"ನಿವೃತ್ತ ಕಾರ್ಮಿಕರಿಗೂ ನೆರವು ನೀಡಿ"; ಸರ್ಕಾರಕ್ಕೆ ಮನವಿ
ದಾವಣಗೆರೆ, ಮೇ 12: ಕೊರೊನಾ ಕರಿನೆರಳು ನಿವೃತ್ತ ಕಾರ್ಮಿಕರ ಮೇಲೂ ಬಿದ್ದಿದೆ. ರಾಜ್ಯದಲ್ಲಿ ಸುಮಾರು 15 ಲಕ್ಷದಷ್ಟು ನಿವೃತ್ತ ಕಾರ್ಮಿಕರಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 10 ಸಾವಿರ ನಿವೃತ್ತ ಕಾರ್ಮಿಕರಿದ್ದಾರೆ. ಇವರಲ್ಲಿ ಬಹುತೇಕರ ಬದುಕು ಇದೀಗ ಚಿಂತಾಜನಕವಾಗಿಯೇ ಇದೆ.
ಹೀಗಾಗಿ ದಾವಣಗೆರೆಯ ಗಣೇಶ್ ಕಾಟನ್ ಮಿಲ್ ನಿವೃತ್ತ ಕಾರ್ಮಿಕರು ತಮ್ಮ ಸಂಕಷ್ಟವನ್ನು ಸರ್ಕಾರಕ್ಕೆ ಹೇಳಿಕೊಂಡಿದ್ದಾರೆ. ನಿವೃತ್ತ ಕಾರ್ಮಿಕರಿಗೂ ಪ್ಯಾಕೇಜ್ ಘೋಷಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ವಲಸೆ ಕಾರ್ಮಿಕರ ಬಲಿ: ಕೊನೆಗೂ ಎಚ್ಚೆತ್ತ ಕೇಂದ್ರದಿಂದ ಸುತ್ತೋಲೆ
ಇಲ್ಲಿನ ಕಾರ್ಮಿಕರೆಲ್ಲಾ 70 ವರ್ಷದ ಗಡಿಯಲ್ಲಿದ್ದು, ಎಲ್ಲರೂ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿದ್ದಾರೆ. 800 ರಿಂದ 1 ಸಾವಿರ ಪೆನ್ಷನ್ ಪಡೆಯುವ ಇವರು ಜೀವನ ನಡೆಸುವುದೇ ಕಷ್ಟವಾಗಿದೆ ಎನ್ನುತ್ತಾರೆ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಸ್ ಚಂದ್ರಶೇಖರಪ್ಪ. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡವರು, ಕಾರ್ಮಿಕರು ಸೇರಿದಂತೆ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದೆ. ಅದರಂತೆ ನಿವೃತ್ತ ಕಾರ್ಮಿಕರ ಬಗ್ಗೆಯೂ ಚಿಂತನೆ ನಡೆಸಬೇಕಿದೆ. ಆರ್ಥಿಕ ಸಂಕಷ್ಟದಲ್ಲಿರುವ ನಮಗೆ ಸರ್ಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕಟ್ಟಡ ಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ಇತರೆ ಬಡ ವರ್ಗಕ್ಕೆ ಸರ್ಕಾರ ನೆರವಿಗೆ ನಿಂತಿದೆ. ಅದರಂತೆ ನಮಗೂ ಆರ್ಥಿಕ ಸಹಾಯ ಮಾಡಬೇಕೆಂದು ನಿವೃತ್ತ ಕಾರ್ಮಿಕರು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ನಮಗೆ ಜೀವನ ಭದ್ರತೆ ಇಲ್ಲ. ಬಹುತೇಕ ಎಲ್ಲಾ ನಿವೃತ್ತ ಕಾರ್ಮಿಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಔಷಧಗಳಿಗೂ ಹಣವಿಲ್ಲದಂತಾಗಿದೆ. ಇಂಥ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿವೃತ್ತ ಕಾರ್ಮಿಕರ ಬಗ್ಗೆ ಗಮನ ಹರಿಸಿ ಅವರ ನೆರವಿಗೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಕಾರ್ಮಿಕ ಮುಖಂಡ ಬಿ.ಎಸ್ ಚಂದ್ರಶೇಖರಪ್ಪ.