ಬೊಮ್ಮಾಯಿ ರಾಜ್ಯಕ್ಕೆ ಮುಖ್ಯಮಂತ್ರಿನಾ, ಧರ್ಮಕ್ಕೋ: ಸಿದ್ದರಾಮಯ್ಯ ಪ್ರಶ್ನೆ
ದಾವಣಗೆರೆ, ಆಗಸ್ಟ್ 3:ಕರಾವಳಿಯಲ್ಲಿ ಮೂರು ಕೊಲೆಗಳಾಗಿವೆ. ಸಿಎಂ ಬಸವರಾಜ ಬೊಮ್ಮಾಯಿ ಅಲ್ಲಿಗೆ ಹೋಗಿ ಬಂದಿದ್ದಾರೆ. ಪ್ರವೀಣ್, ಮಸೂದ್, ಫಾಜಿಲ್ ಕೊಲೆಯಾಗಿತ್ತು. ಇಡೀ ಕರ್ನಾಟಕದ ಮುಖ್ಯಮಂತ್ರಿನೋ ಅಥವಾ ಧರ್ಮಕ್ಕೆ ಸೇರಿದ ಮುಖ್ಯಮಂತ್ರಿಯಾ ಎಂಬ ಪ್ರಶ್ನೆ ಬೊಮ್ಮಾಯಿಗೆ ಕೇಳಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಬಿಜೆಪಿ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು
ದಾವಣಗೆರೆಯಲ್ಲಿ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು, "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫಾಸಿಲ್, ಮಸೂದ್ ಮನೆಗೆ ಹೋಗಲಿಲ್ಲ, ಪರಿಹಾರ ನೀಡಲಿಲ್ಲ. ಪ್ರವೀಣ್ ಅವರಿಗೆ ಪರಿಹಾರ ಕೊಟ್ಟಿದ್ದು ಸರಿಯೇ. ತಾರತಮ್ಯ ಯಾಕೆ. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎನ್ನುವ ನಿಮಗೆ ಮಾನ, ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬಿಜೆಪಿ ಆಡಳಿತದಿಂದ ಬೇಸತ್ತ ಜನತೆ, 2023ಕ್ಕೆ ಕಾಂಗ್ರೆಸ್ಗೆ ಮತ್ತೆ ಅಧಿಕಾರ: ರಾಹುಲ್ ಗಾಂಧಿ ವಿಶ್ವಾಸ
ಮೂರು ಕಾನೂನು ವಿರೋಧಿ ಕಾಯ್ದೆ ಮಾಡಿದ ಪ್ರಧಾನಿ ನರೇಂದ್ರಮೋದಿ ಅವರು, ಒಂದು ವರ್ಷ ಹೋರಾಟ ಮಾಡಿದ ಫಲವಾಗಿ ರೈತರ ಚಳವಳಿಗೆ ಮಣಿದು ವಾಪಸ್ ಪಡೆದಿದ್ದಾರೆ. ಆದರೆ ರಾಜ್ಯದಲ್ಲಿ ಇನ್ನು ವಾಪಸ್ ಪಡೆದಿಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ಗುಡುಗಿದರು.
ಜನಶಕ್ತಿ ಮುಂದೆ ರಾಜಕೀಯ ಶಕ್ತಿ ಅಂಕುಶ ಇಟ್ಟುಕೊಳ್ಳಲು ಆಗದು. ದ್ವೇಷದ ರಾಜಕಾರಣ ಎಷ್ಟು ದಿನ ಮಾಡುತ್ತೀರಾ ಎಂದು ಪ್ರಶ್ನಿಸಿದ ಅವರು ಬಸವರಾಜ ಬೊಮ್ಮಾಯಿ ಅವರದ್ದು ಶೇಕಡಾ 40 ಪರ್ಸೆಂಟೇಜ್ ಸರ್ಕಾರ. " ನಾ ಕಾವುಂಗಾ, ಕಾನೇ ದೇವುಂಗಾ ಅಂತಾ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಪ್ರಧಾನಿಗೆ ದೂರು ನೀಡಿದ್ದರೂ ಕ್ರಮ ಯಾಕಿಲ್ಲ. ಸಂತೋಷ್ ಪಾಟೀಲ್ ಲಂಚ ಕೊಡಲು ಆಗದೇ ಆತ್ಮಹತ್ಯೆ ಮಾಡಿಕೊಂಡರು. ನಿಮ್ಮ ಒಬ್ಬ ಮಂತ್ರಿ ರಾಜೀನಾಮೆ ನೀಡಿದರು" ಎಂದು ತರಾಟೆಗೆ ತೆಗೆದುಕೊಂಡರು.
ಕರ್ನಾಟಕದ ಜನತೆಯ ರಕ್ಷಣೆ ಭಾರ ಕಾಂಗ್ರೆಸ್
ಕರ್ನಾಟಕದ ಆರೂವರೆ ಕೋಟಿ ಜನರ ಪ್ರಾಣ, ಮಾನ ರಕ್ಷಣೆ ಮಾಡುವ ಜವಾಬ್ದಾರಿ ನಾವು ವಹಿಸಿಕೊಳ್ಳುತ್ತೇವೆ. ಅಲ್ಪಸಂಖ್ಯಾತರು ಭಯದಲ್ಲಿ ಬದುಕುತ್ತಿದ್ದಾರೆ, ಸಂವಿಧಾನ ನಾಶ ಮಾಡಲು ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು ಹೊರಟಿದ್ದಾರೆ. ಅಂಬೇಡ್ಕರ್ ಸಂವಿಧಾನ ಇದ್ದರೆ ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರು, ದಲಿತರು, ರೈತರು ಉಳಿಯಲು ಸಾಧ್ಯವಾಗುತ್ತದೆ ಎಂದರು.
ಸೋನಿಯಾ,ರಾಹುಲ್ರಿಂದ ಪ್ರಧಾನಿ ಹುದ್ದೆ ತ್ಯಾಗ
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಕಾಂಗ್ರೆಸ್ ನವರು. ಎಷ್ಟೋ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿಯೇ ಪ್ರಾಣ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಧಾನಿ ಆಗಬಹುದಿತ್ತು. ಇಂದು ಚೇರ್ ಬಿಟ್ಟುಕೊಡಲು ಇಷ್ಟಪಡಲ್ಲ. ದೇಶಕ್ಕೋಸ್ಕರ ಪ್ರಧಾನಿ ಹುದ್ದೆಯನ್ನು ಸೋನಿಯಾ ಗಾಂಧಿ ತ್ಯಾಗ ಮಾಡಿದ್ದಾರೆ. ಪ್ರಧಾನಿಯನ್ನಾಗಿ ಮನಮೋಹನ್ ಸಿಂಗ್ ಮಾಡಿದರು ಎಂದು ಗಾಂಧಿ ಕುಟುಂಬವನ್ನು ಪ್ರಶಂಸಿಸಿದರು.
ಜನಸಂಖ್ಯೆ ನೋಡಿ ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ
ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿನ ಕನಕ ಗುರುಪೀಠದಲ್ಲಿ ಕಾಗಿನೆಲೆ ಮಠಾಧಿಪತಿ ನಿರಂಜನಾಂದಪುರಿ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅಮೃತ ಮಹೋತ್ಸವದಲ್ಲಿ ಇಷ್ಟೊಂದು ಜನರು ಸೇರಿರುವುದನ್ನು ನೋಡಿ ಬಿಜೆಪಿಯವರಿಗೆ ನಡುಕ ಹುಟ್ಟಿದೆ. ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಜನರು ಬಂದಿದ್ದೇ ಸಾಕ್ಷಿ. ಇಷ್ಟೊಂದು ಜನರು ಬಂದಿರುವುದು ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯದ ಮೂಲೆಮೂಲೆಗಳಿಂದ ಜನ
ನಾವು ಐದರಿಂದ ಆರು ಲಕ್ಷ ಜನರು ಸೇರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ನಮ್ಮೆಲ್ಲಾ ಊಹೆಗಿಂತ ಹೆಚ್ಚಿನ ಜನರು ಬಂದಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಜನರು ಬಂದಿದ್ದಾರೆ. ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸಮರ್ಪಕವಾಗಿ ಆಗಿಲ್ಲ ಅನಿಸುತ್ತದೆ. ಜನರಿಗೆ ಸಮಸ್ಯೆಯಾಗಿದೆ. ಇಷ್ಟೊಂದು ಜನರು ಸೇರಿರುವುದನ್ನು ನೋಡಿದರೆ ಮುಂದೆ ಇಷ್ಟೊಂದು ಜನರು ಸೇರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು.