ಕೊರೊನಾ ತೊಲಗಿಸಲು ದೇವರ ಮೊರೆ ಹೋದ ಜಗಳೂರು ಶಾಸಕ
ದಾವಣಗೆರೆ, ಮೇ 26: ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿವೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಈ ಮಧ್ಯೆ ಜಗಳೂರು ಬಿಜೆಪಿ ಶಾಸಕ ಎಸ್.ವಿ ರಾಮಚಂದ್ರಪ್ಪ ಕೊರೊನಾ ತೊಲಗಿಸಲು ದೇವರ ಮೊರೆ ಹೋಗಿದ್ದಾರೆ. ಜಗಳೂರು ತಾಲೂಕಿನ ಶಕ್ತಿ ದೇವತೆ ಮಾಡ್ರಹಳ್ಳಿ ಚೌಡೇಶ್ವರಿ ದೇವಿ ಸನ್ನಿಧಾನಕ್ಕೆ ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅವರ ಪತ್ನಿ ಇಂದಿರಾ ರಾಮಚಂದ್ರಪ್ಪ, ಪುತ್ರ ಅಜಯೇಂದ್ರ ಸಿಂಹ ಹಾಜರಿದ್ದರು.
ಬಳಿಕ ಮಾತನಾಡಿದ ಶಾಸಕ ಎಸ್.ವಿ ರಾಮಚಂದ್ರಪ್ಪ, ""ಜಗಳೂರು ವಿಧಾನಸಭಾ ಕ್ಷೇತ್ರ ಹಾಗೂ ಸಮಸ್ತ ಜನತೆ ಕೊರೊನಾ ಎರಡನೆಯ ಅಲೆಯಿಂದ ಮುಕ್ತವಾಗಲಿ. ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಜಾಸ್ತಿ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ'' ಎಂದರು.
Recommended Video
"ಹೆಮ್ಮಾರಿ ಕೊರೊನಾ ವೈರಸ್ಗೆ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಚೌಡೇಶ್ವರಿ ದೇವಿ ಕೊರೊನಾ ಓಡಿಸಲಿ ಎಂದು ಪ್ರಾರ್ಥಿಸಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ್ದೇನೆ. ಎಲ್ಲರಿಗೂ ಆರೋಗ್ಯ ಕರುಣಿಸಲಿ. ಕೊರೊನಾ ಸೋಂಕು ಹಿಮ್ಮೆಟ್ಟಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥನೆ ಮಾಡಿಕೊಂಡಿರುವುದಾಗಿ'' ತಿಳಿಸಿದರು.