ರಾಜಕೀಯ ನಿವೃತ್ತಿ ಹೇಳಿಕೆ ವಾಪಸ್ ಪಡೆದ ಎಂ.ಪಿ.ರವೀಂದ್ರ!
ಬೆಂಗಳೂರು, ಡಿಸೆಂಬರ್. 12 : ಕೆಎಂಎಫ್ ನಿರ್ದೇಶಕ, ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಪಿ.ರವೀಂದ್ರ ತಮ್ಮ 'ರಾಜಕೀಯ ನಿವೃತ್ತಿ' ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ.
ರಾಜಕೀಯ ನಿವೃತ್ತಿ ಘೋಷಿಸಿದ ಹರಪನಹಳ್ಳಿ ಶಾಸಕ ಎಂ.ಪಿ.ರವೀಂದ್ರ
ನವೆಂಬರ್ 26ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಎಂ.ಪಿ.ರವೀಂದ್ರ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು. '2018ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ' ಎಂದು ಹೇಳಿದ್ದರು.
ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿಯ ಕೃಷ್ಣಾದಲ್ಲಿ ಎಂ.ಪಿ.ರವೀಂದ್ರ ಭೇಟಿ ಮಾಡಿದರು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಂ.ಪಿ.ರವೀಂದ್ರ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ ಹೇಳುವುದೇನು?
ಭೇಟಿಯ ವೇಳೆ ಸಿದ್ದರಾಮಯ್ಯ ಅವರು ಎಂ.ಪಿ.ರವೀಂದ್ರ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ, ಅವರು ತಮ್ಮ ನಿರ್ಧಾರವನ್ನು ವಾಪಸ್ ಪಡೆದಿದ್ದು, 2018ರ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಎಂ.ಪಿ.ರವೀಂದ್ರ ಏನು ಹೇಳಿದ್ದರು? : 'ಕಲುಷಿತ ರಾಜಕೀಯ, ದುಬಾರಿ ಚುನಾವಣೆ ಹಾಗೂ ವೈಯಕ್ತಿಕ ಸಮಸ್ಯೆಯ ಕಾರಣದಿಂದ ಮನನೊಂದು ಚುನಾವಣಾ ರಾಜಕೀಯದಿಂದ ದೂರ ಸರಿಯುವ ನಿರ್ಧಾರ ಮಾಡಿದ್ದೇನೆ' ಎಂದು ರವೀಂದ್ರ ಹೇಳಿದ್ದರು.
'ನಾನು ಫಲಾಯನವಾದಿಯಲ್ಲ. ಮುಂದಿನ ಸಲ ಟಿಕೆಟ್ ಸಿಗುವುದಿಲ್ಲ ಎಂಬ ಭಯವೂ ನನಗಿಲ್ಲ. ಚುನಾವಣೆಯಿಂದ ದೂರವಿದ್ದರೂ ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಕಾಂಗ್ರೆಸ್ನಲ್ಲಿಯೇ ಇರುತ್ತೇನೆ' ಎಂದು ರವೀಂದ್ರ ಸ್ಪಷ್ಟಪಡಿಸಿದ್ದರು.