ಸೇವಾಲಾಲ್ ಜನ್ಮಸ್ಥಳ ಸೂರಗೊಂಡನಕೊಪ್ಪದಲ್ಲಿ RSS ಶಿಬಿರಕ್ಕೆ ಸೇವಾಲಾಲ್ ಸಮಿತಿ ಕಿಡಿ
ದಾವಣಗೆರೆ, ಆಗಸ್ಟ್, 13: ದೇಶದಲ್ಲಿ ಕೋಮುವಾದ ಹರಡುತ್ತಿರುವ ಆರ್ಎಸ್ಎಸ್ ಎನ್ನುವ ಸಂಘಟನೆ ದಲಿತ, ಬಂಜಾರರ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿದೆ. ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಸೇವಾಲಾಲ್ ಜನ್ಮಸ್ಥಳದಲ್ಲಿ ಆರ್ಎಸ್ಎಸ್ ಶಿಬಿರ ಆಯೋಜನೆಗೆ ಅವಕಾಶ ಮಾಡಿಕೊಡಬಾರದು ಎಂದು ಕರುನಾಡು ಬಂಜಾರ ಸೇವಾ ಸೇನೆಯ ರಾಜ್ಯಾಧ್ಯಕ್ಷ ಲಕ್ಷ್ಮಣ್ ರಾಮಾವತ್ ಆಗ್ರಹಿಸಿದರು.
ನಂತರ ಮಾತನಾಡಿದ ಅವರು, ಸೆಪ್ಟೆಂಬರ್ 11ರಿಂದ 19ರವರೆಗೆ ಆರ್ಎಸ್ಎಸ್ "ಉದ್ಯೋಗಿ ಪ್ರಾಥಮಿಕ ಶಿಕ್ಷಣ ವರ್ಗ'' ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. ಸೂರಗೊಂಡನಕೊಪ್ಪದ ಸೇವಾಲಾಲ್ ಸಮಿತಿಯವರು ಇದಕ್ಕೆ ಅವಕಾಶ ನೀಡಿಲ್ಲ. ಬಂಜಾರ ಮಹಾಮಠದಲ್ಲಿ ಆರ್ಎಸ್ಎಸ್ ಶಿಬಿರ ಆಯೋಜನೆ ಮಾಡುವುದಕ್ಕೆ ಬಿಡಬಾರದು ಎಂದು ಸೇವಾಲಾಲ್ ಸಮಿತಿಯವರು ಆಕ್ರೋಶ ಹೊರಹಾಕಿದರು.
ದಲಿತ, ಬಂಜಾರರಿಗೆ ಮೀಸಲಾತಿ ಮತ್ತು ಭಾರತದ ಸಂವಿಧಾನವನ್ನೇ ಒಪ್ಪದಿರುವ ಆರ್ಎಸ್ಎಸ್ಗೆ ಶಿಬಿರ ಏರ್ಪಡಿಸಿರುವುದು ನ್ಯಾಯ ಸಮ್ಮತವಲ್ಲ. ಸಚಿವ ಪ್ರಭು ಚೌವ್ಹಾಣ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಪ್ಲಾನ್ ಮಾಡಿದ್ದಾರೆ. ಸಚಿವ ಸ್ಥಾನ ಪಡೆಯಲು ಬಂಜಾರ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಆರ್ಎಸ್ಎಸ್ ಓಲೈಕೆಗಾಗಿ ಪಿ. ರಾಜೀವ್ ಶಿಬಿರ ಆಯೋಜನೆ ಮಾಡಿಕೊಟ್ಟಿರುವುದು ಅಕ್ಷಮ್ಯ ಅಪರಾಧ. ರಾಜೀವ್ ಅವರನ್ನು ಬಹಿಷ್ಕರಿಸಬೇಕು. ಕೋಮುವಾದಿ ಸಂಘಟನೆಗಳಿಗೆ ಮಠದಲ್ಲಿ ಅವಕಾಶ ಕೊಟ್ಟರೆ ನಾವು ಸುಮ್ಮನಿರಲ್ಲ. ಸೇವಾಲಾಲ್ ಜನ್ಮಸ್ಥಳ ಮಹಾಮಠದಲ್ಲಿ ಆರ್ಎಸ್ಎಸ್ ಶಿಬಿರ ಆಯೋಜನೆ ಆದರೆ ಬಂಜಾರ ಅಸ್ಮಿತೆಯನ್ನು ನಾಶಪಡಿಸಿದಂತೆ ಎಂದು ಅಸಮಾಧಾನ ಹೊರಹಾಕಿದರು. ಆರ್ಎಸ್ಎಸ್ ಶಿಬಿರ ಎಷ್ಟು ದಿನ ನಡೆಸುತ್ತಾರೋ ಅಷ್ಟು ದಿನ ನಾವು ಕಾರ್ಯಕ್ರಮ ಏರ್ಪಡಿಸುತ್ತೇವೆ. ನಮಗೆ ಅವಕಾಶ ನೀಡದಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಜನರು ತೆರಳಿ ಪ್ರತಿಭಟನೆ ನಡೆಸುತ್ತೇವೆ. ನಮ್ಮನ್ನು ಜೈಲಿಗೆ ಹಾಕಿದರೂ ಹೆದರುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮಹಾಮಠದಲ್ಲಿ ಯಾವುದೇ ರಾಜಕೀಯ ಸಂಘಟನೆಗಳಿಗೆ ಅವಕಾಶ ಕೊಡುವುದಿಲ್ಲ. ಯಾವ ಪಕ್ಷದ ಸಮ್ಮೇಳನ, ಸಂಘಟನೆಗಳಿಗೆ ಅವಕಾಶ ನೀಡಿಲ್ಲ. 9 ಕೋಟಿ ಬಂಜಾರ ಸಮುದಾಯದ ಜನರಿದ್ದಾರೆ. ಕ್ಷೇತ್ರಕ್ಕೆ ಬರುವ ಮೇಲಾಧಿಕಾರಿಗಳನ್ನು ಕರೆದುಕೊಂಡು ಬಂದು ಹೋರಾಟ ಮಾಡುತ್ತೇವೆ. ಆರ್ಎಸ್ಎಸ್ ಶಿಬಿರಕ್ಕೆ ನಮ್ಮ ತೀವ್ರ ವಿರೋಧ ಇದೆ. ಈ ಶಿಬಿರ ನಿಲ್ಲದಿದ್ದರೆ ಸೇವಾಲಾಲ್ ಜನ್ಮಸ್ಥಳದ ಎದುರು ಹೋರಾಟ ಮಾಡುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು. ಯಾರೋ ಓಲೈಕೆಗಾಗಿ ಈ ಶಿಬಿರ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸುವುದರ ಮುಲಕ ಕಿಡಿಕಾರಿದರು. ಈ ಸಂದರ್ಭದಲ್ಲಿ ಸೇವಾಲಾಲ್ ಸಮಿತಿಯ ಪದಾಧಿಕಾರಿಗಳಾದ ಅರುಣ್ ಕುಮಾರ್, ಸಂದೀಪ್, ಕುಮಾರ ನಾಯ್ಕ್ ಹಾಜರಿದ್ದರು.