ಡಿಸಿಎಂ ಲಕ್ಷ್ಮಣ ಸವದಿಗೆ ಹೀಗಾ ರೇಣುಕಾಚಾರ್ಯ ಕ್ಲಾಸ್ ತೆಗೆದುಕೊಳ್ಳುವುದು?
ದಾವಣಗೆರೆ, ಅ 28: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯನ್ನು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಅನರ್ಹ ಶಾಸಕರ ವಿಚಾರದಲ್ಲಿ ಸವದಿ ನೀಡಿದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ರೇಣುಕಾಚಾರ್ಯ, "ಅಲ್ಪನಿಗೆ ಐಶ್ವರ್ಯ ಬಂದರೆ, ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದುಕೊಂಡಂತೆ" ಎಂದು ಲೇವಡಿ ಮಾಡಿದ್ದಾರೆ.
ಮೇಲುಕೋಟೆಯಲ್ಲಿ ಇಂದಿಗೂ 'ಕತ್ತಲು ದೀಪಾವಳಿ': ಇದಾ ಕಾರಣ?
"ಅಸೆಂಬ್ಲಿಯಲ್ಲಿ ಸೋತ ಅಭ್ಯರ್ಥಿಗೆ ಉಪಮುಖ್ಯಮಂತ್ರಿ ಹುದ್ದೆ ಸಿಕ್ಕಿದ ಉದಾಹರಣೆ ನಮ್ಮ ದೇಶದಲ್ಲಿ ಇರಲಿಕ್ಕಿಲ್ಲ. ಸವದಿಯವರು ಮೊದಲು ಅದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ರೇಣುಕಾಚಾರ್ಯ ಬುದ್ದಿಮಾತನ್ನು ಹೇಳಿದ್ದಾರೆ.
"ಅತೃಪ್ತ ಶಾಸಕರ ಬಗ್ಗೆ ಮಾತನಾಡುವ ಸವದಿ, ಉಪಚುನಾವಣೆ ಮುಗಿದ ನಂತರ ಅವರ ಅಸ್ತಿತ್ವ ಏನಿರಬಹುದು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು" ಎಂದು ರೇಣುಕಾಚಾರ್ಯ, ಉಪಮುಖ್ಯಮಂತ್ರಿ ಸವದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಮೊದಲು ಸವದಿ ತಮ್ಮ ದುರಂಹಕಾರದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇವರ ಹೇಳಿಕೆಯಿಂದ ಪಕ್ಷಕ್ಕಾಗುವ ಹಾನಿಯ ಬಗ್ಗೆ ಅವರಿಗೆ ಗೊತ್ತಾಗುವುದಿಲ್ಲವೇ" ಎಂದು ರೇಣುಕಾಚಾರ್ಯ ಹೇಳಿದ್ದಾರೆ.
"ಡಿಸಿಎಂ ಸವದಿ, ಅತೃಪ್ತ ಶಾಸಕರ ಬಗ್ಗೆ ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ. ಈ ವಿಚಾರದ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇನೆ" ಎಂದು ರೇಣುಕಾಚಾರ್ಯ ಹೇಳಿದ್ದಾರೆ.
"ಅನರ್ಹ ಶಾಸಕರಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅವರ ಬಗ್ಗೆ ನಾವ್ಯಾಕೆ ಚಿಂತೆ ಮಾಡಬೇಕು" ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದರು.