ಕಂಚಿಕೇರಿ ಗ್ರಾಮದಲ್ಲಿ ತಿಂಗಳೊಳಗೆ 19 ಮಂದಿ ಸಾವು, ಊರ ಮಂದಿ ಗಾಬರಿ
ಹರಪನಹಳ್ಳಿ (ದಾವಣಗೆರೆ), ಸೆಪ್ಟೆಂಬರ್ 11: ಇಲ್ಲಿನ ಕಂಚಿಕೇರಿ ಗ್ರಾಮದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಾನಾ ಘಟನೆ ಹಾಗೂ ಕಾರಣಗಳಿಂದಾಗಿ 19 ಮಂದಿ ಮೃತಪಟ್ಟಿದ್ದಾರೆ. ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟರೆ, ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರು ಮಂದಿ ಸಹಜವಾದ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ.
ಆರು ಮಂದಿ ನಾನಾ ಕಾರಣಗಳಿಗೆ ಮೃತಪಟ್ಟಿದ್ದಾರೆ. ಆದರೆ ಇದೊಂದು ರೀತಿಯಲ್ಲಿ ಗ್ರಾಮದಲ್ಲಿ ಸಾವಿನ ಸರಣಿಯಂತೆ ಕಂಡಿದೆ ಮತ್ತು ಆತಂಕವನ್ನು ಸೃಷ್ಟಿಸಿದೆ. ಕಳೆದ ಆರು ವರ್ಷಗಳಿಂದ ಊರಮ್ಮನ ಅಥವಾ ಊರ ದೇವಿಯ ಪೂಜೆ ಮಾಡದ ಕಾರಣಕ್ಕೆ ಹೀಗೆ ಸಾವುಗಳು ಸಂಭವಿಸಿವೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ದಾವಣಗೆರೆಯಲ್ಲಿ ಭೀಕರ ಅಪಘಾತ ಬೆಂಗಳೂರಿನ ನಾಲ್ವರ ಸಾವು
ಈ ಗ್ರಾಮದಲ್ಲಿ ಐದು ವರ್ಷಕ್ಕೊಮ್ಮೆ ಊರ ದೇವಿಯ ಪೂಜೆ ನಡೆಸುವ ಪರಿಪಾಠವಿತ್ತು. "2017ರಲ್ಲಿ ಊರ ದೇವಿಯ ಪೂಜೆ ಮಾಡಬೇಕಿತ್ತು. ಆದರೆ ಅದನ್ನು ತಪ್ಪಿಸಿದ್ದೇವೆ. ಅದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣ ಇರಬೇಕು" ಎಂದು ಕಂಚಿಕೇರಿ ಗ್ರಾಮದ ಹಿರಿಯರು ತಮ್ಮ ಆತಂಕವನ್ನು ಹೊರಹಾಕುತ್ತಾರೆ.
ಸಾವು ಸಂಭವಿಸಲು ನಾನಾ ಕಾರಣಗಳಿವೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಮೇಲಿಂದ ಮೇಲೆ ಸಾವು ಕಂಡಿದ್ದರಿಂದ ಗ್ರಾಮದಲ್ಲಿ ನಾನಾ ಮಾತುಗಳಿಗೆ ಎಡೆ ಮಾಡಿಕೊಟ್ಟಿದೆ.