ವೇಗದ ಚಾಲನೆಗೆ ಒಬ್ಬರಾದ ಮೇಲೆ ಒಬ್ಬರಂತೆ ಚನ್ನಗಿರಿಯಲ್ಲಿ ಇಬ್ಬರು ಬಲಿ
ದಾವಣಗೆರೆ, ಸೆಪ್ಟೆಂಬರ್ 1: ಒಂದೇ ವಾಹನ ಪ್ರತ್ಯೇಕ ಅಪಘಾತದಲ್ಲಿ ಎರಡು ಕಡೆ ಡಿಕ್ಕಿ ಮಾಡಿ, ಇಬ್ಬರನ್ನು ಬಲಿ ಪಡೆದ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಕ್ರಾಸ್ ನಲ್ಲಿ ಮೊದಲಿಗೆ ಅಪಘಾತವಾಗಿ, ಮೂವತ್ತು ವರ್ಷದ ಸಂತೋಷ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಅಪಘಾತ ಮಾಡಿದ ನಂತರ ಚಾಲಕನು ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಹೀಗೆ ವಾಹನ ನಿಲ್ಲಿಸದೆ ವೇಗವಾಗಿ ತೆರಳುವಾಗ ಚನ್ನಗಿರಿಯ ನವಚೇತನ ಶಾಲೆಯ ಮುಂಭಾಗ ಮತ್ತೊಂದು ಅಪಘಾತ ಮಾಡಿದ್ದು, ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಇಪ್ಪತ್ಮೂರು ವರ್ಷದ ಜ್ಞಾನೇಶ್ವರ ಎಂದು ಗುರುತಿಸಲಾಗಿದೆ. ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಚನ್ನಗಿರಿ ಪೊಲೀಸರು ಅಪಘಾತವಾದ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಗಂಭೀರವಾಗಿ ಗಾಯಗೊಂಡವರನ್ನು ಚನ್ನಗಿರಿಯ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತ ಮಾಡಿದ ಮಹೀಂದ್ರಾ ಬೊಲೇರೋ ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದ ಪ್ರಕರಣದ ಸಂಬಂಧ ದೂರನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.