ಬಿಜೆಪಿಗರು ಅಲ್ಪಸಂಖ್ಯಾತರ ವಿರೋಧಿಗಳು: ಸಿದ್ದರಾಮಯ್ಯ ಕಿಡಿ
ದಾವಣಗೆರೆ, ಮಾರ್ಚ್ 08: ಶಾದಿಭಾಗ್ಯ ರದ್ದು ಮಾಡುವ ಮೂಲಕ ಬಿಜೆಪಿಯವರು ಅಲ್ಪ ಸಂಖ್ಯಾತರ ವಿರೋಧಿಗಳು ಎಂದು ಸಾಬೀತು ಮಾಡಿದ್ದಾರೆ ಎಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ನಗರದ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಬಾಯಿ ಬಡ್ಕೋಳ್ಳುತ್ತಾರೆ, ಈ ಬಿಜೆಪಿಯವರ ಪ್ರಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದರೇ ಇದೇನಾ ಎಂದು ಪ್ರಶ್ನಿಸಿದರು.
ಶಾದಿಭಾಗ್ಯ ಯೋಜನೆಯನ್ನು ರದ್ದುಗೊಳಿಸಿದ ಬಿಜೆಪಿ ಸರ್ಕಾರ
ಒಂದು ಧರ್ಮ ಹೊರಗಿಡೋದು ಸಬ್ ಕಾ ಸಾಥ್ ಅಲ್ಲಾ, ಪ್ರಧಾನಿ ಮೋದಿಯವರ ಪ್ರತಿ ಭಾಷಣದಲ್ಲಿ ಸಬ್ ಕಾ ಸಾಥ್ ಎಂದು ಹೇಳುತ್ತಾರೆ. ಅದು ಇದೇನಾ, ಇವರೆಲ್ಲಾ ಸಂವಿಧಾನದ ವಿರೋಧಿಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮೃದುಧೋರಣೆ ಸಿಎಂ ಯಡಿಯೂರಪ್ಪರಿಗೆ, ಬಿಜೆಪಿಗಲ್ಲ!
ಎಲ್ಲರನ್ನು ಒಳಗೊಂಡಂತಹ ಸಮಾಜದ ಮೇಲೆ ನಂಬಿಕೆ ಇಲ್ಲದವರು, ಮನುಸೃತಿಯಲ್ಲಿ ನಂಬಿಕೆ ಇಟ್ಟುಕೊಂಡವರು ಹಾಗೂ ನಮ್ಮ ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಳ್ಳದವರು ಬಿಜೆಪಿಗರು ಎಂದು ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಇನ್ನೂ ಅನುದಾನ ನೀಡಬೇಕಿತ್ತು
ಖಜಾನೆಯಲ್ಲಿ ಹಣವಿಲ್ಲದಿದ್ದರೂ ಬಜೆಟ್ ಮಂಡನೆ ಮಾಡಿದ್ದೇನೆ ಎಂದು ಸಿಎಂ ಯಡಿಯೂರಪ್ಪನವರು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಜೆಟ್ ಮಾಡುವ ರೀತಿನಾ ಇದು, ಬಜೆಟ್ ಮುಗಿದ ನಂತರ ಅಪ್ಪರ್ ಕೃಷ್ಣಾ ಪ್ರಾಜೆಕ್ಟ್ ಗೆ ಹತ್ತು ಸಾವಿರ ಕೋಟಿ ಬಿಡುಗಡೆ ಮಾಡಿದರಲ್ಲ ಎಲ್ಲಿಂದ ಬಂತು. ಇದು ಒಂದು ಬ್ಯಾಡ್ ಬಜೆಟ್ ಎಂದು ಹರಿಹಾಯ್ದರು.
ಕಲ್ಯಾಣ ಕರ್ನಾಟಕಕ್ಕೆ 2500 ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಬಿಡುಗಡೆ ಮಾಡಿದ್ದು ಮಾತ್ರ 1,500 ಕೋಟಿ. ನಾವು ಅಧಿಕಾರದಲ್ಲಿ ಇದ್ದಾಗ 1500 ಕೋಟಿ ಬಿಡುಗಡೆ ಮಾಡಿದ್ದೇವು. ಈಗ ಅವರು ಅದನ್ನೇ ಮಾಡಿದ್ದಾರೆ ಮತ್ತೇನು ವ್ಯತ್ಯಾಸವಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಎಂದು ಬಾಯಲ್ಲಿ ಹೇಳಿದರೆ ಆಗದು ಅದನ್ನು ಮಾಡಿ ತೋರಿಸಬೇಕು ಎಂದರು.
ಪ್ರತ್ಯೇಕ ರಾಜ್ಯ ಕೇಳೋದು ತಪ್ಪು
ಉತ್ತರ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಿಲ್ಲ ಎಂದು ಪ್ರತೇಕ ರಾಜ್ಯ ಕೇಳೊದು ತಪ್ಪು, ಅವರ ಶಾಸಕರು ರಾಜೀನಾಮೆ ಕೊಟ್ಟರೆ ಕೊಡಲಿ, ಅವರು ಬಿಜೆಪಿಯಲ್ಲಿ ಇರೋದು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು. ಅದನ್ನು ಬಿಟ್ಟು ರಾಜೀನಾಮೆ ನೀಡುತ್ತೇನೆ ಎಂಬುದು ಪಲಾಯನವಾದ, ಅದರಲ್ಲೂ ಬಿಜೆಪಿಯವರು ಡೋಂಗಿಗಳು ಎಂದರು.
ಬೀದರ್ ನ ಶಾಹೀನಾ ಶಾಲೆಯ ದೇಶದ್ರೋಹಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, 124 (A) ಪ್ರಕಾರ ಅದು ದೇಶ ದ್ರೋಹ ಆಗಲ್ಲ, ಅದನ್ನೇ ನ್ಯಾಯಾಲಯ ಎತ್ತಿ ಹಿಡಿದೆದೆ. ಇದು ದೇಶದ್ರೋಹದ ಕೆಲಸವಲ್ಲ ಎಂದರು.
ನಾನು ಅಧಿಕಾರದ ಹಿಂದೆ ಹೋಗುವವನಲ್ಲ
ಸಿಎಎ ವಿರೋಧಿಸುವವರ ವಿರುದ್ಧ ಕೇಸು ಹಾಕುವುದು ಸರಿಯಲ್ಲಾ ಎಂದು ಕೋರ್ಟ್ ಹೇಳಿದೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇಲ್ಲ ಎಂದು ತಿಳಿಸಿದ ಅವರು, ಸಿದ್ದರಾಮಯ್ಯ ಬಿಜೆಪಿ ಸೇರಿ ಕೇಂದ್ರ ಮಂತ್ರಿಯಾಗುತ್ತಾರೆ ಎಂದು ಮಾಜಿ ಸಚಿವ ಚಿಂಚನಸೂರು ಹೇಳಿಕೆ ನೀಡಿದ್ದು ಬಿಜೆಪಿಯವರ ಮೂರ್ಖ ಹೇಳಿಕೆ ಎಂದು ತಿರುಗೇಟು ಕೊಟ್ಟರು.
ನಾನು ಯಾವತ್ತು ಅಧಿಕಾರದ ಹಿಂದೆ ಹೋದವನಲ್ಲಾ, ಜನರು ಅಧಿಕಾರ ಕೊಟ್ಟರೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದ ಸಿದ್ದರಾಮಯ್ಯ, ಇನ್ನು ಬಿಜೆಪಿ ಗೆ ಹೋದವರು ಸಿದ್ದರಾಮಯ್ಯ ಕರೆದರೆ ಬರುತ್ತಾರೆ ಎಂದು ಮಾರ್ಗರೇಟ್ ಆಳ್ವಾ ಹೇಳಿಕೆಗೆ ಉತ್ತರ ನೀಡಿದ ಅವರು, ಆಳ್ವಾ ಅವರು ಯಾವ ರೀತಿಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾನು ಅವರಿಗೆ ಯಾವುದೇ ಬೆದರಿಕೆ ಹಾಕಿಲ್ಲ, ಮಿನಿಸ್ಟರ್ ಆಗಲು ಬಿಜೆಪಿಗೆ ಹೋದವರು ಪಕ್ಷಕ್ಕೆ ವಾಪಸ್ಸು ಬರುತ್ತಾರಾ ಎಂದರು.
ಬೇಡ ಜಂಗಮರಿಗೆ ಪ.ಜಾ ಪ್ರಮಾಣ ಪತ್ರ ನೀಡಬಾರದು
ಬೈರತಿ ಬಸವರಾಜ್ಗೆ ನಾನೇ ಟಿಕೇಟ್ ಕೊಡಿಸಿ ಗೆಲ್ಲಿಸಿದ್ದೆ. ಅವರು ಈಗ ವಾಪಸ್ಸು ಬರುತ್ತಾರಾ. ರಾಜಕೀಯ ಸಿದ್ದಾಂತ ಇದ್ದರೆ ಅವರು ಎಲ್ಲಿಗೂ ಹೋಗುತ್ತಿರಲಿಲ್ಲಾ. ಅವರೆಲ್ಲಾ ಅವಕಾಶವಾದಿಗಳು ಯಾವುದೇ ಕಾರಣಕ್ಕೂ ವಾಪಸ್ಸು ಬರಲ್ಲಾ ಎಂದು ಹೇಳಿದರು.
ಅಲ್ಲದೇ ದರಿದ್ರ ಸರ್ಕಾರ ಎಂದಿದ್ದಕ್ಕೆ ಯಡಿಯೂರಪ್ಪ ಬಜೆಟ್ ಮೂಲಕ ಉತ್ತರ ಕೊಡ್ತೀನಿ ಎಂದ್ದಿದರು, ಎಲ್ಲಿ ನಿಮ್ಮ ಉತ್ತರ ಎಂದು ತಮ್ಮದೇ ಶೈಲಿಯಲ್ಲಿ ಸಿದ್ದರಾಮಯ್ಯ ಟಾಂಗ್ ನೀಡಿದರು. ಇನ್ನು ಬೇಡ ಜಂಗಮರಿಗೆ ಎಸ್ಸಿ ಮೀಸಲಾತಿ ನೀಡುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಜಂಗಮರನ್ನ ಪೂಜ್ಯರು ಎಂದು ಕರೆಯುತ್ತಾರೆ. ಬೇಡ ಜಂಗಮಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿವುದು ಸರಿಯಲ್ಲ. ನನ್ನ ಪ್ರಕಾರ ಅದು ತಪ್ಪು ಎಂದು ಅಂತ ಅನ್ನಿಸುತ್ತೆ ಎಂದರು.