ಜೆಡಿಎಸ್ ನಾಯಕರಿಗೆ ಮೋಹಿನಿ ಭಸ್ಮಾಸುರ ಕಥೆ ಹೇಳಿದ; ರೇಣುಕಾಚಾರ್ಯ
ದಾವಣಗೆರೆ, ಜೂ28: "ಸಂಘ ಪರಿವಾರದವರ ವಿರುದ್ಧ ಮಾತನಾಡಿದರೆ ಭಸ್ಮ ಆಗುತ್ತಾರೆ. ಅಂಥವರು ದೇಶದ್ರೋಹಿಗಳು" ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ. ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಕುಟುಂಬ ರಾಜಕಾರಣ ಮಾಡುವುದು ಜೆಡಿಎಸ್ನವರು. ದೇವೇಗೌಡರಿಂದ ಹಿಡಿದು ಮೊಮ್ಮಕ್ಕಳು ರಾಜಕಾರಣದಲ್ಲಿದ್ದಾರೆ. ಆರ್ಎಸ್ಎಸ್ ಹಾಗೂ ಹಿಂದುತ್ವದ ವಿರುದ್ಧ ಮಾತನಾಡಿದರೆ ಮೋಹಿನಿ ಕಥೆಯಂತೆ ಭಸ್ಮ ಆಗುವುದು ಖಚಿತ" ಎಂದರು.
ದಾವಣಗೆರೆ ಗ್ರಾಮೀಣ ಜನರಿಗೆ ಲಕ್ಷಾಂತರ ರೂಪಾಯಿ ಬಿಲ್ ಶಾಕ್ ನೀಡಿದ ಬೆಸ್ಕಾಂ...!
"ಆರ್ಎಸ್ಎಸ್ ಬಗ್ಗೆ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ನಾಚಿಕೆಯಾಗಬೇಕು. ಸಂಘ ಪರಿವಾರದವರಿಗೆ ಹೆಂಡತಿ ಮಕ್ಕಳಿದ್ದಾರಾ. ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಎಚ್. ಡಿ. ರೇವಣ್ಣ ಮಂತ್ರಿಯಾಗಿದ್ದಾಗ ಹಾಗೂ ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿ ರಾಜ್ಯದ ಲೂಟಿ ಮಾಡಿದ್ದಾರೆ. ಸಂಘ ಪರಿವಾರದ ಬಗ್ಗೆ ಮಾತನಾಡುವ ಯೋಗ್ಯತೆ ಹಾಗೂ ನೈತಿಕತೆ ಕಾಂಗ್ರೆಸ್ ಮುಖಂಡರು ಹಾಗೂ ಕುಮಾರಸ್ವಾಮಿಗೆ ಇಲ್ಲ" ಎಂದು ರೇಣುಕಾಚಾರ್ಯ ಹೇಳಿದರು.
ಕುಮಾರಸ್ವಾಮಿಗೆ ಹತಾಶರಾಗಿ ಆರ್ಎಸ್ಎಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ: ಎಸ್. ಟಿ.ಸೋಮಶೇಖರ್
ದೇಶ, ರಾಜ್ಯದಲ್ಲಿ ನೆಲಕಚ್ಚಿದೆ
"ಲಾಠಿ, ಟೋಪಿ, ಎರಡು ಜೊತೆ ಸಮವಸ್ತ್ರ, ಪ್ಯಾಂಟ್ ಅಷ್ಟೇ ಸಂಘ ಪರಿವಾರದವರ ಬಳಿ ಇರೋದು. ಇವತ್ತಿಗೂ ಚಾಪೆ ಮೇಲೆ ಮಲಗುತ್ತಾರೆ. ವೈಭವದ ಜೀವನ ನಡೆಸುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತೇವೆ ಎಂಬ ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಮುಳುಗುವ ಹಡಗು. ದೇಶ ಹಾಗೂ ರಾಜ್ಯದಲ್ಲಿ ನೆಲಕಚ್ಚಿದೆ" ಎಂದು ರೇಣುಕಾಚಾರ್ಯ ಹೇಳಿದರು.
"2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ನಾವೆಲ್ಲರೂ ಒಂದಾಗಿದ್ದೇವೆ. ಸಂಘಟನೆ ನಮ್ಮಲ್ಲಿದೆ. ಒಟ್ಟಾಗಿ ಚುನಾವಣೆ ಎದುರಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿಗೆ ಜನಾಶೀರ್ವಾದ ಸಿಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಪ್ಪು ಮಾಡಿಲ್ಲ ಎಂದರೆ ಯಾಕೆ ಹೆದರಬೇಕು
"ಶೇಕಡಾ 40 ರಷ್ಟು ಪರ್ಸಂಟೇಜ್ ವಿಚಾರ ಸಂಬಂಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಚಣ್ಣಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದ್ದರೆ ಒಳ್ಳೆಯದು. ಭ್ರಷ್ಟಾಚಾರದ ವಿರುದ್ಧ ತನಿಖೆ ಆದರೆ ತಪ್ಪೇನಿದೆ?. ಪಾರದರ್ಶಕ ಆಡಳಿತ ನೀಡಿರುವ ಪ್ರಧಾನಿ ಮೋದಿ ಅವರು ಪರಾಮರ್ಶಿಸಲು ಮುಂದಾಗಿದ್ದಾರೆ. ತಪ್ಪು ಮಾಡಿಲ್ಲ ಎಂದರೆ ಯಾಕೆ ಹೆದರಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು" ಎಂದರು.
"ಸರ್ಕಾರ ನಡೆಯುತ್ತಿಲ್ವಾ. ನಾನಂತೂ ಮಂತ್ರಿಗಿರಿಗೆ ಅರ್ಜಿ ಹಾಕಿಲ್ಲ, ಅದರ ಅವಶ್ಯಕತೆ ಇಲ್ಲ. ಅಧಿಕಾರದ ಹಿಂದೆ ನಾನು ಹೋಗಲ್ಲ, ಅಧಿಕಾರ ನನ್ನನ್ನು ಹುಡುಕಿಕೊಂಡು ಬರಬೇಕು. ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ" ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಎಚ್. ಡಿ. ಕುಮಾರಸ್ವಾಮಿಗೆ ಬುದ್ಧಿ ಇಲ್ಲ
"ಆರ್ಎಸ್ಎಸ್ ಬಗ್ಗೆ ಕೇವಲವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಬುದ್ಧಿ ಇಲ್ಲ. ಈ ರೀತಿಯಾದ ಹೇಳಿಕೆ ಕೊಡುವುದು ಶೋಭೆ ತರುವಂಥದ್ದಲ್ಲ" ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಕಿಡಿಕಾರಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಕುಮಾರಸ್ವಾಮಿಯು ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಇದೆ. ಈ ರೀತಿಯಾದ ಹೇಳಿಕೆ ಕೊಡೋದು ಶೋಭೆ ತರುವಂಥದ್ದಲ್ಲ" ಎಂದರು.
ಎಚ್ ಡಿಕೆಗೆ ಸೋಮಶೇಖರ್ ಎಚ್ಚರಿಕೆ
"ಅಗ್ನಿಪಥ್ ಯೋಜನೆ ಆರ್ಎಸ್ಎಸ್ ಯೋಜನೆ ಎಂಬ ಅನುಮಾನವಿದೆ, ಇವರಿಗೆ ಈ ಯೋಜನೆಯ ಸಲಹೆ ಕೊಟ್ಟವರು ಯಾರು?. ರಕ್ಷಣಾ ಇಲಾಖೆಗೆ ಯಾರು ಸಲಹೆ ಕೊಟ್ಟರು. ಸಂಸದರ ಸಮಿತಿ ಸಲಹೆ ಕೊಟ್ಟಿದೆಯಾ ಅಥವಾ ಆರ್ಎಸ್ಎಸ್ ಸಲಹೆ ಕೊಟ್ಟಿದೆಯೇ?" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎಂದು ಪ್ರಶ್ನಿಸಿದ್ದರು.
ಎಸ್. ಟಿ. ಸೋಮಶೇಖರ್ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. "ಆರ್ಎಸ್ಎಸ್ನವರಿಗೆ ಶೇಕಡಾ 40 ರಷ್ಟು ಕಮೀಷನ್ ಕೊಡುತ್ತಾರೆ ಅಂದರೆ ಏನರ್ಥ?. ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಆರ್ಎಸ್ಎಸ್ ಒಂದು ದೇಶಭಕ್ತ ಸಂಘಟನೆ. ಇದರ ಬಗ್ಗೆ ಮಾತಾಡುವುದು ಸರಿಯಲ್ಲ. ಮೇಲಾಗಿ ಕುಮಾರಸ್ವಾಮಿ ಅವರಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಹೀಗಾಗಿ ಇಂತಹ ಆರೋಪ ಮಾಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವಾಗ ತಿಳಿದು ಮಾತನಾಡಬೇಕು" ಎಂದು ಸಲಹೆ ನೀಡಿದರು.