ಉಕ್ರೇನ್ನಲ್ಲಿ ಮೃತಪಟ್ಟ ನವೀನ್ ಹೆತ್ತವರಿಂದ ಮೋದಿ ಭೇಟಿ: ಪಿಎಂ ಬಳಿ ಅವರ ಬೇಡಿಕೆ ಏನು?
ದಾವಣಗೆರೆ, ಜೂನ್ 19: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ವೇಳೆ ಪ್ರಾಣಬಿಟ್ಟ ವೈದ್ಯಕಿಯ ವಿದ್ಯಾರ್ಥಿ ನವೀನ್ ತಂದೆ, ತಾಯಿ ಹಾಗೂ ಸಹೋದರನನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡುವ ದಿನಾಂಕ ನಿಗದಿಯಾಗಿದೆ. ಜೂ. 20ಕ್ಕೆ ಬೆಂಗಳೂರಿಗೆ ಬರಲಿರುವ ಮೋದಿ ಜೊತೆ ಹತ್ತು ನಿಮಿಷಗಳ ಕಾಲ ಕುಟುಂಬದ ಸದಸ್ಯರ ಜೊತೆ ಚರ್ಚೆ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಕಾರ್ಯಾಲಯದಿಂದ ಕರೆ ಬಂದಿದೆ. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೇ ಖುದ್ದು ಶೇಖರಪ್ಪ ಗ್ಯಾನಗೌಡರಿಗೆ ಫೋನ್ ಮಾಡಿ ಬೆಂಗಳೂರಿಗೆ ಬರುವಂತೆ ಮನವಿ ಮಾಡಿದ್ದಾರೆ. ಮೋದಿಯನ್ನು ಸೋಮವಾರ ಎಷ್ಟೊತ್ತಿಗೆ ಭೇಟಿ ಆಗಲಿದ್ದಾರೆ ಎಂಬ ಸಮಯ ನಿಗದಿಯಾಗಿಲ್ಲ. ಆದರೆ ಶೇಖರಪ್ಪ, ಪತ್ನಿ ವಿಜಯಲಕ್ಷ್ಮೀ ಹಾಗೂ ಈ ದಂಪತಿ ಹಿರಿಯ ಪುತ್ರ ಹರ್ಷ ಜೊತೆಗೆ ಬರುವಂತೆಯೂ ಹೇಳಿದ್ದಾರೆ. ಇದಕ್ಕೆ ಒಪ್ಪಿರುವ ಶೇಖರಪ್ಪ ದಂಪತಿಗೆ ಸಿಲಿಕಾನ್ ಸಿಟಿಯತ್ತ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಲ್ಲಿ ಪಿಎಚ್ ಡಿ ವ್ಯಾಸಂಗ ಮಾಡುತ್ತಿರುವ ಹರ್ಷ ನಮ್ಮೊಟ್ಟಿಗೆ ಸೇರಲಿದ್ದಾನೆ ಎಂದು ಮೃತ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರು ತಿಳಿಸಿದರು.
ಮೋದಿ ಬೆಂಗಳೂರು ಭೇಟಿ; ಈ ಶಾಲೆ, ಕಾಲೇಜುಗಳಿಗೆ ರಜೆ
ಪ್ರಧಾನಿ ಕಾರ್ಯಾಲಯ ಹಾಗೂ ಸಿಎಂ ಬೊಮ್ಮಾಯಿ ಕರೆ ಮಾಡಿ ಮೋದಿ ಅವರು ನಿಮ್ಮನ್ನು ಭೇಟಿ ಮಾಡಲು ಇಚ್ಚಿಸಿದ್ದು ಬರುವಂತೆ ಹೇಳಿದ್ದನ್ನು ಶೇಖರಪ್ಪ ಖಚಿತಪಡಿಸಿದ್ದಾರೆ. ದಾವಣಗೆರೆಯಿಂದ 23 ಕಿಲೋಮೀಟರ್ ದೂರದಲ್ಲಿರುವ ಚಳಗೇರಿ ಗ್ರಾಮಕ್ಕೆ ಮಾಧ್ಯಮದವರು ಹೋದಾಗ ಶೇಖರಪ್ಪ ಅವರು ಈ ವಿಷಯ ತಿಳಿಸಿದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಾದರೂ ಹರಿಹರಕ್ಕೆ ತುಂಬಾ ಹತ್ತಿರದಲ್ಲಿರುವ ಗ್ರಾಮ ಇದು.
ಪ್ರಧಾನಿ ಆಗಮನ: ಭದ್ರತೆಗಾಗಿ 2,100 ಪೊಲೀಸ್ ಸಿಬ್ಬಂದಿ ನಿಯೋಜನೆ
ಮೋದಿಗೆ ಕೃತಜ್ಞತೆ ಸಲ್ಲಿಸಲಿರುವ ಕುಟುಂಬ
ಉಕ್ರೇನ್ನ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ನವೀನ್ ಮಾರ್ಚ್ 1ರ ಶಿವರಾತ್ರಿ ಹಬ್ಬದ ದಿನದಂದು ಮೃತಪಟ್ಟಿದ್ದರು. ಆ ಬಳಿಕ ಅಂದರೆ 21 ದಿನಗಳ ಬಳಿಕ ಮಾರ್ಚ್ 21 ರಂದು ಚಳಗೇರಿಗೆ ಬಂದಿತ್ತು. ಆಗ ಪ್ರಧಾನಿ ಮೋದಿ ಅವರೇ ಕರೆ ಮಾಡಿ ಶೇಖರಪ್ಪರ ಜೊತೆ ಮಾತನಾಡಿ ಸಮಾಧಾನ ಮಾಡಿದ್ದರು. ಆ ಬಳಿಕ ಮೃತದೇಹ ವಾಪಸ್ ತರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಅವರಿಗೆ ಕೃತಜ್ಞತೆ ಸಲ್ಲಿಸಬೇಕೆಂಬ ಆಸೆ ನವೀನ್ ಕುಟುಂಬಕ್ಕೆ ಇತ್ತು. ಅದು ಈಡೇರಿರಲಿಲ್ಲ. ಈಗ ಬೆಂಗಳೂರಿನಲ್ಲಿ ಮೋದಿ ಭೇಟಿಯಾಗುತ್ತಿರುವುದು ತುಂಬಾನೇ ಖುಷಿ ಕೊಟ್ಟಿದೆ. ಮಗನನ್ನು ಕಳೆದುಕೊಂಡೆವು ಎಂಬ ದುಃಖ ಈಗಲೂ ಇದೆ. ಆದರೆ ಆತನ ಮೃತದೇಹ ಇಲ್ಲಿಗೆ ಬಂದಿದ್ದು, ಅಂತಿಮ ದರ್ಶನ ಪಡೆದಿದ್ದು ಸ್ವಲ್ಪ ಸಮಾಧಾನ ತಂದಿದೆ. ಅವರನ್ನು ಭೇಟಿಯಾದಾಗ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಶೇಖರಪ್ಪ ತಿಳಿಸಿದರು.
ವಿದ್ಯಾರ್ಥಿಗಳ ನೆರವಿಗೆ ಮನವಿ
ಯುದ್ದದ ಕಾರಣ ಉಕ್ರೇನ್ ನಿಂದ ಬಂದಿರುವ ಕರ್ನಾಟಕದ ಮೆಡಿಕಲ್ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಇಲ್ಲಿ ಅನುವು ಮಾಡಿಕೊಡಬೇಕು. ನಮಗೂ ಫೋನ್ ಮಾಡಿ ಆರೋಗ್ಯ ವಿಚಾರಿಸುವ ನವೀನ್ ಸ್ನೇಹಿತರು ವಿದ್ಯಾಭ್ಯಾಸ ಡೋಲಾಯಮಾನ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇವರಿಗೆ ಧೈರ್ಯ ಹೇಳುವ ಜೊತೆಗೆ ವಿದ್ಯಾಭ್ಯಾಸಕ್ಕೆ ಅನುಮತಿ ನೀಡಿ ಎಂದು ಮನವಿ ಮಾಡುವುದಾಗಿ ಹೇಳಿದರು.
ನನ್ನ ಮಗ ಸಾವನ್ನಪ್ಪಿದ ಬಳಿಕ ಉಕ್ರೇನ್ ನಲ್ಲಿನ ವಿದ್ಯಾರ್ಥಿಗಳು ಹಾಗೂ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರುವ ಪ್ರಯತ್ನ ವೇಗ ಪಡೆಯಿತು. ಕೇಂದ್ರ ಸರ್ಕಾರವು ವಿಶೇಷ ವಿಮಾನ ಹಾಗೂ ಗಡಿಭಾಗದಲ್ಲಿ ಕೇಂದ್ರ ಸಚಿವರನ್ನು ಕಳುಹಿಸಿ ಸಾವಿರಾರು ಮಂದಿ ಪ್ರಾಣ ಉಳಿಸಿ ಸುರಕ್ಷಿತವಾಗಿ ಕರೆತಂದಿತು. ನನ್ನ ಮಗನ ಪ್ರಾಣ ಹೋದರೂ, ಸಾವಿರಾರು ಜನರ ರಕ್ಷಣೆಗೆ ನನ್ನ ಮಗ ಕಾರಣವಾಗಿದ್ದಕ್ಕೆ ನಮಗೆ ಹೆಮ್ಮೆ ಇದೆ ಎಂದು ಹೇಳಿದರು.
ಊರಿನಲ್ಲಿಆಸ್ಪತ್ರೆ ಕಟ್ಟುವ ಕನಸು
ನನ್ನ ಮಗ ನವೀನ್ ಗೆ ಸಿಟಿಯಲ್ಲಿ ಸೇವೆ ಮಾಡಬೇಕೆಂಬುದಕ್ಕಿಂತ ಹಳ್ಳಿ ಜನರಿಗೆ ಒಳ್ಳೆಯ ಚಿಕಿತ್ಸೆ ಕೊಡಿಸಬೇಕೆಂಬ ಆಸೆ ಇತ್ತು. ಅದಕ್ಕಾಗಿಯೇ ಊರಿನಲ್ಲಿದ್ದ ನಿವೇಶನದಲ್ಲಿ ಆಸ್ಪತ್ರೆ ಕಟ್ಟಿಸಿ ಚಿಕಿತ್ಸೆ ನೀಡಿ ಬಡವರಿಗೆ ಸಹಾಯ ಮಾಡಬೇಕು. ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆರೋಗ್ಯದಲ್ಲಿ ಏನೇ ಸಮಸ್ಯೆಯಾದರೂ ಸ್ಪಂದಿಸಬೇಕೆಂದುಕೊಂಡಿದ್ದ. ಮನೆ ಕಟ್ಟಬೇಕು. ಎರಡು ವರ್ಷ ವಿದ್ಯಾಭ್ಯಾಸ ಮುಗಿದ ಬಳಿಕ ಮನೆ ನಿರ್ಮಾಣ ಮಾಡುವ ಯೋಜನೆ ಇತ್ತು. ಅದ್ಯಾವುದೂ ಈಡೇರಲೇ ಇಲ್ಲ ಎಂದು ಬೇಸರ ತೋಡಿಕೊಂಡರು.
ಮಗ ಎಲ್ಲರ ಹೃದಯದಲ್ಲಿದ್ದಾನೆ
ನವೀನ್ ತಾಯಿ ವಿಜಯಲಕ್ಷ್ಮಿ ಮಾತನಾಡಿ ನನ್ನ ಮಗನ ಮೃತದೇಹ ಉಕ್ರೇನ್ನಿಂದ ಇಲ್ಲಿಗೆ ಬರುವಂತೆ ಮಾಡಿದ ಮೋದಿ ಅವರಿಗೆ ನೇರವಾಗಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಬೇಕೆಂದುಕೊಂಡಿದ್ದೆವು. ಆದರೆ ಈಗ ಈಡೇರುತ್ತಿದೆ. ನಮ್ಮೂರಿಗೆ ಮೋದಿ ಕರೆಸಬೇಕೆಂದು ಗ್ರಾಮಸ್ಥರು ಇಚ್ಚಿಸಿದ್ದರಾದರೂ ಆಗಿರಲಿಲ್ಲ. ಈಗ ನಮಗೆ ಅವಕಾಶ ಸಿಕ್ಕಿದೆ. ಅತಂತ್ರದಲ್ಲಿರುವ ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾಭ್ಯಾಸಕ್ಕೆ ಇಲ್ಲಿ ದಯವಿಟ್ಟು ಅನುಮತಿ ನೀಡಿ ಎಂಬ ಮನವಿ ಮಾಡುವುದಾಗಿ ತಿಳಿಸಿದರು.
ಖಾರ್ಕಿವ್ ನಲ್ಲಿ ಒಂದೇ ಹಾಸ್ಟೆಲ್ ನಲ್ಲಿ ನವೀನ್ ಜೊತೆ ಸ್ನೇಹಿತರು ಇದ್ದರು. ಅವನು ಪರೋಪಕಾರಿಯಾಗಿದ್ದ. ಸ್ನೇಹಿತರಿಗೆ ಕರ್ಫ್ಯೂ ಸಡಿಲಿಕೆ ವೇಳೆ ಮಾರ್ಕೆಟ್ ಗೆ ಆಹಾರ ತರಲು ಹೋಗಿದ್ದ. ಈ ವೇಳೆ ಬಾಂಬ್ ಶೆಲ್ಟರ್ ದಾಳಿಗೆ ನವೀನ್ ಮೃತಪಟ್ಟಿದ್ದ ಎಂದು ಮಾಹಿತಿ ಸಿಕ್ಕಿತ್ತು. ನೂರಾರು ತನ್ನ ಸ್ನೇಹಿತರನ್ನು ಸುರಕ್ಷಿತವಾಗಿ ಕಳಿಸಿಕೊಟ್ಟಿದ್ದ ನನ್ನ ಮಗ. ಸ್ವಾರ್ಥಿಯಾಗಿದ್ದರೆ ಆತ ಬಂದುಬಿಡುತ್ತಿದ್ದ. ಸಾವಿರಾರು ಜನರ ಪ್ರಾಣ ಉಳಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ. ತಂದೆ ತಾಯಿ ಹೆಸರು ಮಕ್ಕಳನ್ನು ಪ್ರಸಿದ್ಧಿ ಆಗುವಂತೆ ಮಾಡುತ್ತಾರೆ ಎಂಬ ನಾಣ್ಣುಡಿ ಇದೆ. ಅದರಂತೆ ಆತನೂ ದೇಶದಲ್ಲಿ ಹೆಸರು ಮಾಡಿದ. ನಮ್ಮನ್ನೂ ಪರಿಚಯಿಸಿದ. ಆತ ಇಲ್ಲ ಎಂಬುದಕ್ಕಿಂತ ಎಲ್ಲರ ಹೃದಯದಲ್ಲಿ ಇದ್ದಾನೆ ಎಂಬ ಆತ್ಮತೃಪ್ತಿ ಇದೆ ಎಂದು ಹೇಳಿದರು.