ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ: ಸಿದ್ದರಾಮಯ್ಯ ಹುಟ್ಟುಹಬ್ಬದಲ್ಲಿ ಡಿಕೆಶಿ ಘೋಷಣೆ
ದಾವಣಗೆರೆ, ಆಗಸ್ಟ್, 03: ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿ, ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ. ಸೋನಿಯಾ ಗಾಂಧಿ ಅವರ ಕೈ ಬಲಪಡಿಸಿ, ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡೋಣ ಎಂದರು. ಹಾಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮಾಡಿದ ಸಾಧನೆಗಳ ಬಗ್ಗೆ ವಿವರಿಸಿದರು.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದರಿಸೋಣ. ರಾಜ್ಯಕ್ಕೆ ನ್ಯಾಯ ಒದಗಿಸಬೇಕಾದರೆ ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಲು ನಾವೆಲ್ಲರೂ ಇಂದು ಸಂಕಲ್ಪ ಮಾಡೋಣ. ಸಿದ್ದರಾಮಯ್ಯ ಅವರು ಕೇವಲ ಹಿಂದುಳಿದ ವರ್ಗಗಳ ನಾಯಕ ಎಂದು ಪರಿಗಣಿಸಬೇಡಿ. ಅವರು ಎಲ್ಲ ಧರ್ಮ ಹಾಗೂ ವರ್ಗಗಳ ನಾಯಕರು ಕೂಡ ಆಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ರಾಜ್ಯದ ಜನರಿಗೆ ಇನ್ನಷ್ಟು ಸೇವೆ ಮಾಡುವ ಶಕ್ತಿ ಸಿಗಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ರಾಜ್ಯದಲ್ಲಿ ಯುವಕರು, ರೈತರು, ಬಡವರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಇದಕ್ಕೆಲ್ಲ ಅಂತ್ಯ ಕಾಣಿಸಿ ಅವರಿಗೆ ನ್ಯಾಯ ಒದಗಿಸಬೇಕು ಎಂದರೆ ಬಿಜೆಪಿ ಸರ್ಕಾರವನ್ನು ನೆಲೆ ಇಲ್ಲದಂತೆ ಮಾಡಬೇಕು. ಇದಕ್ಕೆ ಇಂದು ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು. ಇಂದು ನಾವು, ನೀವೆಲ್ಲರೂ ಪುಣ್ಯವಂತರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಅದೇ ಕಾಲದಲ್ಲಿ ನಮ್ಮ, ನಿಮ್ಮೆಲ್ಲರ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದೇವೆ. ಇದು ದೇಶಕ್ಕೂ ಸಂಭ್ರಮ, ಕಾಂಗ್ರೆಸಿಗರಿಗೂ ಸಂಭ್ರಮ, ಸಿದ್ದರಾಮಯ್ಯ ಅವರಿಗೂ ಸಂಭ್ರಮ ಎಂದರು.
ಡಿ.ಕೆ.ಶಿವಕುಮಾರ್ ಮಾಡಿದ ಪ್ರತಿಜ್ಞೆ
ರಾಜ್ಯಕ್ಕೆ ನ್ಯಾಯ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಕಾಂಗ್ರೆಸ್ ದೇಶದ ಶಕ್ತಿ ಇದ್ದಂತೆ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸವಿದ್ದಂತೆ. ಸಿದ್ದರಾಮಯ್ಯ ಅವರ ಅಧಿಕಾರ ನಾವೆಲ್ಲ ನೋಡಿದ್ದೇವೆ. 2013ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದರು. ಬಸವ ಜಯಂತಿ ದಿನ ಅವರು ಅಧಿಕಾರ ಸ್ವೀಕರಿಸಿದರು. ಬಸವಣ್ಣನವರ ತತ್ವವೇ ಕಾಂಗ್ರೆಸ್ ಪಕ್ಷದ ತತ್ವ. ಅವರು ಅಧಿಕಾರ ಸ್ವೀಕರಿಸಿದ ನಂತರ ಈ ರಾಜ್ಯಕ್ಕೆ ಕೊಟ್ಟಿರುವ ಕಾರ್ಯಕ್ರಮ ಮೆಲುಕು ಹಾಕಲು ಇಲ್ಲಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಲು ಮನವಿ
ಈ ಕಾರ್ಯಕ್ರಮದ ಬಗ್ಗೆ ಸಿದ್ದರಾಮಯ್ಯ ಅವರು ಹೇಳಿದಾಗ ನಾನೂ ಅಲ್ಲಿದ್ದೆ. ರಾಹುಲ್ ಗಾಂಧಿ ಅವರು ಒಪ್ಪಿ ಇಲ್ಲಿಗೆ ಬಂದಿದ್ದಾರೆ. ರಾಜ್ಯದ ಜನರು ಹಾಗೂ ಕಾಂಗ್ರೆಸ್ ನಾಯಕರ ಪರವಾಗಿ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಗೆ ತಲುಪಿಸಬೇಕು. ಅದಕ್ಕೆ ನಾವು ನೀವೆಲ್ಲರೂ ಸೇರಿ ಭ್ರಷ್ಟ ಸರ್ಕಾರವನ್ನು ತೆಗೆದು ಹಾಕುವ ಸಂಕಲ್ಪ ಮಾಡಬೇಕು. ನೀವೆಲ್ಲರೂ ಈ ಸರ್ಕಾರ ತೆಗೆಯುವ ಪ್ರತಿಜ್ಞೆ ಮಾಡುತ್ತೀರ ಅಲ್ಲವೇ? ಇಂದಿನಿಂದ ಇದೇ ನಮ್ಮ ಉದ್ದೇಶ ಆಗಬೇಕು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ತರಲು ಮನವಿ
ಸಿದ್ದರಾಮಯ್ಯ ಅವರ ಕಾಲದಲ್ಲಿ ನಾವು ಮಂತ್ರಿಗಳಾಗಿ ಕೆಲಸ ಮಾಡಿದ್ದೇವೆ. ಅವರು ಬಡವರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಯಾವುದೇ ಬಡವ ಹಸಿವಿನಿಂದ ಇರಬಾರದು ಎಂದು ಎಲ್ಲ ವರ್ಗಕ್ಕೆ ಅನ್ನ ಭಾಗ್ಯ ಯೋಜನೆ ಕೊಟ್ಟರು. ರೈತರಿಗೆ ಕೊಟ್ಟ ಕೃಷಿ ಭಾಗ್ಯ, ರಸ್ತೆ, ಕೈಗಾರಿಕೆ, ನೀರಾವರಿ ಯೋಜನೆ, ವಿಶ್ವದಲ್ಲೇ ಅತೀ ದೊಡ್ಡ ಸೋಲಾರ್ ಪಾರ್ಕ್, ರೈತರಿಗೆ 7 ತಾಸು ವಿದ್ಯುತ್ ಸರಬರಾಜು ಸೇರಿದಂತೆ ಹಲವು ಜನಪರ ಯೋಜನೆ ನೀಡಿದ್ದೆವು. ಇದೆಲ್ಲ ಕಾರಣ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ. ನಾನು, ಸಿದ್ದರಾಮಯ್ಯ ಹಾಗೂ ವೇದಿಕೆ ಮೇಲಿರುವ ನಾಯಕರು ಮಾತ್ರ ಸರ್ಕಾರ ತರಲು ಸಾಧ್ಯವಿಲ್ಲ. ನೀವೆಲ್ಲರೂ ಈ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಅಧಿಕಾರಕ್ಕೆ ತರಲು ಜನರಲ್ಲಿ ಮನವಿ ಮಾಡಿದರು.
ಸಿದ್ದರಾಮಯ್ಯ ಅವರಿಗೆ ಹರಸಿದ ಡಿಕೆಶಿ
ಇದುವರೆಗೂ ಆಗಿರುವುದು ಇತಿಹಾಸ, ಮುಂದೆ ಬರುವುದು ಭವಿಷ್ಯ. ಮುಂದಿನ ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು. ಆಗಸ್ಟ್ 15ರಂದು ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆಗೆ ಸೂಚನೆ ನೀಡಿದ್ದು, ಇಲ್ಲಿಗೆ ಬಂದಿರುವಂತೆ ಬೆಂಗಳೂರಿಗೂ ಲಕ್ಷಾಂತರ ಜನರು ಆಗಮಿಸಬೇಕು. ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ಹೆಜ್ಜೆ ಹಾಕಬೇಕು ಎಂದು ಮನವಿ ಮಾಡಿದರು. ಎಲ್ಲ ವರ್ಗದವರನ್ನು ನೀವು ಸಂಘಟಿಸಬೇಕು. ಸಿದ್ದರಾಮಯ್ಯ ಅವರು ಕೇವಲ ಹಿಂದುಳಿದ ನಾಯಕರೆಂದು ಬಿಂಬಿಸಬೇಡಿ. ಸರ್ವ ಜನಾಂಗ, ಧರ್ಮ ಹಾಗೂ ಎಲ್ಲಾ ವರ್ಗಕ್ಕೂ ಸೇರಿದ ನಾಯಕ ಅವರು ಎಂದು ಹೊಗಳಿದರು. ಬೆಳಕು, ಅಧಿಕಾರದ ಲಕ್ಷ್ಮಿ ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ. ಸಿದ್ದರಾಮಯ್ಯ ಅವರಿಗೆ ಉತ್ತಮ ಆರೋಗ್ಯ ಕೊಟ್ಟು, ರಾಜ್ಯಕ್ಕೆ ಇನ್ನಷ್ಟು ಹೆಚ್ಚಿನ ಸೇವೆ ಮಾಡುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.