ದಾವಣಗೆರೆ ಪಾಲಿಕೆ ಚುನಾವಣೆ; ಚುನಾವಣಾ ಕಸರತ್ತಿಗೆ ಜೊತೆಯಾಯ್ತು ಬಂಡಾಯದ ಬಿಸಿ
ದಾವಣಗೆರೆ, ನವೆಂಬರ್ 5: ಪಾಲಿಕೆ ಚುನಾವಣೆಯ ದಿನಾಂಕ ನಿಗದಿಯಾಗಿ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಆದರೆ ಈಗ ಟಿಕೆಟ್ ಆಕಾಂಕ್ಷಿಗಳು ಪಾಲಿಕೆ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಪಾಲಿಕೆಯ ಗದ್ದುಗೆ ಹಿಡಿಯಬೇಕು ಎಂದು ಹೊರಟವರು ಒಂದು ಕಡೆಯಾದರೆ, ಪಕ್ಷಗಳ ಟಿಕೆಟ್ ಕೈತಪ್ಪಿದ ಕಾರ್ಯಕರ್ತರ ಬಂಡಾಯದ ಬಿಸಿ ಮತ್ತೊಂದೆಡೆ.
ಈ ಬಾರಿ ಪಾಲಿಕೆ ಗದ್ದುಗೆ ಏರಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಕಸರತ್ತು ನಡೆಯುತ್ತಿದೆ. ಇದರಲ್ಲಿ ರಾಷ್ಟ್ರೀಯ ಪಕ್ಷಗಳು ಅಧಿಕಾರ ಹಿಡಿಯಲೇಬೇಕು ಎಂದು ಪಟ್ಟು ಹಿಡಿದಿವೆ. ಆದರೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಬಂಡಾಯದ ಬಿಸಿ ತಟ್ಟುವಂತಿದೆ. ಕಾಂಗ್ರೆಸ್ ನಲ್ಲಿ ಐದಾರು ವಾರ್ಡ್ ಗಳಲ್ಲಿ ಬಂಡಾಯ ಅಭ್ಯರ್ಥಿಗಳಿದ್ದು ಪಕ್ಷದ ಮುಖಂಡರಿಂದ ಮನವೊಲಿಸುವ ಕೆಲಸ ನಡೆಯುತ್ತಿದೆ. ಅಲ್ಲದೆ ಏನಾದರೂ ಪಕ್ಷದ ನಿರ್ಣಯಕ್ಕೆ ಒಪ್ಪದೆ ಬಂಡಾಯವಾಗಿ ಸ್ಪರ್ಧಿಸಿದರೆ ಅಂಥರಿಗೆ ತಲೆತಂಡ ತಪ್ಪಿದ್ದಲ್ಲ ಎನ್ನುವ ಎಚ್ಚರಿಕೆಯನ್ನು ನೀಡಲಾಗುತ್ತಿದೆ.
ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆಗೆ ನ. 12ಕ್ಕೆ ಚುನಾವಣೆ ಘೋಷಣೆ
45 ವಾರ್ಡ್ ಗಳನ್ನು ಹೊಂದಿರುವ ಮಹಾನಗರ ಪಾಲಿಕೆಯಲ್ಲಿ ನಲವತ್ತಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಪಾಲಿಕೆ ಗದ್ದುಗೆ ಏರುವೆವು ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಎನ್ನುವಂತೆ 45ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಎನ್ನುವ ನಾಮಪತ್ರ ತಿರಸ್ಕರಿಸಿದ್ದು ಈಗ ಈ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲದಂತಾಗಿದೆ. ಪಕ್ಷೇತರ ಅಭ್ಯರ್ಥಿಯೊಬ್ಬರನ್ನು ಬೆಂಬಲಿತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ಇತ್ತ ಬಿಜೆಪಿಯಿಂದ ಕೂಡ ಬಂಡಾಯದ ಬಿಸಿ ಹೆಚ್ಚಾಗಿದ್ದು, ಪಕ್ಷದ ಮುಖಂಡರು ಎಷ್ಟೇ ಸಮಾಧಾನ ಪಡಿಸಲು ಯತ್ನಿಸಿದರೂ ಬಂಡಾಯದ ಬಿಸಿ ತಣ್ಣಗಾಗುತ್ತಿಲ್ಲ. ಅಲ್ಲದೆ ಬಿಜೆಪಿ ಮಾಜಿ ಶಾಸಕ ಹಾಗೂ ಮೂರು ಬಾರಿ ಜಿಲ್ಲಾಧ್ಯಕ್ಷರಾದ ಗುರುಸಿದ್ದನಗೌಡರವರ ಪುತ್ರಿಗೆ ಪಾಲಿಕೆ ಚುನಾವಣೆಯ ಟಿಕೆಟ್ ಕೈ ತಪ್ಪಿದ್ದಕ್ಕೆ 42ನೇ ವಾರ್ಡ್ ನಿಂದ ಪ್ರೀತಿ ರವಿ ಕುಮಾರ್ ಬಂಡಾಯವಾಗಿ ಸ್ಪರ್ಧಿಸಿದ್ದಾರೆ. 33ನೇ ವಾರ್ಡ್ ನಿಂದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಬಂಡಾಯವಾಗಿ ಸ್ಪರ್ಧಿಸಿದ್ದಾರೆ. ಪಕ್ಷದ ವರಿಷ್ಠರು ಪಕ್ಷದಿಂದ ಉಚ್ವಾಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರೂ ಬಂಡಾಯದಿಂದ ಹಿಂದೆ ಸರಿಯುತ್ತಿಲ್ಲ.
ನಗರ, ಪುರಸಭೆ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತರ ನೇಮಕಾತಿ ರದ್ದು
ಒಟ್ಟಾರೆ ಎರಡು ಪಕ್ಷಗಳು ಪಾಲಿಕೆ ಚುನಾವಣೆಗೆ ಕಸರತ್ತು ನಡೆಸುತ್ತಿದ್ದು, ಇತ್ತ ಬಂಡಾಯದ ಬಿಸಿಯಿಂದ ಯಾರಿಗೆ ಲಾಭವಾಗುತ್ತೋ, ಯಾರಿಗೆ ನಷ್ಟವಾಗುತ್ತೋ ನೋಡಬೇಕಿದೆ.