ದಾವಣಗೆರೆ: ಬಿಜೆಪಿ ಮೋಸದಿಂದ ಮಹಾನಗರ ಪಾಲಿಕೆ ಅಧಿಕಾರ ಹಿಡಿದಿದೆ- ಮಲ್ಲಿಕಾರ್ಜುನ್
ದಾವಣಗೆರೆ, ಮೇ 14: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮೋಸದಿಂದ ಬಿಜೆಪಿ ಅಧಿಕಾರ ಹಿಡಿದಿದೆ. ಎಂಎಲ್ ಸಿ ಗಳನ್ನು ಬೇರೆ ಕಡೆಯಿಂದ ಕರೆದುಕೊಂಡು ಬಂದು ವೋಟ್ ಹಾಕಿಸಿ ಅಧಿಕಾರ ಹಿಡಿದಿದ್ದಾರೆ. ಈಗಲೂ ಕಾಂಗ್ರೆಸ್ ಬಹುಮತ ಇದೆ. ಆದರೆ, ಮೋಸದಿಂದ ಮಹಾನಾಗರ ಪಾಲಿಕೆ ಗದ್ದುಗೆ ಹಿಡಿದಿದ್ದಾರೆ ಎಂದು ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಪಾಲಿಕೆ ಚುನಾವಣೆ ನಡೆದ ಬಳಿಕ ಮೇಯರ್ ಆಯ್ಕೆ ವೇಳೆ ಇಬ್ಬರು ಗೈರಾಗಿದ್ದರು. ಬಳಿಕ ನನ್ನ ಬಳಿ ಬಂದು ಮನವಿ ಮಾಡಿದ್ದರು. ಆಗಿದ್ದು ಆಯ್ತು, ಚುನಾವಣೆಯೂ ಮುಗಿಯಿತು, ಸಸ್ಪೆಂಡ್ ಮಾಡುವುದು ಬೇಡ ಎಂದು ಬಿಟ್ಟಿದ್ದೆವು. ಈಗ ಅವರೇ ಪಕ್ಷ ಬಿಟ್ಟು ಹೋಗಿದ್ದಾರೆ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾದ ದಾವಣಗೆರೆ ಕಾಂಗ್ರೆಸ್ ಮುಖಂಡ ಜೆ.ಎನ್ ಶ್ರೀನಿವಾಸ್ ಹಾಗೂ ಅವರ ಪತ್ನಿ ಕುರಿತು ದಾವಣಗೆರೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್, "ಜೆ.ಎನ್ ಶ್ರೀನಿವಾಸ್ ಅವರ ವಯಕ್ತಿಕ ವಿಚಾರ ಬಗ್ಗೆ ಮಾತನಾಡುವುದಿಲ್ಲ. ರಾಜಕೀಯದಲ್ಲಿ ಅವರಿಗೆ ಅಂಬೆಗಾಲು ಹಾಕಿಸಿದ್ವಿ, ಗಾಡಿ ದಬ್ಬಲು ಹಚ್ಚಿದ್ವಿ ಓಡೋಕು ಬರೋ ಹೊತ್ತಲ್ಲಿ ಬಿಜೆಪಿ ಬಿಸ್ಕತ್ ಆಸೆಗೆ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ ಎಂದು ಲೇವಡಿ ಮಾಡಿದರು.
ಎಷ್ಟು ದಿನ ನಡೆಯುತ್ತೋ ನಡೆಯಲಿ ನೋಡೋಣ. ದೂಡಾ ಅಧ್ಯಕ್ಷರಾಗಿದ್ದ ದೇವರಮನಿ ಶಿವಕುಮಾರ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದರು. ಅವರಿಗೆ ಕೇವಲ ಆರು ತಿಂಗಳ ಅಧಿಕಾರ ಮಾತ್ರ ಸಿಕ್ತು ಈಗ ಅವರನ್ನ ನಾಯಿಯೂ ಸಹ ಮೂಸಿ ನೋಡಲ್ಲ. ಕಳೆದ ಪಾಲಿಕೆಯ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಒಂದು ನಾವು ಗೆದ್ದೆವು, ಇನ್ನೊಂದು ಬಿಜೆಪಿ ಗೆದ್ದಿತ್ತು. ಈಗ ಮತ್ತೆ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಬಂದಿದೆ ಎಂದು ಹೇಳಿದರು.
ನಟಿ ರಮ್ಯಾ ಹಾಗೂ ಡಿಕೆಶಿ ಜಟಾಪಟಿಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ..!
ಇನ್ನು ಸ್ಯಾಂಡಲ್ ವುಡ್ ತಾರೆ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವಿನ ಜಟಾಪಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷಕ್ಕೆ ಇದರಿಂದ ಡ್ಯಾಮೇಜ್ ಏನೂ ಆಗಲ್ಲ. ಮುಂದೆ ಎಲ್ಲವೂ ಸರಿ ಹೋಗುತ್ತದೆ. ಪಕ್ಷದಲ್ಲಿ ಯಾವುದೇ ಬಣಗಳಿಲ್ಲ, ಸಿದ್ದರಾಮಯ್ಯ, ಶಿವಕುಮಾರ್ ಎಂಬ ಬಣಗಳೇನೂ ಇಲ್ಲ. ಇರುವುದೊಂದೇ ಕಾಂಗ್ರೆಸ್ ಬಣ ಎಂದರು.
ಅನಾವಶ್ಯಕವಾಗಿ ಪಾಲಿಕೆಯ ಎರಡು ಕ್ಷೇತ್ರಗಳಿಗೆ ಚುನಾವಣೆ ಬಂದಿದೆ..!
ಅನಾವಶ್ಯಕವಾಗಿ ಪಾಲಿಕೆಯ ಎರಡು ಕ್ಷೇತ್ರಗಳಿಗೆ ಚುನಾವಣೆ ಬಂದಿದೆ. ಎರಡೂ ವಾರ್ಡ್ ಗಳಿಗೆ ಕಾಂಗ್ರೆಸ್ ನಾಯಕರು ಸೇರಿ ಒಗ್ಗಟ್ಟಿನಿಂದ ಸ್ಪರ್ಧೆ ಮಾಡಲು ಕಣಕ್ಕಿಳಿಸಿದ್ದೇವೆ. ಸೂಕ್ತವಾದ ಎಲ್ಲರ ಬೆಂಬಲ ಬೇಕಾಗಿದೆ. 28 ನೇ ವಾರ್ಡ್ ನ ಜೆಡಿಎಸ್ ಪಕ್ಷದ ಸಮೀವುಲ್ಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿ, ಪಕ್ಷ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ತುಂಬು ಹೃದಯದಿಂದ ಬರಮಾಡಿಕೊಂಡಿದ್ದೇನೆ. ಒಗ್ಗಟ್ಟಿನಿಂದ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿ ಆರಿಸಿ ಕಳುಹಿಸುತ್ತೇವೆ ಎಂದು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಜನರ ಬೆಂಬಲ ಬೇಕು.
Recommended Video