Breaking: ಕಾಂಗ್ರೆಸ್ ಪಕ್ಷದಿಂದ ಮಾತ್ರ ಕರ್ನಾಟಕಕ್ಕೆ ಉಜ್ವಲ ಭವಿಷ್ಯ ಎಂದ ರಾಹುಲ್ ಗಾಂಧಿ
ದಾವಣಗೆರೆ, ಆಗಸ್ಟ್ 3: ಕರ್ನಾಟಕದ ಭಾಷೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಉಳಿಸಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ ಎಂದು ಎಐಸಿಸಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಒತ್ತಾಯಿಸಿದರು.
ದಾವಣಗೆರೆಯಲ್ಲಿ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ 75ನೇ ಜನ್ಮದಿನದ ಹಿನ್ನೆಲೆ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ನಾನು ಇಲ್ಲೊಂದು ಸಂಭ್ರಮದ ಕಾರ್ಯಕ್ರಮಕ್ಕೆ ಬಂದು ಭಾಗವಹಿಸುತ್ತಿದ್ದೇನೆ. ನಾನು ಸಾಮಾನ್ಯವಾಗಿ ಯಾವುದೇ ಜನ್ಮದಿನದ ಹಬ್ಬದಲ್ಲಿ ಭಾಗವಹಿಸುವುದಿಲ್ಲ. ಆದರೆ ಸಿದ್ದರಾಮಯ್ಯನವರೊಂದಿಗಿನ ವಿಶೇಷ ಬಾಂಧವ್ಯ ನನ್ನನ್ನು ಇಲ್ಲಿಯವರೆಗೂ ಕರೆ ತಂದಿದೆ ಎಂದು ಹೇಳಿದರು.
ಒಬ್ಬ ವ್ಯಕ್ತಿಯಾಗಿ ನಾನು ಸಿದ್ದರಾಮಯ್ಯನವರನ್ನು ತುಂಬಾ ಇಷ್ಟಪಡುತ್ತೇನೆ. ಅವರ ವಿಚಾರಗಳಿಗೂ ನನ್ನ ಸಹಮತವಿದೆ. ಬಡವರು ಮತ್ತು ಶೋಷಿತರ ಕುರಿತು ಸಿದ್ದರಾಮಯ್ಯ ಸಿದ್ದಾಂತಗಳನ್ನು ನಾನು ಬೆಂಬಲಿಸುತ್ತೇನೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ಸರ್ಕಾರವನ್ನು ಸಿದ್ದರಾಮಯ್ಯ ಮುನ್ನಡೆಸಿದ್ದರ ಬಗ್ಗೆ ನನಗೆ ಹಮ್ಮೆ ಹಾಗೂ ಸಂತೋಷವಿದೆ. ಕರ್ನಾಟಕದ ಎಲ್ಲಾ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯರಿಗೆ ಒಂದು ದೂರದೃಷ್ಟಿಯಿತ್ತು. ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವ ಅವರ ಬದ್ಧತೆಯನ್ನು ನಾನು ಮೆಚ್ಚಿಕೊಳ್ಳುತ್ತೇನೆ.
ಬಿಜೆಪಿ ಸರ್ಕಾರದಲ್ಲಿ ಮೊದಲಿನ ಪರಿಸ್ಥಿತಿಯಿಲ್ಲ:
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕವು ಮೊದಲಿನ ಪರಿಸ್ಥಿತಿಯಿಲ್ಲ. ರಾಜ್ಯದಲ್ಲಿ ಬಿಜೆಪಿಯು ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ. ಬಸವಣ್ಣನವರ ಪ್ರತಿಮೆ ಎದುರು ಪ್ರತಿಜ್ಞೆ ಮಾಡಿದ ನಂತರವೂ ಅವರು ಜನರನ್ನು ಕೊಳ್ಳೆ ಹೊಡೆಯುವುದನ್ನು ಮುಂದುವರಿಸಿದ್ದಾರೆ.
ಸಂಸ್ಕೃತಿ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ:
ನಾವು ಕರ್ನಾಟಕದ ಭಾಷೆ ಮತ್ತು ಸಂಸ್ಕೃತಿಯನ್ನು ನಾವು ನಂಬುತ್ತೇವೆ. ಅದೇ ಸಂಸ್ಕೃತಿ, ಭಾಷೆ ಮತ್ತು ಇತಿಹಾಸವನ್ನು ಕಾಪಾಡುವುದಕ್ಕೆ ನಮಗೆ ಅಧಿಕಾರ ಬೇಕಾಗಿದೆ. ಬಿಜೆಪಿಯವರು ಕರ್ನಾಟಕದ ಮೇಲೆ ಒಂದೇ ವಿಷಯವನ್ನು ಹೇರುವುದಕ್ಕೆ ಮುಂದಾಗಿದ್ದಾರೆ. ಬಿಜೆಪಿಯು ರಾಜ್ಯದಲ್ಲಿ ಒಡೆದು ಆಳುವ ನೀತಿಯನ್ನು ಅನುಸಿರುತ್ತಿದೆ ಎಂದು ಸಂಸದ ರಾಹುಲ್ ಗಾಂಧಿ ಆರೋಪಿಸಿದರು.
ಕರ್ನಾಟಕದಲ್ಲಿ ಭಾಗ್ಯಗಳನ್ನು ಸ್ಮರಿಸಿಕೊಂಡ ರಾಹುಲ್ ಗಾಂಧಿ:
ರಾಜ್ಯದ ಜನರು ಅನ್ನಭಾಗ್ಯ, ಕ್ಷೀರಭಾಗ್ಯ, ಪಶು ಭಾಗ್ಯ ಮತ್ತು ಮಧ್ಯಾಹ್ನದ ಊಟವನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ರೀತಿಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಕಾಂಗ್ರೆಸ್ ಬದ್ಧವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಉತ್ತಮ ಆಹಾರವನ್ನು ನೀಡುತ್ತಿದ್ದೆವು ಎಂದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಮೊದಲಿನಂತಿಲ್ಲ:
ನಾವು ಅಮೆರಿಕಾದಲ್ಲಿ ನಿಂತು ಇಂದಿನ ಕರ್ನಾಟಕದ ಪರಿಸ್ಥಿತಿಯ ಬಗ್ಗೆ ಪ್ರಶ್ನೆ ಮಾಡಿದರೆೆ, ಅವರು ಏನು ಹೇಳಾತ್ತಾರೆ ಗೊತ್ತೆ. ಕರ್ನಾಟಕವು ಈಗ ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಹಿಂದೆಂದೂ ಎದುರಿಸಿರಲಿಲ್ಲ ಎಂದು ಅಮೆರಿಕಾದಲ್ಲಿ ವಾಸವಿರುವ ಕನ್ನಡಿಗರು ಹೇಳುತ್ತಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವು ಅಸ್ತಿತ್ವದಲ್ಲಿದ್ದಾಗ ಎಲ್ಲಾ ಸಮುದಾಯದ ಜನರು ಶಾಂತಿ ಮತ್ತು ಸಾಮರಸ್ಯದಿಂದ ಬದುಕುವ ವಾತಾವರಣವಿತ್ತು. ಯಾವುದೇ ರೀತಿ ಭಯದ ವಾತಾವಣವಿರಲಿಲ್ಲ. ಇನ್ನು, ಯಾವುದೇ ಉದ್ಯಮ ಯಶಸ್ವಿಯಾಗಬೇಕಾದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಇರಬೇಕಾಗುತ್ತದೆ ಎಂದು ಹೇಳಿದರು.
ನೋಟು ಅಮಾನ್ಯೀಕರಣವೇ ಬಿಜೆಪಿಯ ದೊಡ್ಡ ಸಾಧನೆ:
ಕೇಂದ್ರ ಸರ್ಕಾರದ ಅತಿದೊಡ್ಡ ಸಾಧನೆ ಎಂದರೆ ಅದು ನೋಟು ಅಮಾನ್ಯೀಕರಣ ಆಗಿದೆ. ನೋಟ್ ಬ್ಯಾನ್ ಮಾಡಿದ್ದರಿಂದ ಸಣ್ಣ ಪುಟ್ಟ ವ್ಯಾಪಾರಿಗಳು ಬೀದಿಗೆ ಬಂದರು. ನೋಟ್ ಬ್ಯಾನ್ ಎನ್ನುವುದು ಸಣ್ಣ ವ್ಯಾಪಾರಿಗಳು, ವಹಿವಾಟುದಾರರ ಬಳಿಯಿದ್ದ ಹಣವನ್ನೆಲ್ಲ ಕೇವಲ ನಾಲ್ಕರಿಂದ ಐದು ಜನ ಉದ್ಯಮಿಗಳ ಕೈಗೊಪ್ಪಿಸುವುದೇ ಆಗಿತ್ತು. ಎರಡನೇಯದಾಗಿ ಜಿಎಸ್ ಟಿ ಮೂಲಕ ಸಣ್ಣ ವ್ಯಾಪಾರಿಗಳಿಗೆ ಬರೆ ಹಾಕಿ, ದೊಡ್ಡ ಉದ್ಯಮಿಗಳಿಗೆ ಸಹಾಯ ಮಾಡಿದೆ.
ನೋಟ್ ಬ್ಯಾನ್ ಮತ್ತು ಜಿಎಸ್ ಟಿ ಜಾರಿಗೊಳಿಸಿದ್ದರಿಂದ ಏನು ಲಾಭ ಎಂದು ಸಣ್ಣ ಉದ್ಯಮಿಗಳು ಮತ್ತು ವ್ಯಾಪಾರಿಗಳನ್ನು ಪ್ರಶ್ನೆ ಮಾಡಿ ನೋಡಿ. ಇದೊಂದು ದೊಡ್ಡ ಆರ್ಥಿಕ ದುರಂತ ಎಂದು ಹೇಳುತ್ತಾರೆ. ಇಡೀ ಭಾರತದಲ್ಲಿನ ಸಂಪತ್ತನ್ನು ಮೂರರಿಂದ ನಾಲ್ಕು ಉದ್ಯಮಿಗಳಿಗೆ ವಹಿಸಲು ಈ ಯೋಜನೆಗಳನ್ನು ಜಾರಿಗೊಳಿಸಿದರು ಎಂದು ಅವರೇ ನಿಮಗೆ ಹೇಳುತ್ತಾರೆ.