ಬೆಣ್ಣೆನಗರಿಯಲ್ಲಿ ಪ್ಲಾಸ್ಟಿಕ್ ಮರುಬಳಕೆ ಕುರಿತು ವಿಶೇಷ ಆಂದೋಲನ!
ದಾವಣಗೆರೆ, ಆಗಸ್ಟ್, 15: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ದಾವಣಗೆರೆ ಮಹಾನಗರ ವತಿಯಿಂದ ಒಣ ತ್ಯಾಜ್ಯ ಸಂಗ್ರಹ ಕೇಂದ್ರದಲ್ಲಿ ಪ್ಲಾಸ್ಟಿಕ್ ಮರು ಬಳಕೆಯ ಬಗ್ಗೆ ವಿಶೇಷ ಆಂದೋಲನ ಪ್ರಾರಂಭಿಸಲಾಯಿತು.
ಮಹಾನಗರ ಪಾಲಿಕೆ, ಕರ್ನಾಟಕ ಹಾಲು ಒಕ್ಕೂಟ ಹಾಗೂ ಹಸಿರು ದಳ ಸಂಸ್ಥೆಯ ಸಹಯೋಗದಲ್ಲಿ ಆಂದೋಲನವನ್ನು ಪ್ರಾರಂಭಿಸಲಾಯಿತು. 'ಹಾಲು ಬಳಕೆಗೆ, ಹಾಲಿನ ಕವರ್ ಮರುಬಳಕೆಗೆ' ಎಂಬ ಧ್ಯೇಯವಾಕ್ಯವನ್ನು ಪ್ರಚಾರಪಡಿಸಲು ತೀರ್ಮಾನಿಸಲಾಗಿದೆ.
ಸಾರ್ವಜನಿಕರು ಪ್ರತಿದಿನ ಉಪಯೋಗಿಸುವ ಹಾಲಿನ ಪ್ಯಾಕೆಟ್ಗಳನ್ನು ಕಸದ ಜೊತೆ ಗಾಡಿಗಳಿಗೆ ಹಾಕಬೇಡಿ. ಬದಲಾಗಿ ಪ್ಯಾಕೆಟ್ಗಳನ್ನು ಪ್ರತ್ಯೇಕಿಸಿ ಗಾಡಿಗಳಿಗೆ ನೀಡುವಂತೆ ಜಾಗೃತಿ ಮೂಡಿಸಲಾಯಿತು. ಈ ಆಂದೋಲನಕ್ಕೆ ಪಾಲಿಕೆಯ ಮೇಯರ್ ಜಯಮ್ಮ ಗೋಪಿನಾಯ್ಕ್, 32ನೇ ವಾರ್ಡ್ನ ಪಾಲಿಕೆ ಸದಸ್ಯೆ ಉಮಾ ಪ್ರಕಾಶ್ ಅವರು ಭಗೀರಥ ವೃತ್ತದಲ್ಲಿ ಚಾಲನೆ ನೀಡಿದರು.
ಹಾಲಿನ ಎಟಿಎಂ ಕೇಂದ್ರಗಳಲ್ಲಿ ಪ್ರತಿದಿನ ಗ್ರಾಹಕರು ಹಾಲು ಕೊಂಡೊಯ್ಯುತ್ತಾರೆ. ಬಳಿಕ ಖಾಲಿ ಪ್ಯಾಕೆಟ್ಗಳನ್ನು ಹಾಲಿನ ಬೂತ್ಗಳಿಗೆ ವಾಪಸ್ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು. ಕರ್ನಾಟಕ ಹಾಲು ಒಕ್ಕೂಟದಿಂದ ಡಸ್ಟ್ ಬಿನ್ಗಳನ್ನು ಹಸಿರು ದಳಕ್ಕೆ ನೀಡಲಾಗಿದೆ. ಹಸಿರು ದಳದವರು ನಿಗದಿತ ಸ್ಥಳಗಳಲ್ಲಿ ಹಾಗೂ ಹಾಲಿನ ಬೂತ್ಗಳಲ್ಲಿ ಅವುಗಳನ್ನು ಇಟ್ಟಿರುತ್ತಾರೆ. ಹಸಿರು ದಳದವರು ನಿಗದಿ ಪಡಿಸಿರುವ ಸ್ಥಳದಲ್ಲಿ ಖಾಲಿ ಕವರ್ಗಳನ್ನು ಕೊಡಬಹುದಾಗಿದೆ. ಇದೊಂದು ಉತ್ತಮ ಯೋಜನೆ ಆಗಿದೆ. ಸಾರ್ವಜನಿಕರು ಹಾಲಿನ ಪ್ಯಾಕೆಟ್ಗಳನ್ನು ಕಸದ ಜೊತೆ ಸೇರಿಸಿ ಗಾಡಿಗೆ ನೀಡದೆ, ಅವುಗಳನ್ನು ಪ್ರತ್ಯೇಕಿಸಿ ಕೊಡಬೇಕು. ಇದರಿಂದ ಸ್ವಚ್ಛ ಭಾರತ್ ಯೋಜನೆಗೆ ಸಹಕರಿಸಿದರೆ ಆಗುತ್ತದೆ ಎಂದು ಉಮಾಪ್ರಕಾಶ್ ಜನರಲ್ಲಿ ಅರಿವು ಮೂಡಿಸಿದರು.
ಮಹಾತ್ಮಾ ಗಾಂಧೀಜಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕನಸಿಗೆ ಸಾರ್ವಜನಿಕರು ನೀಡುವ ಕೊಡುಗೆ ಇದು. ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನವಾದ ಇಂದು ಸಾರ್ವಜನಿಕರು ಸ್ವಚ್ಛ ಭಾರತಕ್ಕೆ ತಮ್ಮ ಕೊಡುಗೆ ನೀಡಲು ಸಂಕಲ್ಪ ಮಾಡಿ ಎಂದು ಕರೆ ನೀಡಿದರು.