯುಗ ಹಾಗು ಇತಿಹಾಸ ಪೂರ್ವ ಕಾಲಕ್ಕೆ ಸಂಬಂಧಿಸಿದ ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ ಎಂದು ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಸೀಮಾ ರೆಹಮಾನ್ ಅವರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.
Recommended Video
ಚೀನಾ ವಸ್ತುಗಳ ನಿಷೇಧಕ್ಕೆ ದಾವಣಗೆರೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ಪ್ರಸ್ತುತ ಈ ಬೂದಿಹೊಲ ನೆಲೆಯನ್ನು ಬಿಟ್ಟು, ಆಕನೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ವಿದ್ವಾಂಸರು ಕ್ಷೇತ್ರ ಕಾರ್ಯಕೈಗೊಂಡು ಇಲ್ಲಿನ ಚರಿತ್ರೆಯನ್ನು ಬೆಳಕಿಗೆ ತಂದಿದ್ದಾರೆ. ಎಸ್.ವೈ ಸೋಮಶೇಖರ್ ಅವರು ಸಂಗೇನಹಳ್ಳಿ ಪರಿಸರದಲ್ಲಿ ಆದಿ, ಮಧ್ಯಶಿಲಾಯುಗದ ಉಪಕರಣಗಳನ್ನು ಪತ್ತೆ ಹಚ್ಚಿದ್ದು, ಇದರ ಕಾಲವು 40,000 ವರ್ಷಗಳಷ್ಟು ಪ್ರಾಚೀನವಾದುದು ಎಂದು ಹೇಳಿದ್ದಾರೆ.
ಎರಡು ಕೈಕೊಡಲಿಗಳು ದೊರಕಿವೆ
ಆದರೆ ಇತ್ತೀಚೆಗೆ ಕೈಗೊಂಡ ಕ್ಷೇತ್ರ ಕಾರ್ಯ ಸಂಶೋಧನೆಯಲ್ಲಿ ಆದಿ, ಮಧ್ಯ ಶಿಲಾಯುಗಕ್ಕೂ ಹಿಂದಿನ ಕಾಲಘಟ್ಟವಾದ ಆದಿ ಶಿಲಾಯುಗಕ್ಕೂ (Lower Palaeolithic) ಸೇರಿದ ಎರಡು ಕೈಕೊಡಲಿಗಳು ದೊರಕಿವೆ. ಒಂದು ಕೈ ಕೊಡಲಿಯು 17 ಸೆಂ.ಮೀ ಉದ್ದ ಮತ್ತು 9 ಸೆಂ.ಮೀ ಅಗಲವನ್ನು ಹೊಂದಿದೆ. 18 ಸೆಂ.ಮೀ ಉದ್ದ ಮತ್ತು 8 ಸೆಂ.ಮೀ ಅಗಲವನ್ನು ಹೊಂದಿದೆ. ಇದು ಜಗಳೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಮಹತ್ತರವಾದ ಶೋಧನವಾಗಿದೆ.
ಪ್ರಾಣಿಗಳ ಬೇಟೆಗೆ ಉಪಯೋಗ
ಇದರ ಜೊತೆಗೆ ಆದಿ, ಮಧ್ಯ ಶಿಲಾಯುಗಕ್ಕೆ ಸಂಬಂಧಿಸಿದಂತೆ ಕಲ್ಲಿನಿಂದ ಕಲ್ಲಿಗೆ ಹೊಡೆದು ತಯಾರಿಸಿದ ಉಪಕರಣಗಳು ಈ ನೆಲದಲ್ಲಿ ಪತ್ತೆಯಾಗಿವೆ. ಇದನ್ನು ಅಶೂಲಿಯನ್ ಮಾದರಿ ಉಪಕರಣಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಪ್ರಾಣಿಗಳ ಬೇಟೆಗೆ ಮತ್ತು ಇತರೆ ದೈನಂದಿನ ಚಟುವಟಿಕೆಗಳಿಗೆ ಉಪಯೋಗಿಸಲಾಗುತ್ತಿತ್ತು.
ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದಂತೆ ಕೆಂಪು, ಕಪ್ಪು ವರ್ಣದ ಮಡಿಕೆಗಳು, ಬಿಳಿ ವರ್ಣದ ರೇಖೆಯನ್ನು ಒಳಗೊಂಡ ಮಡಿಕೆ ಚೂರುಗಳು, ಕಬ್ಬಿಣದ ಕಿಟ್ಟಗಳು ದೊರೆತಿದೆ. ಇದರ ಜೊತೆಯಲ್ಲಿ ಉಂಗುರಾಕೃತಿಯ ಕಲ್ಲು ಚೂರುಗಳು ಪತ್ತೆಯಾಗಿವೆ.
ಕೊಡಲಿ ಮತ್ತು ಸುತ್ತಿಗೆಯನ್ನು ಪತ್ತೆ ಮಾಡಲಾಗಿದೆ
ಈ ನೆಲೆಯಿಂದ ಒಂದು ಕಿ.ಮೀ ದೂರದಲ್ಲಿ ಈ ಮೊದಲು ನಾವು ಕ್ಷೇತ್ರಕಾರ್ಯ ಕೈಗೊಂಡಿದ್ದು, ಇಲ್ಲಿ ಸೂಕ್ಷ್ಮ ಶಿಲಾಯುಗದ ಉಪಕರಣಗಳು, ಬೃಹತ್ ಶಿಲಾಯುಗಕ್ಕೆ ಸೇರಿದ ಕುಟ್ಟಿ ಮಾಡಿದ ಬಂಡೆ ಚಿತ್ರಗಳು, ರೇಖಾ ಚಿತ್ರಗಳು, ವೃತ್ತ ಸಮಾಧಿ ಹಾಗೂ ನೂತನ ಶಿಲಾಯುಗಕ್ಕೆ ಸಂಬಂಧಿಸಿದಂತೆ ಕಲ್ಲಿನ ಕೊಡಲಿ ಮತ್ತು ಸುತ್ತಿಗೆಯನ್ನು ಪತ್ತೆ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಪತ್ತೆಯಾಯ್ತು ಇತಿಹಾಸದ ಕಥೆ ಹೇಳುವ ಮಹಿಳಾ ನಿಷಿಧಿ ಶಾಸನ
ಈ ನೆಲೆಯ ಸಂಶೋಧನೆಗೆ ಮತ್ತಷ್ಟು ಪುಷ್ಠಿಯನ್ನು ನೀಡಿದೆ
ಕ್ಷೇತ್ರ ಕಾರ್ಯ ಶೋಧನೆಯಲ್ಲಿ ದೊರೆತಿರುವ ಈ ಎಲ್ಲಾ ಪ್ರಾಚ್ಯಾವಶೇಷಗಳನ್ನು ಗಮನದಲ್ಲಿಟ್ಟುಕೊಂಡು ಜಗಳೂರು ತಾಲ್ಲೂಕು ಆದಿ ಶಿಲಾಯುಗದಿಂದ ಚಾರಿತ್ರಿಕ ಕಾಲಘಟ್ಟದವರೆಗಿನ ವಿವಿಧ ಹಂತಗಳಲ್ಲಿ ಮಾನವನ ನೆಲೆಯಾಗಿದ್ದು, ಅದರಲ್ಲೂ ಮುಖ್ಯವಾಗಿ ಜಿನಗಿಹಳ್ಳದ ಪ್ರದೇಶದಲ್ಲಿ ದೊರೆತಿರುವ ಆದಿ ಶಿಲಾಯುಗದ ಪ್ರಾಚ್ಯಾವಶೇಷಗಳು ಈ ನೆಲೆಯ ಸಂಶೋಧನೆಗೆ ಮತ್ತಷ್ಟು ಪುಷ್ಠಿಯನ್ನು ನೀಡಿದೆ. ಹೆಚ್ಚಿನ ಅಧ್ಯಯನವನ್ನು ಮುಂದುವರೆದಿದೆ ಎಂದು ಸಂಶೋಧಕಿ ಸೀಮಾ ರೆಹಮಾನ್ ಹೇಳಿದ್ದಾರೆ.
ಈ ನೆಲೆಯಲ್ಲಿ ದೊರೆತಿರುವಂತಹ ಪ್ರಾಚ್ಯಾವಶೇಷಗಳ ಬಗ್ಗೆ ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮತ್ತು ಸುಪ್ರೀತಾ ಕೆ.ಎನ್. ಕಳಸ ಅವರು ಮಾಹಿತಿಯನ್ನು ನೀಡಿ ಸಹಕರಿಸಿದ್ದು, ಕ್ಷೇತ್ರ ಕಾರ್ಯ ಶೋಧನೆಯಲ್ಲಿ ಸ್ಥಳೀಯರಾದ ನಾಗೇಶ್ ಅವರು ಸಹ ಸಹಕಾರ ನೀಡಿದ್ದಾರೆ.