ಮುಸ್ಲಿಮರ ಪರ ಇರುವ ಏಕೈಕ ನಾಯಕ: ಸಿದ್ದರಾಮಯ್ಯರನ್ನು ಹಾಡಿಹೊಗಳಿದ ಜಮೀರ್
ದಾವಣಗೆರೆ: ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನುತ್ತೇನೆ ಎಂದಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ಇದೇ ಮಾತನ್ನು ಹೇಳಿದ್ದರು. ಮುಸ್ಲಿಂ ಸಮುದಾಯದ ಪರ ಇರುವ ಏಕೈಕ ನಾಯಕ ಅವರು ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದರು.
ನಗರದ ತಾಜ್ ಪ್ಯಾಲೇಸ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವದ ಹಿನ್ನೆಲೆ ಅಲ್ಪಸಂಖ್ಯಾತರ ವಿಭಾಗದ ಪೂರ್ವಭಾವಿ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧಿಸಿದೆ. ಆದರೆ ಗೋ ಮಾಂಸವನ್ನು ತಿನ್ನುತ್ತೇವೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದರು. ಟಿಪ್ಪು ಜಯಂತಿ ನಿಷೇಧಿಸುವ ಪ್ರಸ್ತಾಪ ಬಂದಾಗಲೂ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದರು.
Breaking: ದಾವಣಗೆರೆ, ಕಳಪೆ ರಸ್ತೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದ್ದಾರೆ. ಗೋಹತ್ಯೆ ನಿಷೇಧ ಮಾಡಿದಾಗ ನಾನು ಮುಸ್ಲಿಮರ ಜೊತೆ ಕುಳಿತು ಗೋಮಾಂಸ ಸೇವಿಸುತ್ತೇನೆ ಏನು ಮಾಡುತ್ತೀರಾ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದರು. ಇಂಥ ನಾಯಕರು ನಮಗೆ ಬೇಕು. ನೀವೆಲ್ಲರೂ ಸಿದ್ದರಾಮಯ್ಯ ಅವರನ್ನೇ ಬೆಂಬಲಿಸಬೇಕು ಎಂದು ಕರೆ ನೀಡಿದರು.
ನನಗೆ ನೊಟೀಸ್ ಬಂದಿಲ್ಲ: ನನಗೆ ಎಐಸಿಸಿಯಿಂದ ಯಾವ ನೊಟೀಸ್ ಕೂಡ ಬಂದಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದರು. ಸುರ್ಜೆವಾಲ ಸ್ಪಷ್ವವಾಗಿ ಲಕ್ಷ್ಮಣ ರೇಖೆ ಉಲ್ಲಂಘಿಸಿದ್ದಾರೆ ಎಂದು ಹೇಳಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು ನನ್ನ ವಿರುದ್ಧ ಪತ್ರ ಬರೆದಿರುವ ಬಗ್ಗೆ ಗೊತ್ತಿಲ್ಲ. ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ ಅಷ್ಟೇ ಎಂದರು.
ನಾನು ಎಲ್ಲಾ ಕಡೆ ಪ್ರವಾಸ ಮಾಡುತ್ತಿದ್ದೇನೆ. ಅದೇ ರೀತಿಯಲ್ಲಿ ದಾವಣಗೆರೆಯಲ್ಲಿಯೂ ಪ್ರವಾಸ ಕೈಗೊಂಡಿದ್ದೇನೆ. ಎಐಸಿಸಿ ನಾಯಕ ರಾಹುಲ್ ಗಾಂಧಿಯವರು ಆಗಮಿಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ದಾವಣಗೆರೆಯಲ್ಲಿ ನಡೆಯುವ ಅಮೃತ ಮಹೋತ್ಸವಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದರು.
ಇನ್ನು ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಅಂಗವಾಗಿ ಡಿ.ಕೆ.ಶಿವಕುಮಾರ್ ಈ ಹಿಂದೆ ವ್ಯಂಗ್ಯವಾಡಿದ್ದರು. ಈ ಕುರಿತು ಜಮೀರ್ ಪ್ರತಿಕ್ರಿಯಿಸಿ ಡಿ.ಕೆ. ಶಿವಕುಮಾರ್ ಅವರು ದೊಡ್ಡವರಿದ್ದಾರೆ. ಅವರ ಹೇಳಿಕೆಗೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಯಾವುದನ್ನೂ ದೊಡ್ಡದು ಮಾಡಲು ಹೋಗಲ್ಲ ಎಂದರು.
ಜೆಡಿಎಸ್ ಬಿಜೆಪಿಯ ಬಿ ಟೀಂ. ಇದರಲ್ಲಿ ಎರಡು ಮಾತಿಲ್ಲ. 2018ರ ವಿಧಾನಸಭೆ ಚುನಾವಣೆ ವೇಳೆ ನನ್ನ ವಿರುದ್ಧ, ಯು.ಟಿ. ಖಾದರ್ ಸೇರಿದಂತೆ ಮುಸ್ಲಿಂ ನಾಯಕರ ವಿರುದ್ಧ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸಿದ್ದರು. ಈ ಬಾರಿಯೂ ಹೆಚ್ಚಿನ ಸ್ಥಾನಗಳಲ್ಲಿ ಟಿಕೆಟ್ ನೀಡಲಿ. ಇದಕ್ಕೆ ನಮ್ಮ ಅಭ್ಯಂತರ ಏನಿಲ್ಲ ಎಂದು ತಿಳಿಸಿದರು.
ಮುಂದಿನ ಡಿಸಿಎಂ ಜಮೀರ್ ಎಂದು ಜೈಕಾರ: ದಾವಣಗೆರೆ ತಾಜ್ ಪ್ಯಾಲೇಸ್ಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಮುಂದಿನ ಡಿಸಿಎಂ ಜಮೀರ್ ಅವರೇ ಎಂದು ಜೈಕಾರ ಮೊಳುಗಿಸಿದರು. ಮುಸ್ಲಿಂ ಸಮುದಾಯದ ದೊಡ್ಡ ನಾಯಕರು ನೀವು. ಮುಂದಿನ ಉಪ ಮುಖ್ಯಮಂತ್ರಿ ಆಗುವಂತೆ ವೇದಿಕೆ ಮೇಲೆ ಮುಸ್ಲಿಂ ಮುಖಂಡರು ಘೋಷಣೆ ಕೂಗಿದ್ದಾರೆ. ಈ ಹಿಂದೆ ಜಮೀರ್ ಅಹ್ಮದ್ ಮುಂದಿನ ಸಿಎಂ ಸಿದ್ದರಾಮಯ್ಯ ಅವರು ಆಗಬೇಕೆಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದದರು. ಇದೀಗ ಎಲ್ಲೊ ಒಂದು ಕಡೆ ಡಿ.ಕೆ. ಶಿವಕುಮಾರ್ ಮತ್ತು ಜಮೀರ್ ನಡುವೆ ಜಟಾಪಟಿಯೂ ನಡೆಯುತ್ತಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬೆಳವಣಿಗೆ ನಡುವೆ ಜಮೀರ್ಗೆ ಜೈಕಾರದ ಘೋಷಣೆಗಳು ಮೊಳಗಿರುವುದು ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ನಲ್ಲಿ ಒಳಜಗಳ ಶುರುವಾಗಿದ್ದು, ಮತ್ತೊಂದೆಡೆ ಚುನಾವಣೆಗೂ ಮುನ್ನವೇ ಸಿಎಂ, ಡಿಸಿಎಂ ಘೋಷಣೆಗಳು ಎದ್ದಿರುವುದು ನಿಜಕ್ಕೂ ಕುತೂಲ ಮೂಡಿಸುವ ವಿಚಾರವಾಗಿದೆ.
Recommended Video