"ಕಾಂಗ್ರೆಸ್-ಜೆಡಿಎಸ್ ನವರು ಸತ್ಯಹರಿಶ್ಚಂದ್ರರಾ?"
ದಾವಣಗೆರೆ, ಫೆಬ್ರವರಿ 15: "ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರ ಸಾಕಷ್ಟು ಹಗರಣಗಳಿವೆ. ಆನಂದ್ ಸಿಂಗ್ ಕಾಂಗ್ರೆಸ್ ಸೇರಿಸಿಕೊಂಡಾಗ ಅವರ ಮೇಲೆ ಆರೋಪ ಇರಲಿಲ್ಲವೇ" ಎಂದು ಪ್ರಶ್ನಿಸಿರುವ ಎಂಪಿ ರೇಣುಕಾಚಾರ್ಯ, "ಎಸಿಬಿ ರಚನೆ ಮಾಡಿ ನಿಮ್ಮ ಕೇಸ್ ಗಳನ್ನು ಕ್ಲೀನ್ ಚಿಟ್ ಮಾಡಿಕೊಂಡಿದ್ದೀರ. ಕಾಂಗ್ರೆಸ್, ಜೆಡಿಎಸ್ ನವರು ಸತ್ಯಹರಿಶ್ಚಂದ್ರರಾ? ಕಾಂಗ್ರೆಸ್ ಬಿಟ್ಟು ಬಿಜೆಪಿಯಿಂದ ಸಚಿವರಾಗಿದ್ದಕ್ಕೆ ಅಸೂಯೆಯಿಂದ ಈ ರೀತಿ ಹೇಳುತ್ತಿದ್ದೀರ" ಎಂದು ಪ್ರಶ್ನೆ ಎಸೆದಿದ್ದಾರೆ.
"ಕುಮಾರಸ್ವಾಮಿ ಈಗ ವಿಲವಿಲ ಒದ್ದಾಡುತ್ತಿದ್ದಾರೆ"
ದಾವಣಗೆರೆಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆನಂದ್ ಸಿಂಗ್ ಅರಣ್ಯ ಸಚಿವರಾಗಿ ಮುಂದುವರೆಯಲಿ, ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ" ಎಂದು ಆನಂದ ಸಿಂಗ್ ಪರ ರೇಣುಕಾಚಾರ್ಯ ಮಾತನಾಡಿದ್ದಾರೆ.
ಕಾಂಗ್ರೆಸ್ ನವರು ಎಂಟಿಆರ್ ರೆಡಿ ಫುಡ್ ಇದ್ದಂತೆ: ಸಚಿವ ಅಶೋಕ್ ಪುತ್ರನ ಕಾರಿನ ಅಪಘಾತದ ಪ್ರಕರಣ ಶೀಘ್ರವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್ ನೀಡಿರುವ ಪ್ರತಿಕ್ರಿಯೆಗಳ ಬಗ್ಗೆ ವ್ಯಂಗ್ಯವಾಡಿದ ರೇಣುಕಾಚಾರ್ಯ, "ಕಾಂಗ್ರೆಸ್ ನವರು ಎಂಟಿಆರ್ ರೆಡಿ ಫುಡ್ ಇದ್ದ ಹಾಗೆ. ಪ್ರತಿಭಟನೆ ಮಾಡೋದೇ ಅವ್ರಿಗೆ ಗೊತ್ತಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ಪಕ್ಷ ಎಂದುಕೊಂಡಿದ್ದಾರೆ. ಆ ಪಕ್ಷ ಬೇರೆ, ಇದು ಬೇರೆ, ಇವರೆಲ್ಲ ಮಾಧ್ಯಮದವರ ಮುಂದೆ ಬಾವುಟ ತೆಗಿತಾರೇ, ಅವರು ಹೋದ ಮೇಲೆ ಮಡಚಿಕೊಂಡು ಇಟ್ಕೊತಾರೆ" ಎಂದರು.
ಕತ್ತಿಗೆ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆಂದ ರೇಣುಕಾಚಾರ್ಯ
ಕತ್ತಿಯವರು ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, "ಹೋಗಲಿ ಬಿಡಿ ಕತ್ತಿಯವರು ನಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಹೋಗಿದ್ದಾರೆ. ಪಾಕಿಸ್ಥಾನದವರನ್ನೋ, ಭಯೋತ್ಪಾದಕರನ್ನು ಭೇಟಿ ಮಾಡಲು ಹೋಗಿಲ್ಲ. ಅವರು ಹಿರಿಯ ನಾಯಕರು. ಸಚಿವ ಸ್ಥಾನ ಕೇಳೋದರಲ್ಲಿ ಏನ್ ತಪ್ಪಿದೆ" ಎಂದರು.