ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ದಾರಿಯಲ್ಲಿ ಕಾದು ನಿಂತಿದ್ದ ಜವರಾಯ
ದಾವಣಗೆರೆ, ಮಾರ್ಚ್ 09: ಸ್ಪೆಷಲ್ ಕ್ಲಾಸ್ ಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಮರಳಿನ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಮರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
Recommended Video
ದಿವ್ಯಾ ಪಾಟೀಲ್ (15) ಸಾವನ್ನಪ್ಪಿದ ಶಾಲಾ ಬಾಲಕಿಯಾಗಿದ್ದು, ದಿವ್ಯಾ ಮರಿಗೊಂಡನಹಳ್ಳಿ ಗ್ರಾಮದ ಸಮೀಪವಿರುವ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದು, ಇಂದು ಬೆಳಗ್ಗೆ ಸ್ಪೆಷಲ್ ಕ್ಲಾಸ್ ಇದ್ದ ಹಿನ್ನೆಲೆ ಶಾಲೆಗೆ ಸೈಕಲ್ ನಲ್ಲಿ ತೆರಳುತ್ತಿದ್ದ ವೇಳೆ ತುಂಗಭದ್ರ ನದಿಯಿಂದ ಮರಳು ತುಂಬಿಕೊಂಡು ಹೋಗುತ್ತಿದ್ದ ಲಾರಿ ಶಾಲಾ ಬಾಲಕಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬಾಲಕಿ ಮೃತಳಾಗುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಇನ್ನು ಆಕ್ರೋಶಗೊಂಡ ಗ್ರಾಮಸ್ಥರು ಲಾರಿಗೆ ಬೆಂಕಿ ಇಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ ತುಂಗಭದ್ರಾ ನದಿಯಿಂದ ಮರಳು ತುಂಬಿ ಹೋಗುವ ಲಾರಿಗಳ ಸಂಚಾರ ಮಾಡುತ್ತಿವೆ, ಬೈಕ್ ಗಳಲ್ಲಿ ಕಾರುಗಳಲ್ಲಿ ಓಡಾಡುವುದು ಕೂಡ ಕಷ್ಟವಾಗಿದೆ. ಅಕ್ರಮವಾಗಿ ಕೆಲವರಿಗೆ ಪರವಾನಿಗೆ ಇಲ್ಲದೆ ಮರಳುಗಾರಿಕೆ ಮಾಡುತ್ತಿದ್ದರು. ಇದರಿಂದ ಗ್ರಾಮಸ್ಥರು ಸಾಕಷ್ಟು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ.
ಅಲ್ಲದೆ ಮರಳು ಲಾರಿಗಳು ಗ್ರಾಮದಲ್ಲೇ ಹಾದು ಹೋಗುತ್ತಿರುವುದರಿಂದ ಇಲ್ಲಿನ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಈಗ ಶಾಲೆಗೆ ಹೋಗಿ ಓದಿ, ಮುಂದೆ ಉನ್ನತ ಹುದ್ದೆಯ ಕನಸು ಕಂಡಿದ್ದ ಬಾಲಕಿ ಈಗ ಶವವಾಗಿ ಮನೆಗೆ ಬಂದಿದ್ದಾಳೆ.
ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಯವರು ಬರಬೇಕು, ಇಲ್ಲವಾದರೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದರು. ಇನ್ನು ಸ್ಥಳಕ್ಕೆ ನ್ಯಾಮತಿ ಠಾಣೆಯ ಪೊಲೀಸರು ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟರು. ಮೃತ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.