ಸಿದ್ದರಾಮಯ್ಯ ಹುಟ್ಟುಹಬ್ಬ: ದಾವಣಗೆರೆಯಲ್ಲಿ ಸಿದ್ದರಾಮಯ್ಯಗೆ ಪ್ರಶಂಸೆಗಳ ಮಹಾಪೂರ
ದಾವಣಗೆರೆ, ಆಗಸ್ಟ್, 03: ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬ ಸಂಭ್ರಮದ ವೇಳೆ ಅವರ ಪರವಾಗಿ ಜೈಕಾರ ಘೋಷಣೆಗಳು ಮೊಳಗಿತ್ತು. ವೇದಿಕೆಯಲ್ಲಿ ಮಾತನಾಡಿದ ಕಾಂಗ್ರೆಸ್ನ ಎಲ್ಲಾ ನಾಯಕರು ಸಿದ್ದರಾಮಯ್ಯ ನಾಯಕತ್ವಕ್ಕೆ ಪ್ರಶಂಸೆಗಳ ಮಹಾಪೂರವನ್ನೇ ಹರಿಸಿದರು. ಇನ್ನು ಅಲ್ಲಿದ್ದ ಜನರು ಕೂಡ ಜೋರಾಗಿ ಶಿಳ್ಳೆ ಹಾಕುತ್ತಾ ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವ ಘೋಷಣೆಯನ್ನು ಕೂಗಿದರು
ನಂತರ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಮಾತನಾಡಿ ರಾಜ್ಯ ರಾಜಕೀಯದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಕಾರ್ಯಕ್ರಮ ಇದಾಗಿದೆ. ಹಿಂದುಳಿದ, ಶೋಷಿತರ, ಅಲ್ಪಸಂಖ್ಯಾತರ ಸಮುದಾಯಗಳಿಗೆ ಮತ್ತಷ್ಟು ದನಿ ನೀಡಲು 40 ವರ್ಷಗಳ ಕಾಲ ದುಡಿದ ನಾಯಕ ಸಿದ್ದರಾಮಯ್ಯ. ಅವರು ಇನ್ನು 75 ವರ್ಷದ ಹುಡುಗ ಎಂದು ಬಣ್ಣಿಸಿದರು. ಯುವಕರಿಗೆ ಮಾದರಿ ಸಿದ್ದರಾಮಯ್ಯ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಅದೇ ಸಂದರ್ಭದಲ್ಲಿ ಸಿದ್ದರಾಮಯ್ಯ 75 ವರ್ಷ ದಾಟುತ್ತಿದ್ದು, ಇದು ಒಂದು ಇತಿಹಾಸವಾಗಿದೆ. ಸಂವಿಧಾನದ ಅಂಶಯಗಳನ್ನು ಯಶಸ್ವಿಯಾಗಿ ಕಾರ್ಯಗತ ಮಾಡಿದವರು ಸಿದ್ದರಾಮಯ್ಯ. ಅವರು ಬಡವರಿಗೆ ಅನ್ನಭಾಗ್ಯ ನೀಡಿದವರು ಎಂದು ಬಣ್ಣಿಸಿದರು.
ಸಿದ್ದರಾಮಯ್ಯ ದೇಶದಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡಿದ ನಾಯಕ. ಪರ್ಸೆಂಟೇಜ್ ಬಗ್ಗೆ ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದರೂ ಯಾವುದೇ ಕ್ರಮ ಆಗಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಭ್ರಷ್ಟಾಚಾರ ಮಾಡಿದ್ದರೆ ಜನರ ಮುಂದೆ ಇಡಲಿ ಎಂದು ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದರು. ಪ್ರಣಾಳಿಕೆಯ 165 ಅಂಶಗಳನ್ನು ಕಾರ್ಯಗತ ಮಾಡಿದ ಏಕೈಕ ವ್ಯಕ್ತಿ ಸಿದ್ದರಾಮಯ್ಯ. ಶ್ರೀರಾಮನ ಹೆಸರೇಳುವ ಬಿಜೆಪಿ ಮಜ್ಜಿಗೆಗೆ ಶೇಕಡಾ 5ರಷ್ಟು ಜಿಎಸ್ಟಿ ವಿಧಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ ಸಾರ್ವಜನಿಕರ ಜೀವನದಲ್ಲಿ ಜನಪರ ಕಾರ್ಯಕ್ರಮ ಮಾಡಿ 75 ವರ್ಷ ಜನಸೇವೆ ಮಾಡಿದವರು ಸಿದ್ದರಾಮಯ್ಯ. ಬಿಜೆಪಿಯವರದ್ದು ಕುತಂತ್ರ ರಾಜಕಾರಣ. ದೇಶದಲ್ಲಿ ಸಂವಿಧಾನ ಸುರಕ್ಷಿತವಾಗಿರಬೇಕಾದರೆ ಹಿಂದುಳಿದವರು, ಶೋಷಿತರು ಅಧಿಕಾರಕ್ಕೆ ಬರಬೇಕು.
ಸಿದ್ದರಾಮಯ್ಯ ಮಾಡಿದ ಕೆಲಸ ರಾಜ್ಯದ ಮನೆಮನೆಗೆ ತಲುಪಿದೆ ಎಂದರು. ಹೀಗೆ ಇನ್ನು ಹಲವಾರು ಕಾಂಗ್ರೆಸ್ ನಾಯಕರು ಮಾತನಾಡಿ ಸಿದ್ದರಾಮಯ್ಯ ಅವರನ್ನು ಬಣ್ಣಿಸುವ ಮೂಲಕ ಅವರ ಸಾಧನೆಗಳನ್ನು ಒಂದೊಂದಾಗಿ ಬಿಚ್ಚಿಟ್ಟರು.