ತಾವೇ ಬೆಳೆಸಿದ್ದ ಮರದಲ್ಲೆ ನೇಣಿಗೆ ಶರಣಾದ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ!
ದಾವಣಗೆರೆ, ಸೆಪ್ಟೆಂಬರ್ 20: ಸಾವಿರಾರು ಮರಗಳನ್ನು ನೆಟ್ಟು ಪೋಷಿಸಿ ಸಾಲುಮರದ ವೀರಾಚಾರಿ ಸೋಮವಾರ ರಾತ್ರಿ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ತಾವೇ ಬೆಳೆಸಿದ್ದ ಮರದಲ್ಲೇ ನೇಣಿಗೆ ಶರಣಾಗಿದ್ದಾರೆ. ನ್ಯಾಯಬೆಲೆ ಅಂಗಡಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ವೀರಾಚಾರಿ ತಮ್ಮ ಹೋರಾಟಕ್ಕೆ ನ್ಯಾಯ ಸಿಗದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪರಿಸರ ಪ್ರೇಮಿ ಸಾಲುಮರದ ಮಿಟ್ಲಕಟ್ಟೆಯ ವೀರಾಚಾರಿ ಆತ್ಮಹತ್ಯೆಗೆ ಪಡಿತರ ವಿತರಣೆಯಲ್ಲಿ ಅಕ್ರಮ ನಡೆಸಲಾಗುತ್ತಿದೆ ಎಂದು ಹೋರಾಟ ಮಾಡಿದ್ದೇ ಕಾರಣ ಎನ್ನಲಾಗಿದೆ. ಅವರು ಗ್ರಾಮದ ನ್ಯಾಯಬೆಲೆ ಅಂಗಡಿಯೊಂದರ ಅವ್ಯವಹಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ತಮ್ಮ ಹೋರಾಟಕ್ಕೆ ನ್ಯಾಯ ಸಿಗದೇ ನೊಂದು ಪ್ರಾಣತ್ಯಾಗ ಮಾಡಿಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ದಲಿತ ಹೋರಾಟಗಾರನ ಸಾವಿನ ಸುತ್ತ ಅನುಮಾನದ ಹುತ್ತ; ಪತ್ನಿ,ನಾದಿನಿ ಮೇಲೆ ಸಂಘಟನೆ ಸಂಶಯ
ಪಡಿತರ ವಿತರಣೆಯಲ್ಲಿ ಜನರಿಗೆ ಕಡಿಮೆ ನೀಡಿ ಮೋಸ ಮಾಡಲಾಗುತ್ತಿದೆ ಎಂದು ವೀರಾಚಾರಿ ಅವರು ಆರೋಪಿಸಿದ್ದರು. ನಿನ್ನೆಯಷ್ಟೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಿದ್ದರು. ಕಳೆದ ಎರಡ್ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದ ವೀರಾಚಾರಿ ಅವರು, ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 3 ಸಾವಿರ ಮರಗಳನ್ನ ಬೆಳೆಸಿದ್ದರು. ನಿತ್ಯ ಪರಿಸರ ಹಾಗೂ ಮರಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು.
ಶಾಮನೂರಿನಿಂದ ಮಿಟ್ಲಕಟ್ಟೆಯವರೆಗೂ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು. ಪರಿಸರ ಪ್ರೇಮಿಯಾಗಿದ್ದ ಅವರು ಯಾರೇ ಹೋಗಿ ಗಿಡಗಳನ್ನು ಕೇಳಿದರೂ ಇಲ್ಲ ಎನ್ನದೇ ಕೊಡುತ್ತಿದ್ದರು. ಶಾಲೆಗಳಲ್ಲಿ, ಸಭೆ ಸಮಾರಂಭಗಳಲ್ಲೂ ಉಡುಗೊರೆಯಾಗಿ ನೀಡುತ್ತಿದ್ದರು. ಇವರ ಪರಿಸರ ಪ್ರೇಮಕ್ಕೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಇನ್ನು ಮಿಟ್ಲಕಟ್ಟೆ ಗ್ರಾಮದ ಮಂದಿ ಯಾರು ಕೂಡ ಊರಿಗೆ ಬರದಂತೆ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಜಿಲ್ಲಾಧಿಕಾರಿ ಆಹಾರ ಇಲಾಖೆ ಅಧಿಕಾರಿಗಳು ಬರುವವರೆಗೂ ಶವವನ್ನು ಕುಣಿಕೆಯಿಂದ ಕೆಳಗಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಜೊತೆಗೆ ನ್ಯಾಯಬೆಲೆ ಅಂಗಡಿ ಮಾಲೀಕ ಸಿದ್ದರಾಮಪ್ಪ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಂದು ತಿಳಿದುಬಂದಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777