ಕೊರೊನಾ ಸೋಂಕಿನಿಂದ ಜಗಳೂರು ಆಂಬುಲೆನ್ಸ್ ಚಾಲಕ ಸಾವು; ಶ್ರೀರಾಮುಲು ಸಂತಾಪ
ದಾವಣಗೆರೆ, ಸೆಪ್ಟೆಂಬರ್ 16: ಕೊರೊನಾ ಸೋಂಕಿಗೆ ತುತ್ತಾಗಿ ಜಗಳೂರಿನ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಅಜ್ಮತ್ (49) ಎಂಬುವರು ಇಂದು ಸಾವನ್ನಪ್ಪಿದ್ದಾರೆ.
ಕಳೆದ ಐದು ದಿನಗಳಿಂದ ಅಜ್ಮತ್ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ನಂತರ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.
ಸಾಮಾನ್ಯ ನೆಗಡಿಯಿದ್ದರೂ ಕೊವಿಡ್ ಪರೀಕ್ಷೆ ಮಾಡಿಸಿ: ವೈದ್ಯರ ಸಲಹೆ
ಅಜ್ಮತ್ ಅವರ ಸಾವಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
"ಅಜ್ಮತ್ ಅವರು ಕೋವಿಡ್ ವಿರುದ್ಧ ಮುಂಚೂಣಿ ಯೋಧರಾಗಿ ಸತತವಾಗಿ ಕಾರ್ಯ ನಿರ್ವಹಿಸಿದ್ದರು. ಇಂತಹ ನಿಸ್ವಾರ್ಥ ಸೇನಾನಿಗಳು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವುದರಿಂದಲೇ ಸಾವಿರಾರು ರೋಗಿಗಳ ಜೀವ ಉಳಿಯುತ್ತಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ" ಎಂದು ಟ್ವೀಟ್ ಮಾಡಿದ್ದಾರೆ.
Recommended Video
ಅವರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸವಲತ್ತುಗಳು ಹಾಗೂ ಪರಿಹಾರಗಳನ್ನು ಶೀಘ್ರವಾಗಿ ತಲುಪಿಸಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.