ದಾವಣಗೆರೆಯಲ್ಲಿ ಕುರ್ಚಿಯೊಂದಿಗೆ ಅಣುಕು ಪ್ರತಿಭಟನೆ
ದಾವಣಗೆರೆ, ಜುಲೈ 20: ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಅದರ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೇ ಸರ್ಕಾರ ಉಳಿಸಿಕೊಳ್ಳಲು ಹಾಗೂ ಸರ್ಕಾರ ಕೆಡವಲು ಜನಪ್ರತಿನಿಧಿಗಳು ಹೆಣಗುತ್ತಿದ್ದಾರೆ. ಹೀಗಿರುವಾಗ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಜನಪ್ರತಿನಿಧಿಗಳ ವಿರುದ್ಧ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯಕರ್ತರು ದಾವಣಗೆರೆಯಲ್ಲಿ ವಿನೂತನವಾಗಿ ಅಣುಕು ಪ್ರತಿಭಟನೆ ನಡೆಸಿದರು.
ತಪ್ಪಿಲ್ಲ ಕುಡಿಯುವ ನೀರಿಗೆ ಬವಣೆ; ಸಿರುಗುಪ್ಪ ಗ್ರಾಮಸ್ಥರ ಪ್ರತಿಭಟನೆ
ನಗರದ ಅಂಬೇಡ್ಕರ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಜನಪ್ರತಿನಿಧಿಗಳ ಮುಖವಾಡ ಹಾಕಿಕೊಂಡು ಕುರ್ಚಿಗಾಗಿ ಕಿತ್ತಾಡುತ್ತಿರುವುದನ್ನೆ ಅಣಕು ಮಾಡಿ ಪ್ರತಿಭಟನೆ ನಡೆಸಿದರು. ಕಳೆದ 15 ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ನೋಡಿ ಜನ ರೋಸಿ ಹೋಗಿದ್ದಾರೆ. ಸರಿಯಾಗಿ ಮಳೆಯಿಲ್ಲದೆ ಸಾಲದ ಶೂಲದಲ್ಲಿ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕುಡಿಯುವ ನೀರೂ ಸಿಗುತ್ತಿಲ್ಲ. ಇಂಥದ್ದರಲ್ಲಿ ಕುರ್ಚಿಗಾಗಿ ಮೂರೂ ಪಕ್ಷಗಳು ಕಚ್ವಾಡುತ್ತಿವೆ. ಇದರಿಂದ ರಾಜ್ಯದ ಮರ್ಯಾದೆಯನ್ನು ಮೂರು ಪಕ್ಷಗಳು ತೆಗೆಯುತ್ತಿವೆ. ಜನರ ತೆರಿಗೆ ಹಣದಿಂದ ಐಶಾರಾಮಿ ರೆಸಾರ್ಟ್ ನಲ್ಲಿ ಇವರೆಲ್ಲ ಕಾಲ ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರು ಮಧ್ಯ ಪ್ರವೇಶಿಸಿ ತಕ್ಕ ಪಾಠ ಕಲಿಸಬೇಕು ಎಂದು ಕರ್ನಾಟಕ ಯುವಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲೇಶ್ ಆಗ್ರಹಿಸಿದರು. ಅಂಬೇಡ್ಕರ್ ಸರ್ಕಲ್ ನಿಂದ ಎಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.