ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ದಿನಗಣನೆ: ಘಮಘಮಿಸುತ್ತಿದೆ ಮೈಸೂರ್ ಪಾಕ್ ...!
ದಾವಣಗೆರೆ, ಆಗಸ್ಟ್ 1: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75 ನೇ ವರ್ಷದ ಅಮೃತ ಮಹೋತ್ಸವಕ್ಕೆ ಸಿದ್ಧತೆ ಜೋರಾಗಿದೆ. ಕಾರ್ಯಕ್ರಮಕ್ಕಾಗಿ ಸುಮಾರು ಆರು ಲಕ್ಷ ಮೈಸೂರು ಪಾಕ್ ಗಳನ್ನು ತಯಾರು ಮಾಡಲಾಗುತ್ತಿದೆ.
ದಾವಣಗೆರೆ - ಹರಿಹರ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಬರುವ ಕುಂದುವಾಡ ಬಳಿಯ ಸುಷಿ ಕನ್ವೆನ್ಷನ್ ಹಾಲ್ ನಲ್ಲಿ ಮೈಸೂರು ಪಾಕ್ ತಯಾರಿಸಲಾಗುತ್ತಿದೆ. ಮೂರು ದಿನಗಳಿಂದ 150 ಹೆಚ್ಚು ಬಾಣಸಿಗರು ಮೈಸೂರ್ ಪಾಕ್ ಸಿದ್ದ ಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸಿದ್ದರಾಮೋತ್ಸವಕ್ಕೆ 495 ಬಸ್, 600 ಇತರ ವಾಹನಗಳ ವ್ಯವಸ್ಥೆ!
ಅಮೃತ ಮಹೋತ್ಸವಕ್ಕೆ ಸುಮಾರು ಹತ್ತು ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರು ಹೇಳುತ್ತಿದ್ದಾರೆ. ಸುಮಾರು ಮೂರು ಲಕ್ಷ ಖುರ್ಚಿಗಳನ್ನು ಈಗಾಗಲೇ ಹಾಕಲಾಗಿದೆ. ಕಾರ್ಯಕ್ರಮಕ್ಕೆ 6 ರಿಂದ 8 ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು, ಬರುವ ಜನರಿಗಾಗಿ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಬೆಂಗಳೂರಿನ ಕ್ಯಾಟರಿಂಗ್ ನವರಿಗೆ ಊಟದ ಜವಾಬ್ದಾರಿ ವಹಿಸಿದ್ದು, ಜನರಿಗಾಗಿಯೇ ಘಮಘಮಿಸುವ ಮೈಸೂರು ಪಾಕ್ ಸಿದ್ಧವಾಗಿವೆ.
ಆರು ಲಕ್ಷ ಮೈಸೂರು ಪಾಕ್ ತಯಾರು
ಕಾರ್ಯಕ್ರಮಕ್ಕಾಗಿ 6 ಲಕ್ಷ ಮೈಸೂರು ಪಾಕ್ಗಳನ್ನು ತಯಾರಿಸಲಾಗಿದೆ. ತಯಾರಾದ ಮೈಸೂರ್ ಪಾಕ್ಅನ್ನು ಸುರಕ್ಷಿತವಾಗಿ ರಟ್ಟಿನ ಬಾಕ್ಸ್ ನಲ್ಲಿ ಹಾಕಿ ಪ್ಯಾಕ್ ಮಾಡಲಾಗಿದೆ. ಒಟ್ಟು ಎರಡು ಸಾವಿರ ಲೀಟರ್ ತುಪ್ಪ, ಎರಡು ಸಾವಿರ ಲೀಟರ್ ಹಾಲು, ಎರಡು ಸಾವಿರ ಕೆಜಿ ಕಡಲೆಹಿಟ್ಟು 4 ಸಾವಿರ ಕೆಜಿ ಸಕ್ಕರೆ ಸೇರಿದಂತೆ ವಿವಿಧ ಐಟಂಗಳನ್ನು ಬಳಸಿಕೊಳ್ಳಲಾಗಿದೆ. ಕಳೆದ ಮೂರು ದಿನಗಳಿಂದ ದಿನಕ್ಕೆ ಒಂದರಿಂದ ಎರಡು ಲಕ್ಷ ಮೈಸೂರ್ ಪಾಕ್ ಸಿದ್ದಪಡಿಸುತ್ತಿದ್ದಾರೆ. ಅಮೃತ ಮಹೋತ್ಸವ ಕ್ಕೆ ಆಗಮಿಸುವವರಿಗಾಗಿ ಬಿಸಿ ಬೇಳೆಬಾತ್, ಪಲಾವ್, ಮೊಸರು ಬಜ್ಜಿ, ಮೊಸರನ್ನ ಜೊತೆ ಮೈಸೂರ್ ಪಾಕ್ ಕೂಡ ವ್ಯವಸ್ಥೆ ಮಾಡಲಾಗಿದೆ.
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ, 7000 ಬಸ್ಗಳು ಬುಕ್ಕಿಂಗ್
ಆರು ಲಕ್ಷ ಜನರಿಗೆ ಊಟದ ವ್ಯವಸ್ಥೆ
ಆಗಸ್ಟ್ 2ರೊಳಗೆ ಮೈಸೂರ್ ಪಾಕ್ ಸಿದ್ಧಪಡಿಸಿ ಬಳಿಕ ಊಟದ ಸಿದ್ದತೆ ಮಾಡಿಕೊಳ್ಳಲಾಗುತ್ತದೆ, ಈ ಕಾರ್ಯಕ್ರಮದಲ್ಲಿ ಎರಡು ಸಾವಿರ ಜನರು ಅಡಿಗೆ ಬಾಣಿಸಿಗರು ಹಾಗೂ ಸಹಾಯಕರು ಕೆಲಸ ಮಾಡಲಿದ್ದು, ಮೂರು ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ. ಒಂದೊಂದು ಕಡೆ 170 ಕೌಂಟರ್ ಗಳು ಇರುತ್ತವೆ. ಮಹಿಳೆಯರಿಗೆ ಪ್ರತ್ಯೇಕವಾಗಿ ಊಟದ ಕೌಂಟರ್ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮದ ದಿನ ಬೆಳಗ್ಗೆ 9 ಗಂಟೆಯಿಂದಲೇ ಊಟದ ವ್ಯವಸ್ಥೆ ಪ್ರಾರಂಭವಾಗಲಿದೆ. ಸದ್ಯಕ್ಕೆ ಆರು ಲಕ್ಷ ಜನರಿಗೆ ಊಟಕ್ಕೆ ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಬರುವ ಜನರನ್ನು ನೋಡಿಕೊಂಡು ಮತ್ತಷ್ಟು ಅಡುಗೆ ಮಾಡಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ.
ರಾಹುಲ್ ಗಾಂಧಿ ಭಾಗಿ
ಆಗಸ್ಟ್ 3 ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ದಾವಣಗೆರೆ ನಗರ ಹೊರಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶಾಮನೂರು ಶಿವಶಂಕರಪ್ಪ ಒಡೆತನದ ಸುಮಾರು 50 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆಯನ್ನ ಸಿದ್ದಗೊಳಿಸಲಾಗಿದೆ. ಇನ್ನು, ಕಾರ್ಯಕ್ರಮದಲ್ಲಿ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನ ಕೇಂದ್ರ ನಾಯಕರು ಆಗಮಿಸಲಿದ್ದಾರೆ.
ಎಲ್ಇಡಿ ಸ್ಕ್ರೀನ್ ಅಳವಡಿಕೆ
ಸಿದ್ದರಾಮಯ್ಯ ಅಮೃತಮಹೋತ್ಸವಕ್ಕೆ ರಾಜ್ಯ ಕಾಂಗ್ರೆಸ್ ಮುಖಂಡರು, ಮಾಜಿ ಸಚಿವರು, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಅದಕ್ಕಾಗಿ ಈಗಾಗಲೇ ಬೃಹತ್ ವೇದಿಕೆ ಸಿದ್ದಗೊಂಡಿದ್ದು, ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ, ಮುಂದೆ ವಿವಿಐಪಿಗಳು, ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರಿಗೆ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆಯನ್ನ ಮಾಡಲಾಗಿದೆ. 5 ಲಕ್ಷ ಕಾರ್ಯಕರ್ತರು ಕುಳಿತುಕೊಳ್ಳಲು ಚೇರ್ ವ್ಯವಸ್ಥೆ ಮಾಡಲಾಗಿದೆ. ಇನ್ನು, ಕಾರ್ಯಕ್ರಮದಲ್ಲಿ ಸಮೀಪದಿಂದಲೇ ಕಾರ್ಯಕ್ರಮ ವೀಕ್ಷಿಸಲು ದೊಡ್ಡ ಎಲ್ಇ ಡಿ ಸ್ಕ್ರೀನ್ ಗಳನ್ನ ಹಾಕಲಾಗಿದೆ.