ಜೀವ ಕೈಯಲ್ಲಿ ಹಿಡಿದು ನದಿ ದಾಟುವ ಗ್ರಾಮಸ್ಥರು; ಇದು ಮಳೆ ಎಫೆಕ್ಟ್
ದಾವಣಗೆರೆ, ಆಗಸ್ಟ್ 10: ದಾವಣಗೆರೆಯಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಳೆಯ ರೌದ್ರ ನರ್ತನಕ್ಕೆ ಜಿಲ್ಲೆಯಲ್ಲಿನ ಬಹುತೇಕ ಗ್ರಾಮಗಳು ಜಲಾವೃತವಾಗಿ ಜನರಲ್ಲಿ ಆತಂಕ ಮನೆ ಮಾಡಿದೆ.
Recommended Video
ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗಿ ಎರಡು ಗ್ರಾಮಗಳ ನಡುವಿನ ಸಂಪರ್ಕ ಸೇತುವೆಯೂ ಮುಳುಗಡೆಯಾಗಿದೆ. ಇದರಿಂದ ಗ್ರಾಮಗಳು ಸಂಪರ್ಕವನ್ನೇ ಕಡಿದುಕೊಂಡಿವೆ. ಎದೆ ಮಟ್ಟದವರೆಗೂ ಬಂದ ನೀರಿನ ನಡುವೆಯೇ ಜನರು ಸಾಮಾನು ಸರಂಜಾಮು ಹಿಡಿದು ಗ್ರಾಮಗಳನ್ನು ತೊರೆಯುತ್ತಿರುವ ದೃಶ್ಯ ಭಯ ಹುಟ್ಟಿಸುವಂತಿವೆ. ಮೊನ್ನೆಯಷ್ಟೇ ಅಧಿಕ ಮಳೆಯಿಂದಾಗಿ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಹೆಚ್ಚಿದ್ದು, ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದೆ. ಜನರು ಜಾಗರೂಕರಾಗಿರಬೇಕೆಂದು ಹರಿಹರ ಗ್ರಾಮಾಂತರ ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ ಎಚ್ಚರಿಕೆ ನೀಡಿದ್ದರು.
ಅಪಾಯದ ಮಟ್ಟಕ್ಕೆ ಹರಿಯುತ್ತಿರುವ ನದಿ
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯು ನಿರಂತರವಾಗಿದ್ದು, ಅಪಾಯದ ಮಟ್ಟಕ್ಕೆ ತುಂಗಾ ನದಿ ಹರಿಯುತ್ತಿದೆ. ತುಂಗಾಭದ್ರಾ ನದಿಯ ಪಾತ್ರದಲ್ಲಿ ಬರುವ ಸಂಪೂರ್ಣ ಪ್ರದೇಶಗಳು ಮುಳುಗಡೆಯಾಗಿವೆ.
ಮಳೆ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತಕ್ಕೆ ಸಂಸದ ಸಿದ್ದೇಶ್ವರ ಸೂಚನೆ
ಸಾರಥಿ-ಚಿಕ್ಕಬಿದರಿ ಸಂಪರ್ಕ ಸೇತುವೆ ಮುಳುಗಡೆ
ಹರಿಹರ ತಾಲ್ಲೂಕಿನ ಸಾರಥಿ ಹಾಗೂ ಚಿಕ್ಕ ಬಿದರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಗ್ರಾಮಗಳಿಂದ ಜಮೀನುಗಳಿಗೆ ರೈತರು ಹೋಗಬೇಕಿದ್ದರೆ ನದಿಯನ್ನು ದಾಟಿ ಹೋಗುವ ಪರಿಸ್ಥಿತಿ ಎದುರಾಗಿದೆ. ನೀರಿನಲ್ಲಿ ಭಯದ ನಡುವೆಯೇ ಓಡಾಡುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ
ಜನರು ಜಾನುವಾರುಗಳನ್ನು ಹಿಡಿದು ಕುತ್ತಿಗೆ ಮಟ್ಟಕ್ಕೆ ಬರುವ ತುಂಗಾಭದ್ರಾ ನದಿಯ ನೀರಿನಲ್ಲಿ ದಡ ಸೇರುತ್ತಿರುವ ವೀಡಿಯೋ ವೈರಲ್ ಆಗಿದೆ. ಹರಿಯುತ್ತಿರುವ ತುಂಗಾಭದ್ರಾ ನದಿಯನ್ನು ದಾಟಲು ಸಾರಥಿ ಹಾಗೂ ಚಿಕ್ಕ ಬಿದರಿ ಗ್ರಾಮದ ಜನರು ಸಾಹಸ ಪಡುತ್ತಿದ್ದು, ಸೇತುವೆಯನ್ನು ನಿರ್ಮಿಸುವಂತೆ ಕಳೆದ 15 ವರ್ಷಗಳಿಂದ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು.
ಹರಿಹರದಲ್ಲಿ ಪ್ರವಾಹ ಭೀತಿ; ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ
ಎಚ್ಚರಿಕೆ ನೀಡಿದ್ದ ಹರಿಹರ ಗ್ರಾಮಾಂತರ ಡಿವೈಎಸ್ ಪಿ
ಈ ಮುನ್ನವೇ, ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗುತ್ತದೆ. ಇದರಿಂದ ನದಿಗೆ ನೀರು ಹರಿಸಲಾಗುತ್ತದೆ. ನದಿ ಪಾತ್ರದಲ್ಲಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ನದಿಪಾತ್ರಕ್ಕೆ ಸಾರ್ವಜನಿಕರು, ದನಕರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ಪೊಲೀಸ್ ಇಲಾಖೆ ಅಗ್ನಿಶಾಮಕದಳ ಮತ್ತು ಈಜುಗಾರರ ತಂಡ ಒಳಗೊಂಡಂತೆ ವಿಪತ್ತು ನಿರ್ವಹಣೆ ಕಾರ್ಯದಲ್ಲಿ ಬಳಸಬೇಕಾದ ರಕ್ಷಾ ಕವಚಗಳೊಂದಿಗೆ ಮುಂಜಾಗ್ರತಾ ಕ್ರಮವಾಗಿ ಸಿದ್ಧವಾಗಿದೆ ಎಂದು ಹರಿಹರ ಗ್ರಾಮಾಂತರ ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ ಎಚ್ಚರಿಕೆ ನೀಡಿದ್ದರು.