ದಾವಣಗೆರೆಯಲ್ಲಿ ರಾತೋರಾತ್ರಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ವಿರೋಧಿಸಿ ಪ್ರತಿಭಟನೆ
ದಾವಣಗೆರೆ, ಜುಲೈ 6: "ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳನ್ನು ಕೊರೊನಾ ಸೋಂಕಿಲ್ಲದ ನಮ್ಮೂರಿನಲ್ಲಿ ದಫನ್ ಮಾಡಿದ್ದು ಸರಿಯಲ್ಲ' ಎಂದು ಇಲ್ಲಿನ ರಾಮನಗರದ ಎಸ್ಒಜಿ ಕಾಲೊನಿ ನಿವಾಸಿಗಳು ಜಿಲ್ಲಾಡಳಿತ ಮತ್ತು ಪಾಲಿಕೆಯ ವಿರುದ್ಧ ರಾಮನಗರ ರುದ್ರಭೂಮಿ ಎದುರೇ ಪ್ರತಿಭಟನೆ ನಡೆಸಿದರು.
ರಾತ್ರೋರಾತ್ರಿ ಸೋಂಕಿತರ ಶವಗಳನ್ನು ಇಲ್ಲಿ ದಫನ್ ಮಾಡಿದ್ದಾರೆ. ಗ್ರಾಮದ ಪಕ್ಕದಲ್ಲೇ ರುದ್ರಭೂಮಿ ಇದೆ. ಎಸ್ಒಜಿ ಕಾಲೊನಿಯಲ್ಲಿ ಇದುವರೆಗು ಒಂದು ಕೊರೊನಾ ಸೋಂಕಿನ ಪ್ರಕರಣವೂ ಇಲ್ಲ. ಈಗ ಸೋಂಕು ಹರಡುವ ಭೀತಿ ಉಂಟಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಬೆಂಗಳೂರಿನಲ್ಲಿ ಮೃತ ಕೊವಿಡ್ 19 ರೋಗಿಗಳ ಅಂತ್ಯಕ್ರಿಯೆ ಹೇಗೆ?
'ಯಾರಿಗಾದರೂ ಕೆಮ್ಮು, ಜ್ವರ ಬಂದರೆ ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಿ, ಕೊರೊನಾ ಬಾರದಂತೆ ನಾವು ನೋಡಿಕೊಂಡಿದ್ದೆವು. ಶವ ದಫನ ಮಾಡುವಾಗ ಒಂದು ಮಾತು ಪಾಲಿಕೆ ಸದಸ್ಯನಾದ ನನಗಾದರೂ ಹೇಳಬೇಕಿತ್ತು. ಸ್ಮಶಾನವನ್ನು ಸ್ವಚ್ಛಗೊಳಿಸಿ, ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಿ ಸರಿಯಾಗಿ ದಫನ್ ಮಾಡಬೇಕಿತ್ತು. ಕೊರೊನಾ ಇಡೀ ದೇಶಕ್ಕೇ ಬಂದಿರುವ ಸಮಸ್ಯೆ. ಅದನ್ನು ಕದ್ದುಮುಚ್ಚಿ ಮಾಡುವುದು ಸರಿಯಲ್ಲ' ಎಂದು ಸ್ಥಳೀಯ ಪಾಲಿಕೆ ಸದಸ್ಯ ನಾಗರಾಜ್ ದೂರಿದರು.
ಅಂತ್ಯಕ್ರಿಯೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿದೆ. ಸ್ಮಶಾನದಲ್ಲಿ ಅಂತ್ಯಕ್ರಿಯೆಯನ್ನು ನಡೆಸದೇ ಇನ್ನೆಲ್ಲಿ ನಡೆಸೋದು? ಇದಕ್ಕಾಗಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ದಫನ್ ಮಾಡುವುದರಿಂದ ಅಲ್ಲಿ ಕೊರೊನಾ ವೈರಸ್ ಹರಡುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯಿಸಿದರು.