ಗಣರಾಜ್ಯೋತ್ಸವ ವಿಶೇಷ: ಜ.23ರಿಂದ ನಾಲ್ಕು ದಿನಗಳ ಕಾಲ ದಾವಣಗೆರೆಯಲ್ಲಿ ಪುಷ್ಪ ಪ್ರದರ್ಶನ
ದಾವಣಗೆರೆ, ಜನವರಿ 22: ತೋಟಗಾರಿಕೆ ಇಲಾಖೆಯಿಂದ ಗಣರಾಜ್ಯೋತ್ಸವದ ಅಂಗವಾಗಿ ದಾವಣಗೆರೆ ನಗರದಲ್ಲಿ ಪುಷ್ಪ ಪ್ರದರ್ಶನವನ್ನು ಜ.23 ರಿಂದ 26 ರವರೆಗೆ 4 ದಿನಗಳ ಕಾಲ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ.ಲಕ್ಷ್ಮೀಕಾಂತ ಬೊಮ್ಮನರ್ ತಿಳಿಸಿದರು.
ಗಾಜಿನ ಮನೆಯಲ್ಲಿನ ತಮ್ಮ ಕಚೇರಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಜಿನ ಮನೆಯ ಆವರಣದಲ್ಲಿ ಸಾರ್ವಜನಿಕರಿಗೆ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಪುಷ್ಪ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. ಪ್ರತಿ ದಿನ 10 ರೂ. ಚಿಕ್ಕವರಿಗೆ ಮತ್ತು 20 ರೂ. ವಯಸ್ಕರಿಗೆ ಪ್ರದರ್ಶನದ ಪ್ರವೇಶ ಶುಲ್ಕವಿದೆ.
ಜ.26 ರಂದು ಬೆಂಗಳೂರಿನಲ್ಲಿ ಬೃಹತ್ ರೈತ ಪರ್ಯಾಯ ಪರೇಡ್
ಈ ವರ್ಷ ಸರ್ಕಾರದ ಅನುದಾನ ಸಿಗದೇ ಜಿಲ್ಲಾ ಪಂಚಾಯತ್ನಿಂದ 7 ಲಕ್ಷ ರೂ. ಅನುದಾನ ಸೇರಿ ಒಟ್ಟು 10 ಲಕ್ಷ ರೂ. ಅನುದಾನದಲ್ಲಿ ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕೆಯ ಬಗ್ಗೆ ಅಭಿರುಚಿ ಹೆಚ್ಚಿಸಲು, ಮನೆಗಳಲ್ಲಿ ವಿವಿಧ ಅಲಂಕಾರಿಕ ಗಿಡಗಳು ಹಾಗೂ ಹೂ ಗಿಡಗಳನ್ನು ಬೆಳೆಸಲು ಪ್ರೋತ್ಸಾಹಿಸಲು, ಮಕ್ಕಳಿಗೆ ತೋಟಗಾರಿಕೆ ಬಗ್ಗೆ ಜ್ಞಾನ ಹೆಚ್ಚಿಸಲು, ಮುಖ್ಯವಾಗಿ ಮನೆಮಂದಿಯೆಲ್ಲ ಫಲಪುಷ್ಪ ಪ್ರದರ್ಶನ ವೀಕ್ಷಿಸಿ ತಮ್ಮ ದಿನ ನಿತ್ಯದ ಒತ್ತಡದ ಜೀವನದಿಂದ ಹೊರಬಂದು, ಮನಸ್ಸನ್ನು ಹಗುರಗೊಳಿಸಿ ಉತ್ಸಾಹಗೊಳಿಸಬಹುದು ಎಂದರು.
ಪುಷ್ಪ ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿ ಗೇಟ್ ವೇ ಆಫ್ ಇಂಡಿಯಾ ಸ್ಮಾರಕವನ್ನು ಹೂವಿನಿಂದ ಅಲಂಕಾರಿತ ಕಲಾಕೃತಿಯನ್ನು 26 ಅಡಿ ಎತ್ತರ ಮತ್ತು 17 ಅಡಿ ಅಗಲದಲ್ಲಿ 2 ಲಕ್ಷದ 10 ಸಾವಿರ ಸಂಖ್ಯೆಯ ಬಿಳಿ, ಕೆಂಪು ಮತ್ತು ಹಳದಿ ಬಣ್ಣದ ಶೇವಂತಿಗೆ ಹೂವುಗಳು ಹಾಗೂ 36 ಸಾವಿರ ಕೆಂಪು ಗುಲಾಬಿ ಹಾಗೂ ಎಲೆಗಳಿಂದ ತಯಾರಿಸಿರುವ ಪ್ರತಿರೂಪವನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ.
ವಿವಿಧ ಹೂವುಗಳಾದ ಕಾರ್ನೇಷನ್, ಲಿಲಿಯಮ್, ಆಂಥೂರಿಯಮ್, ಆರ್ಕಿಡ್ಸ್, ಗೆರ್ಬೆರಾ ಮತ್ತು ಹಸಿರು ಎಲೆಗಳಿಂದ ಅಲಂಕೃತವಾಗಿರುವ 10 ಅಡಿ ಎತ್ತರದ ಹಾಗೂ 7 ಅಡಿ ಅಗಲದ 4 ಫೋಟೋ ಫ್ರೇಮ್ ಗಳ ಹೂವಿನ ಕಲಾಕೃತಿಯನ್ನು 45 ಸಾವಿರ ಹೂವುಗಳಿಂದ ಅಲಂಕರಿಸಿ ಪ್ರದರ್ಶಿಸಲಾಗಿದೆ ಎಂದು ಹೇಳಿದರು.
Recommended Video
ಪುಷ್ಪ ಪ್ರದರ್ಶನ ವೀಕ್ಷಣೆ ವೇಳೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಪಾಲಿಸುವುದು ಮತ್ತು ಸ್ಯಾನಿಟರ್ ಬಳಕೆ ಮಾಡುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು. ಸಹಾಯಕ ನಿರ್ದೇಶಕ ಶ್ರೀಕಾಂತ್, ಶಶಿಕಲಾ, ರಾಮಕೃಷ್ಣ, ರೋಹಿತ್, ವೆಂಕಟೇಶಮೂರ್ತಿ, ವೀರಭದ್ರಸ್ವಾಮಿ ಇದ್ದರು.