ವಿಶೇಷ ಸುದ್ದಿ: ಸ್ಮಾರ್ಟ್ ಸಿಟಿ ದಾವಣಗೆರೆಗೆ ಸ್ಮಾರ್ಟ್ ಹೆಲ್ತ್ 'ಬೈಸಿಕಲ್ ಶೇರಿಂಗ್ ಸಿಸ್ಟಂ'
ದಾವಣಗೆರೆ, ಫೆಬ್ರವರಿ 22: ಪೆಟ್ರೋಲ್, ಡೀಸೆಲ್ ದರ ದಿನೇ ದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ದಾವಣಗೆರೆ ನಾಗರೀಕರಿಗೆ "ಬೈಸಿಕಲ್ ಶೇರಿಂಗ್ ಸಿಸ್ಟಂ' ವರದಾನವಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ತೆರೆಯಲಾಗಿರುವ ಡಾಕಿಂಗ್ ಸೆಂಟರ್ ಗಳ ಪರಿಸರ ಸ್ನೇಹಿ ಬೈಸಿಕಲ್ ಬಳಕೆಗೆ ದಾವಣಗೆರೆ ನಗರದ ಜನತೆ ಹೆಚ್ಚು ಮೊರೆ ಹೋಗುತ್ತಿದ್ದು, ವಿದ್ಯಾರ್ಥಿಗಳಿಗೆ ಅಧಿಕ ಉಪಯುಕ್ತವಾಗುತ್ತಿದೆ.
ಆಟೋ ಬಸ್ ಗಳಿಗೆ ಕಾಯುವ ಬದಲು ನಾಗರೀಕರು ಬೈಸಿಕಲ್ ಬಳಸುತ್ತಿದ್ದಾರೆ. ಒಂದು ಡಾಕಿಂಗ್ ಸೆಂಟರ್(ಸೈಕಲ್ ನಿಲುಗಡೆ)ನಲ್ಲಿ ಬೈಸಿಕಲ್ ಪಡೆದವರು, ಬೇರೆ ಯಾವುದೇ ಡಾಕಿಂಗ್ ಸೆಂಟರ್ ನಲ್ಲಿ ಸೈಕಲ್ ಬಿಟ್ಟು ಹೋಗಬಹುದು. ಉದಾಹರಣೆಗೆ ಜಿಎಂಐಟಿಯಲ್ಲಿ ಸೈಕಲ್ ಪಡೆದು ಸವಾರಿ ಆರಂಭಿಸಿ, ವಿದ್ಯಾನಗರ ಸೆಂಟರ್ ನಲ್ಲಿ ಬಿಡಬಹುದಾಗಿದೆ. ಆದರೆ ವಿದ್ಯಾನಗರ ಸೆಂಟರ್ ನಲ್ಲಿ ಸೈಕಲ್ ನಿಲ್ಲಲು ಸ್ಥಳ ಇರಬೇಕಷ್ಟೆ. 20 ಸೈಕಲ್ ಗಳನ್ನು ನಿಲ್ಲಿಸಬಹುದಾದ ಒಂದು ಡಾಕಿಂಗ್ ಸೆಂಟರ್ ನಲ್ಲಿ ಸದ್ಯ 10 ಸೈಕಲ್ ಗಳ ಲಭ್ಯತೆ ಇರುತ್ತವೆ. ಜಾಗ ಖಾಲಿಯಿರುವ ಬಗ್ಗೆ ಆಪ್ ನಲ್ಲಿ ಮಾಹಿತಿ ಗೊತ್ತಾಗುತ್ತದೆ ಎಂದು ಸ್ಮಾರ್ಟ್ ಸಿಟಿ ಸಹಾಯಕ ಇಂಜಿನಿಯರ್ ಪ್ರಮೋದ್ ವಿವರಿಸಿದರು.
ಕರ್ನಾಟಕ ರಾಜ್ಯ ಬಜೆಟ್ 2021: ದಾವಣಗೆರೆ ಜಿಲ್ಲೆಯ ನಿರೀಕ್ಷೆಗಳೇನು?
ಫೆ.2ರಿಂದ ಅಧಿಕೃತವಾಗಿ ಸೇವೆ
ಖಾಸಗಿ ಸಹಭಾಗಿತ್ವ (ಪ್ರೈವೇಟ್ ಪಬ್ಲಿಕ್ ಪಾರ್ಟಿಸಿಪೇಷನ್-ಪಿಪಿಪಿ) ಮಾದರಿ ಅಡಿ ಬೈಸಿಕಲ್ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಜನವರಿ 26ರ ಗಣರಾಜ್ಯೋತ್ಸವದಂದು ಬೈಸಿಕಲ್ ಶೇರಿಂಗ್ ಸಿಸ್ಟಮ್ ಉದ್ಘಾಟನೆಯಾಗಿ, ಫೆ.2ರಿಂದ ಅಧಿಕೃತವಾಗಿ ಸೇವೆ ಆರಂಭವಾಗಿದೆ. ಈಗಾಗಲೇ 18 ಕಡೆ ಡಾಕಿಂಗ್ ಸೆಂಟರ್ ತೆರೆಯಲಾಗಿದ್ದು, ಇನ್ನೂ 2 ಸೆಂಟರ್ ಆರಂಭದ ಹಂತದಲ್ಲಿವೆ. ಸಾಮಾನ್ಯ ಸೈಕಲ್, ಎಲೆಕ್ಟ್ರಿಕಲ್ ಸೈಕಲ್ ಅಭ್ಯವಿದ್ದು, ಪ್ರಸ್ತುತ ಸಾಮಾನ್ಯ ಸೈಕಲ್ ಸೇವೆಗೆ ಲಭ್ಯವಿದೆ.
ಸೈಕಲ್ ಸೆಂಟರ್ ಎಲ್ಲೆಲ್ಲಿ
ಶಾಮನೂರು ರಸ್ತೆ ಬಿಐಇಟಿ ಕಾಲೇಜು ಹಾಗೂ ಹಿಂದಿನ ದ್ವಾರದ ಗೇಟ್ ಬಳಿ ಪ್ರತ್ಯೇಕವಾಗಿ ಅಳವಡಿಸಲಾಗಿದೆ. ನಿಜಲಿಂಗಪ್ಪ ಬಡಾವಣೆ ರಿಂಗ್ ರಸ್ತೆಯ ಕ್ಲಾಕ್ ಸರ್ಕಲ್, ಪಿ.ಬಿ ರಸ್ತೆಯ ಬಿಎಸ್ಎನ್ಎಲ್ ವೃತ್ತ, ಡಿಸಿ ಕಚೇರಿ, ಪಿ.ಬಿ ರಸ್ತೆಯ ಜಿಎಂಐಟಿ ಕಾಲೇಜು, ರೈಲ್ವೇ ನಿಲ್ದಾಣ, ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿರುವ ಫೈರ್ ಸ್ಟೇಷನ್ ಆಫೀಸ್, ಸಿಜಿ ಆಸ್ಪತ್ರೆ, ವಿದ್ಯಾನಗರ ಕೊನೆಯ ಬಸ್ ನಿಲ್ದಾಣ, ನೂತನ್ ಕಾಲೇಜು, ನೇತಾಜಿ ಸುಭಾಸ್ ಚಂದ್ರ ಬೋಸ್ ಇನ್ ಡೋರ್ ಸ್ಟೇಡಿಯಂ, ಕಾಳಿದಾಸ ಸರ್ಕಲ್, ಚಿಕ್ಕಮ್ಮಣಿ ಬಡಾವಣೆ, ಐಟಿಐ ಕಾಲೇಜು, ಡಿಆರ್ಆರ್ ಪಾಲಿಟೆಕ್ನಿಕ್ ಕಾಲೇಜು ಮತ್ತು ಡಿಆರ್ಎಂ ಸೈನ್ಸ್ ಕಾಲೇಜು ಬಳಿ ಬೈಸಿಕಲ್ ಸೆಂಟರ್ ಅಳವಡಿಸಲಾಗಿದೆ.
ಹಣ ಎಷ್ಟು
ಕೂ ರೈಡ್ ಆಪ್ ಅಳವಡಿಸಿಕೊಂಡು, ವ್ಯಾಲೆಟ್ ಬ್ಯಾಲೆನ್ಸ್ ನಿರ್ವಹಿಸಬೇಕು. ವ್ಯಾಲೆಟ್ನಲ್ಲಿ ಹಣ ಇಲ್ಲದಿದ್ದರೆ ಫೋನ್ ಪೇ, ಗೂಗಲ್ ಪೆ, ಡೆಬಿಟ್ ಕಾರ್ಡ್, ಯುಪಿಐ ಸಹಾಯದಿಂದ ವ್ಯಾಲೆಟ್ ಖಾತೆಗೆ ಹಣ ವರ್ಗಾಯಿಸಿಕೊಳ್ಳಬೇಕಾಗುತ್ತದೆ.
ವ್ಯಾಲೆಟ್ನಲ್ಲಿ ಕನಿಷ್ಟ 50 ರೂ. ಇರಬೇಕಾಗುತ್ತದೆ. ಸಾಮಾನ್ಯ ಸೈಕಲ್ ಬಳಕೆಗೆ 30 ನಿಮಿಷಕ್ಕೆ ರೂ.10, ಇ-ಬೈಕ್ ಸವಾರಿಗೆ 15 ನಿಮಿಷಕ್ಕೆ ರೂ.10 ಕಡಿತವಾಗುತ್ತದೆ. ಸೈಕಲ್ ಬಳಕೆ 30 ದಿನಗಳಿಗೆ ರೂ.100, 3 ತಿಂಗಳಿಗೆ 250, 6 ತಿಂಗಳಿಗೆ 400 ರೂ. ಪಾವತಿಸಿ ಚಂದಾದಾರರಾಗಬಹುದು. ವ್ಯಾಲೆಟ್ಖಾತೆಯಲ್ಲಿ ಕನಿಷ್ಟ ಠೇವಣಿ 50 ರೂಪಾಯಿ ಇರಬೇಕು. ಪ್ರತಿ ಸೈಕಲ್ ಸವಾರಿಗೆ 30 ನಿಮಿಷ ಹಾಗೂ ಇ-ಬೈಕ್ ಸವಾರಿಗೆ 15 ನಿಮಿಷಗಳ ಸವಾರಿ ಉಚಿತವಿದ್ದು, ನಂತರದ ಸೈಕಲ್ ಬಳಕೆಗೆ ಹಣ ನೀಡಬೇಕು.
ಟ್ರ್ಯಾಕಿಂಗ್ ಅಳವಡಿಕೆ
ಬಸ್ ಪಾಸ್ ಮಾದರಿಯಲ್ಲಿ ಚಂದಾದಾರಗಲು ಬಯಸುವವರಿಗೆ ಅವಕಾಶವಿದ್ದು, 3 ಪ್ರತ್ಯೇಕ ಅವಧಿಗೆ ಚಂದಾದಾರರಗಬಹುದಾಗಿದೆ. 1500 ಜನ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದು, 400 ಜನ ಬಳಕೆ ಮಾಡುತ್ತಿದ್ದಾರೆ. ಸದ್ಯ ಸಾಮಾನ್ಯ ಬೈಸಿಕಲ್ ಗಳು ಬಳಕೆಗೆ ಲಭ್ಯವಿದ್ದು, ಎಲೆಕ್ಟ್ರಿಕಲ್ ಬೈಸಿಕಲ್ ಶೀಘ್ರದಲ್ಲೇ ಫೀಲ್ಡಿಗಳಿಯಲಿವೆ ಎಂದು ಸ್ಮಾರ್ಟ್ ಸಿಟಿ ಸಹಾಯಕ ಇಂಜಿನಿಯರ್ ಪ್ರಮೋದ್ ತಿಳಿಸಿದರು. ಬೈಸಿಕಲ್ ಗಳಲ್ಲಿ ಜಿಪಿಆರ್ಎಸ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಬೈಸಿಕಲ್ ಕಳವು ಮಾಡಿದರೂ ಪತ್ತೆ ಹಚ್ಚಬಹುದು.
ಸ್ಮಾರ್ಟ್ ಸೈಕಲ್ ಬಳಕೆ ಹೇಗೆ?
ಮೊಬೈಲ್ ಪ್ಲೇ ಸ್ಟೋರ್ ನಲ್ಲಿ ಕೂ ರೈಡ್ಸ್ (Coo Raids) ಆಪ್ ಡೌನ್ ಲೋಡ್ ಮಾಡಿಕೊಂಡು, ಆಧಾರ್ ಅಥವಾ ಇನ್ನಿತರೆ ಯಾವುದೇ ಸರ್ಕಾರಿ ಭಾವಚಿತ್ರವುಳ್ಳ ಗುರುತಿನ ಚೀಟಿಯೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸೈಕಲ್ ಬಳಕೆಯ ಯೋಜನೆಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಂಡು ವ್ಯಾಲೆಟ್ಗೆ ಹಣ ವರ್ಗಾಯಿಸಿಕೊಳ್ಳಬೇಕು. ನಂತರ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸೈಕಲ್ ಅನ್ ಲಾಕ್ ಮಾಡಿಕೊಂಡು ಸೈಕಲ್ ಬಳಸಬಹುದು. ಸಹಾಯ ಬೇಕಾದಲ್ಲಿ 8448449690ಗೆ ಕರೆ ಮಾಡಬಹುದು. ಅಥವಾ ವಾಟ್ಸಾಪ್ ಮಾಡಬಹುದಾಗಿದೆ.
Recommended Video
ವಾರದ 7 ದಿನವೂ ಸೈಕಲ್ ಸೇವೆ ಲಭ್ಯ
ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 7ಗಂಟೆಗೆವರೆಗೆ ಸೈಕಲ್ ಸೇವೆ ಲಭ್ಯವಿದ್ದು, ವಾರದ 7 ದಿನವೂ ಸೈಕಲ್ ಸೇವೆ ಲಭ್ಯವಿದೆ. ಬೆಳಗಿನ ವ್ಯಾಯಾಮದ ದಿನಚರಿಗಾಗಿಯೂ ಸೈಕಲ್ ಗಳನ್ನು ಉಪಯೋಗಿಸಬಹುದು. ಬೈಸಿಕಲ್ ಉಪಯೋಗಿಸುವುದರಿಂದ ಪರಿಸರಕ್ಕೂ ಅನುಕೂಲ, ನಾಗರಿಕರ ಆರೋಗ್ಯವೂ ಸುಧಾರಣೆಯಾಗುತ್ತದೆ. ಜನತೆ ಈ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ರವೀಂದ್ರ ಮಲ್ಲಾಪುರ ಮನವಿ ಮಾಡಿದ್ದಾರೆ.