ರಾಜ್ಯದಲ್ಲಿ ಸಣ್ಣ ಪಕ್ಷಗಳ ಒಕ್ಕೂಟ ರಚನೆ: ದೇವನೂರು ಮಹಾದೇವ
ದಾವಣಗೆರೆ, ಜನವರಿ22 : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸಣ್ಣ ಪಕ್ಷಗಳ ಒಕ್ಕೂಟವನ್ನು ರಚಿಸುವುದಾಗಿ ಹಿರಿಯ ಸ್ವರಾಜ್ ಇಂಟಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಂಡಳಿ ಸದಸ್ಯ ಹಿರಿಯ ಸಾಹಿತಿ ದೇವನೂರು ಮಹಾದೇವ ಹೇಳಿದರು.
ರಾಜಕೀಯದಲ್ಲಿ ಗುರುತರ, ಗುಣಾತ್ಮಕ ಬದಲಾವಣೆ ತರುವ ಅವಶ್ಯಕತೆ ಇದೆ ಹೀಗಾಗಿ ರಚನಾತ್ಮಕ ನಾಡನ್ನು ಕಟ್ಟುವ ಸಲುವಾಗಿ ಹಣದ ಹೊಳೆಯನ್ನು ಹರಿಸುವ ಚುನಾವಣಾ ವ್ಯವಸ್ಥೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಸಣ್ಣ ಪುಟ್ಟ ಪಕ್ಷಗಳನ್ನು ರಚಿಸಿ ಪ್ರಭಲ ಪಕ್ಷಗಳ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು.
ರಾಜ್ಯದಲ್ಲಿ ಕೊಲೆ ರಾಜಕಾರಣ ಹೆಚ್ಚುತ್ತಿದ್ದು ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶಾಂತಿ ಧರ್ಮದ ಕೊಲೆಯಾದರೆ ಗೆಲ್ಲುತ್ತೇವೆ ಎಂಬ ಧೋರಣೆ ರಾಜಕೀಯ ಪಕ್ಷಗಳು ಹೊಂದಿವೆ. ಮುಂದಿನ ದಿನಗಳಲ್ಲಿ ಪ್ರಬಲ ಕೋಮುವಾದಿ ಪಕ್ಷಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸಣ್ಣ ಪುಟ್ಟ ಪಕ್ಷಗಳನ್ನು ಒಗ್ಗೂಡಿಸಿ ಸಮ ಸಮಾಜದ ನಿರ್ಮಾಣದ ನಿಟ್ಟಿನಲ್ಲಿ ಹೊಸ ರಾಜಕೀಯ ಒಕ್ಕೂಟ ರಚಿಸಲು ನಿರ್ಧರಿಸಿರುವುದಾಗಿ ಹೇಳಿದರು.
ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ರಾಜಕಾರಣವನ್ನು ಶುದ್ಧೀಕರಣಗೊಳಿಸುವ ಅಗತ್ಯವಿದ್ದು ನಾವು ರಾಜಕೀಯ ವ್ಯವಸ್ಥೆಯನ್ನು ರಿಪೇರಿ ಮಾಡುವ ದೃಷ್ಟಿಯಿಂದ ರಾಜಕಾರಣಕ್ಕೆ ದುಮುಕಿದ್ದೇವೆ. ಮಹದಾಯಿ ನದಿ ನೀರಿನ ವಿವಾದ ಇಟ್ಟುಕೊಂಡು ಪ್ರಬಲ ರಾಜಕೀಯ ಪಕ್ಷಗಳು ರಾಜಕೀಯ ಮಾಡುತ್ತವೆ ಇದು ದುಃಖದ ಸಂಗತಿ.
ರಾಜಕೀಯ ಪಕ್ಷಗಳ ವರ್ತನೆಯಿಂದ ಜನಸಾಮಾನ್ಯರು ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವರ್ತನೆಯಂತೂ ತಲೆಕಟ್ಟವರಂತಿದೆ ಎಂದು ಪ್ರತಿಕ್ರಿಯೆ ನೀಡಿದರು.