ದಾವಣಗೆರೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಿತ್ತಾಟಕ್ಕಿಳಿದ ಸಂಸದ -ಶಾಸಕ
ದಾವಣಗೆರೆ, ಮೇ 09: ಏಕವಚನದಲ್ಲಿ ಸಂಸದ ಸಿದ್ದೇಶ್ವರ ಹಾಗೂ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬೈದಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ದಾವಣಗೆರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದಿದೆ.
ಕೊರೊನಾ ಸೋಂಕಿನ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹಾಗೂ ವೈದ್ಯಕೀಯ ಸಚಿವ ಡಾ.ಸುಧಾಕರ್ ಸಮ್ಮುಖದಲ್ಲಿ ಉಚಿತವಾಗಿ ಶುದ್ಧ ಕುಡಿಯುವ ಘಟಕದ ನೀರನ್ನು ನೀಡಬೇಕೆಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಒತ್ತಾಯಿಸಿದ್ದು, ಈ ಸಂದರ್ಭ, ಹಣ ನಿಮ್ಮಪ್ಪನ ಮನೆಯಿಂದ ಕೊಡ್ತಿಯೇನೋ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿದ್ದಾರೆ.
ಸಂಸದರ ಮಾತಿಗೆ ಮತ್ತೆ ಶಾಸಕ ಮಾಡಾಳ್ ಮಾತು ಬೆಳೆಸಿದ್ದಾರೆ. ಕುರ್ಚಿಯಿಂದ ಎದ್ದು ಸಂಸದ ಸಿದ್ದೇಶ್ವರ ಅವರು ಮಾಡಾಳು ವಿರೂಪಾಕ್ಷಪ್ಪ ಬಳಿಗೆ ಬಂದು, ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿ ಗಲಾಟೆಗೆ ಮುಂದಾಗಿದ್ದಾರೆ. ಈ ವೇಳೆ ಎಸ್ಪಿ ಹನುಮಂತರಾಯ ಮಧ್ಯ ಪ್ರವೇಶಿಸಿ ಗಲಾಟೆಗೆ ಬ್ರೇಕ್ ಹಾಕಿದ್ದು, ಸಂಸದ ಹಾಗೂ ಶಾಸಕರ ವರ್ತನೆಯಿಂದ ಮೂಕಪ್ರೇಕ್ಷಕರಾಗಿದ್ದರು ಸಚಿವರು. ಅಧಿಕಾರಿಗಳ ಸಭೆಯಲ್ಲಿ ರಾಜಕಾರಣಿಗಳ ಮಾತಿನ ಚಕಮಕಿಯಾಗಿದ್ದು, ತಮ್ಮೊಳಗೆ ಒಗ್ಗಟ್ಟು ಇಲ್ಲ ಎಂದು ತೋರಿಸಿಕೊಂಡಿದ್ದಾರೆ.