ಸಿದ್ದರಾಮಯ್ಯ ಎಚ್ಚರಿಕೆಯಿಂದ ಇರಬೇಕು: ರಮೇಶ್ ಕುಮಾರ್
ದಾವಣಗೆರೆ, ಆಗಸ್ಟ್ 3: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮ ನಿರೀಕ್ಷೆಗಿಂತ ಮೀರಿ ಯಶಸ್ಸನ್ನು ಪಡೆದುಕೊಂಡಿದೆ. ರಾಜ್ಯದ ಇತಿಹಾಸದಲ್ಲೇ ಅಪರೂಪ ಎನ್ನುವಂತೆ ಲಕ್ಷೋಪಾದಿಯಲ್ಲಿ ಜನರು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
"ನನ್ನಂತಹ ಮಾಜಿ ಸಚಿವನಿಗೇ ವೇದಿಕೆ ಬರಲು ಎರಡೂವರೆ ತಾಸು ತೆಗೆದುಕೊಂಡಿತು, ಎಲ್ಲಿ ನೋಡಿದರಲ್ಲಿ ಜನವೋ ಜನ" ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಆದರೆ, ವೇದಿಕೆಯಲ್ಲಿ ಎಲ್ಲೂ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಲು ಜಮೀರ್ ಹೋಗಲಿಲ್ಲ.
ರಾಹುಲ್ ಭೇಟಿ; ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ
ಅಕ್ಷರಶಃ ಸಿದ್ದರಾಮಯ್ಯನವರ ಕೊಡುಗೆಯನ್ನು ಹೊಗಳುವಂತಾಗಿದ್ದ ಈ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಮತ್ತು ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ರಮೇಶ್ ಕುಮಾರ್, ಅವರ ಜೊತೆಗಿನ ಒಡನಾಟ ನೆನೆಪಿಸಿಕೊಂಡರು, ಜೊತೆಗೆ ಅವರಿಗೆ ಎಚ್ಚರಿಕೆಯನ್ನೂ ನೀಡಿದರು.
ವೇದಿಕೆಯ ಭಾಷಣಕ್ಕೆ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್ ಕುಮಾರ್, "ಇಲ್ಲಿ ಮಳೆ ಬೀಳುವ ವಾತಾವರಣವಿದೆ, ಊಟ ಸಿಗುತ್ತೋ ಇಲ್ಲವೋ ಎನ್ನುವುದು ಗೊತ್ತಿಲ್ಲ. ಆದರೂ ಇಷ್ಟು ಜನ ಇಲ್ಲಿ ಸೇರಿದ್ದಾರೆ. ಇಷ್ಟು ಜನರನ್ನು ದುಡ್ಡು ಕೊಟ್ಟು ಕರೆಸಿಕೊಳ್ಳಲು ಸಾಧ್ಯವೇ"ಎಂದು ಪ್ರಶ್ನಿಸಿದರು.
"ಸಿದ್ದರಾಮಯ್ಯನವರು ಅವರ ಕುಟುಂಬ, ಗೆಳೆಯರು, ಹಿತೈಷಿಗಳಿಗೆ ಮಾತ್ರ ಮೀಸಲಾದವರಲ್ಲ, ಅವರು ಇಡೀ ರಾಜ್ಯದ ಆಸ್ತಿ, ನಮಗೆಲ್ಲರಿಗೂ ಸೇರಿದವರು. ಅವರು ಕಾಲಿಗೆ ಬೀಳುವವರು, ನಮಸ್ಕಾರ ಹೊಡೆಯುತ್ತಾ ಹಿಂದೆ ಮುಂದೆ ಸುತ್ತುತ್ತಿರುವವರ ಬಗ್ಗೆ ಅವರು ಜಾಗ್ರತೆಯಿಂದ ಇರಬೇಕು"ಎಂದು ರಮೇಶ್ ಕುಮಾರ್ ವೇದಿಕೆಯಲ್ಲಿ ಸಿದ್ದರಾಮಯ್ಯನವರನ್ನು ಎಚ್ಚರಿಸಿದರು.
"ನಾನು ಬಹಳ ಹತ್ತಿರದಿಂದ ಅವರನ್ನು ಬಲ್ಲೆ, ಅವರ ಜೊತೆಗಿನ ಒಡನಾಟ ಎಂದೂ ಮರೆಯಲಾಗದು. ಅವರು ತಮ್ಮ ಸಾರ್ವಜನಿಕ ಜೀವನದಲ್ಲಿ ಗಳಿಸಿದ್ದು ಏನು ಎನ್ನುವುದಕ್ಕೆ ಈ ಕಾರ್ಯಕ್ರಮ ಉದಾಹರಣೆಯಾಗಬಲ್ಲದು. ಅವರು ನೂರು ಕಾಲ ಬಾಳಿ ನಮಗೆಲ್ಲರಿಗೂ ಮಾರ್ಗದರ್ಶಕರಾಗಿರಲಿ"ಎಂದು ರಮೇಶ್ ಕುಮಾರ್ ಆಶಯ ವ್ಯಕ್ತ ಪಡಿಸಿದರು.